ಮಂಗಳೂರು, ಸೆ.24: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ರಾಜ್ಯದಿಂದ ಕೇಂದ್ರಕ್ಕೆ ಶಿಫಾರಸು ಸಲ್ಲಿಕೆಯಾಗಿದ್ದು ಗೃಹ ಸಚಿವರಿಗೂ ಮನವರಿಕೆ ಮಾಡಲಾಗಿದೆ. ಈ ಮುಖೇನ ಶೀಘ್ರದಲ್ಲಿ ತುಳು ಭಾಷೆಗೆ ಸಾಂವಿಧಾನಿಕ ಸ್ಥಾನಮಾನ ಪ್ರಾಪ್ತವಾಗಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ, ವಿಶೇಷ ಸಾಧಕರಿಗೆ ರಾಜ್ಯ ಪುರಸ್ಕಾರವನ್ನು ಪ್ರದಾನಿಸಿ ಮಾತನಾಡಿದರು, ತುಳು ಭಾಷೆ, ಸಂಸ್ಕೃತಿಯ ಉಳಿವಿಗಾಗಿ ತುಳು ಸಾಹಿತ್ಯ ಅಕಾಡೆಮಿ ಯಶಸ್ವಿ ಕಾರ್ಯಗಳನ್ನು ನಡೆಸಿದೆ. 9 ಕೋ.ರೂ. ವೆಚ್ಚದಲ್ಲಿ ತುಳು ಭವನ ನಿರ್ಮಾಣ ಕಾಮಗಾರಿ ಶೀಘ್ರ ಪೂರ್ಣ ವಾಗಲಿದೆ. ದಯಾನಂದ ಜಿ.ಕತ್ತಲ್ಸಾರ್ ಹಾಗೂ ಅವರ ತಂಡ ಅಕಾಡೆಮಿಯಲ್ಲಿ ಉತ್ತಮ ಸೇವೆ ಸಲ್ಲಿಸಿರುವುದು ಶ್ಲಾಘನೀಯ ಎಂದರು.
ಸುಸಜ್ಜಿತ ತುಳುಭವನ
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ತುಳು ಭಾಷೆಯ ಬೆಳವಣಿಗೆಗಾಗಿ ಬಿ.ಎಸ್ ಯಡಿಯೂರಪ್ಪನವರು ಹಾಗೂ ಬಸವರಾಜ ಬೊಮ್ಮಾಯಿ ಅವರು ಉತ್ತಮ ಅನುದಾನ ಹಾಗೂ ಸಹಕಾರ ನೀಡಿದ್ದಾರೆ. ಸುಸಜ್ಜಿತ ತುಳುಭವನ ಸಾಕಾರವಾಗುತ್ತಿದೆ ಇದು ತುಳುಭಾಷಾ ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶೇಷ ಮಹತ್ವ ನೀಡಲಿದೆ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಅಧ್ಯಕ್ಷತೆ ವಹಿಸಿ ನಮ್ಮ ತುಳುನಾಡಿನ ಪರಂಪರೆ, ಪ್ರಾಚೀನತೆಯ ಉಳಿವಿಗಾಗಿ ನಿರಂತರ ಕಾರ್ಯಕ್ರಮಗಳ ಅನುಷ್ಠಾನದ ಜೊತೆಗೆ ಹಲವು ತುಳು ಭಾಷಿಗರ ದಾನಿಗಳ ಸಹಕಾರದಿಂದ ತುಳು ಅಕಾಡೆಮಿ ಜನಮಾನಸದಲ್ಲಿ ಉಳಿಯುವಂತಹ ಕೆಲಸ ಮಾಡಿದೆ ಎಂದು ಅನುದಾನದ ವಿನಿಯೋಗ ಹಾಗೂ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ತುಳು ಅಕಾಡೆಮಿಯ ತ್ರೈಮಾಸಿಕ “ಮದಿಪು” ಸಂಚಿಕೆಯನ್ನು, “ಮಂದಾರ ರಾಮಾಯಣ”, “ಶ್ರೀ ಆದಿನಾಗ ಬ್ರಹ್ಮ ಮೊಗೇರ್ಲು ದೈವೊಲೆನ ಸಂದಿ”, “ಮಂಕುತಿಮ್ಮನ ಕಗ್ಗ”, “ಮದಪ್ಪೆರಾವಂದಿ ತುಳುವೆರ್” 10 ಮಂದಿ ಸಾಧಕರ ಜೀವನ ಚರಿತ್ರೆಯ ಕೃತಿಗಳನ್ನು ಗಣ್ಯರು ಅನಾವರಣಗೊಳಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಶುಭ ಹಾರೈಸಿದರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹಾಗೂ ಅದಾನಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಕಿಶೋರ್ ಆಳ್ವ ಮಾತನಾಡಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ| ಎಂ. ಮೋಹನ ಆಳ್ವ ತಮ್ಮ ಅಭಿನಂದನಾ ನುಡಿಯಲ್ಲಿ ತುಳುಭಾಷೆಯ ಬೆಳವಣಿಗೆಯೊಂದಿಗೆ ಸಂಸ್ಕೃತಿ-ಸಂಸ್ಕಾರವನ್ನು ಅರಳಿಸುವ ಕೆಲಸ ನಿರಂತರವಾಗಿ ಅಕಾಡೆಮಿ ನಡೆಸುತ್ತಿರುವುದರಿಂದ ಭಾಷೆಯೊಂದಿಗೆ ಪರಂಪರೆ ಉಳಿದಿದೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ., ಪೂರ್ಣಿಮಾ, ರಿಜಿಸ್ಟ್ರಾರ್ ಕವಿತಾ ಹಾಗೂ ಕಾರ್ಯಕ್ರಮದ ಸದಸ್ಯ ಸಂಚಾಲಕರಾದ ನರೇಂದ್ರ ಕೆರೆಕಾಡು ಅಕಾಡೆಮಿಯ ಸದಸ್ಯರಾದ ಸರ್ವೋತ್ತಮ ಶೆಟ್ಟಿ ದುಬೈ, ಲೀಲಾಕ್ಷ ಕರ್ಕೇರಾ, ರವೀಂದ್ರ ಶೆಟ್ಟಿ ಬಳಂಜ, ನಾಗೇಶ್ ಕುಲಾಲ್,ವಿಜಯಲಕ್ಷ್ಮೀ ಪಿ ರೈ, ಮಲ್ಲಿಕಾ ಅಜಿತ್ ಶೆಟ್ಟಿ, ತಾರಾ ಉಮೇಶ್ ಆಚಾರ್ಯ, ಡಾ| ಆಕಾಶ್ ರಾಜ್ ಜೈನ್, ಕಾಂತಿ ಶೆಟ್ಟಿ, ಚೇತಕ್ ಪೂಜಾರಿ, ಪಿ.ಎಂ.ರವಿ, ಕಲಾವತಿ ದಯಾನಂದ್, ಸಂತೋಷ್ ಪೂಜಾರಿ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯರಾದ ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ, ಕಡಬ ದಿನೇಶ್ ರೈ ನಿರೂಪಿಸಿದರು.
ಸಾಧಕರಿಗೆ ಪ್ರಶಸ್ತಿ ಪ್ರದಾನ, ಸಮ್ಮಾನ
2021 ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾದ ಸಂಜೀವ ಬಂಗೇರ ತಲಪಾಡಿ (ತುಳು ಜಾನಪದ ಕ್ಷೇತ್ರ), ಕೃಷ್ಣಪ್ಪ ಉಪ್ಪೂರು (ತುಳು ನಾಟಕ/ಸಿನಿಮಾ), ಉಲ್ಲಾಸ ಕೃಷ್ಣಪೈ ಪುತ್ತೂರು (ತುಳು ಸಾಹಿತ್ಯ), 2021 ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆಯಾದ ಯೋಗೀಶ್ ಕಾಂಚನ್ ಬೈಕಂಪಾಡಿ (ಕವನ), ಅಕ್ಷತಾರಾಜ್ ಪೆರ್ಲ (ನಾಟಕ), ಡಾ| ಅಶೋಕ ಆಳ್ವ ಸುರತ್ಕಲ್ (ಅಧ್ಯಯನ), 2021ನೇ ಸಾಲಿನ ವಿಶೇಷ ಯುವ ಸಾಧಕ ರಾಜ್ಯ ಪುರಸ್ಕಾರಕ್ಕೆ ಆಯ್ಕೆಯಾದ ಹರಿಪ್ರಸಾದ್ ನಂದಳಿಕೆ, ಚಿನ್ಮಯ್ ಮೋಹನ್ ಸಾಲಿಯಾನ್ ಮುಂಬಯಿ, ರಮಾನಂದ ಶೆಟ್ಟಿ ಒಮಾನ್ (ಹೊರ ರಾಷ್ಟ್ರ), 2021ನೇ ಸಾಲಿನ ವಿಶೇಷ ಬಾಲ ಪ್ರತಿಭೆ ರಾಜ್ಯ ಪುರಸ್ಕಾರಕ್ಕೆ ಆಯ್ಕೆಯಾದ ನಿರೀಕ್ಷಾ ಕೋಟ್ಯಾನ್ ಕೋಡಿಕೆರೆ, ಜೀವಿಕಾ ಶೆಟ್ಟಿ ಮುಂಬಯಿ, ಸಾನ್ವಿ ಯು.ಎಸ್.ಎ (ಹೊರರಾಷ್ಟ್ರ), 2021 ನೇ ಸಾಲಿನ ವಿಶೇಷ ರಾಜ್ಯ ಮಾಧ್ಯಮ ಪುರಸ್ಕಾರಕ್ಕೆ ಆಯ್ಕೆಯಾದ ಶಶಿ ಬಂಡಿಮಾರ್, ರೋನ್ಸ್ ಬಂಟ್ವಾಳ (ಹೊರರಾಜ್ಯ), 2021ನೇ ಸಾಲಿನ ವಿಶೇಷ ಸಂಘಟನ ರಾಜ್ಯ ಪುರಸ್ಕಾರಕ್ಕೆ ಆಯ್ಕೆಯಾದ ಜೈ ತುಳುನಾಡ್, ತುಳು ಕೂಟ ಫೌಂಡೇಶನ್ ನಾಲಸೋಪಾರ ಮುಂಬಯಿ, ತುಳು ಕೂಟ ಕತಾರ್ (ಹೊರ ರಾಷ್ಟ್ರ) ಅವರನ್ನು ಗೌರವಿಸಲಾಯಿತು.