ಮಂಗಳೂರು: ರಾಜ್ಯ ಸರಕಾರ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ನಿಬಂಧನಗೊಳಪಟ್ಟು ಧ್ವನಿವರ್ಧಕ ಬಳಸುವಂತೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಯಕ್ಷಗಾನ, ಕಂಬಳ, ಜಾತ್ರೆ, ಉತ್ಸವ ಸೀಸನ್ ಈ ತಿಂಗಳಲ್ಲಿ ಆರಂಭಗೊಳ್ಳಲಿದ್ದು, ಇದಕ್ಕೆ ಸರಕಾರ ಯಾವುದೇ ಮಾರ್ಗಸೂಚಿ ನೀಡದಿರುವುದು ಜಿಲ್ಲಾಡಳಿತಕ್ಕೂ ಬಿಸಿತುಪ್ಪವಾಗಿದೆ. ಈ ಉತ್ಸವಗಳ ಮೇಲೆ ಹೊಡೆತ ಬಿದ್ದರೆ ಕರಾವಳಿಯ ಸಾಂಸ್ಕೃತಿಕ ಟೂರಿಸಂಗೂ ಹಿನ್ನಡೆಯಾಗಲಿದೆ ಎನ್ನುತ್ತಾರೆ ಯಕ್ಷಾಭಿಮಾನಿಗಳು.
ತುಳುನಾಡಿನ ಕಾಂತಾರ ಸಿನಿಮಾ ಹಳ್ಳಿಯಿಂದ ದಿಲ್ಲಿಯವರೆಗೆ ಸದ್ದು ಮಾಡುತ್ತಿದೆ. ಇದರಿಂದಾಗಿ ಈ ಬಾರಿ ತುಳುನಾಡಿನ ಕಂಬಳ, ಕೋಲ, ನೇಮಗಳಿಗೆ ಇನ್ನಿಲ್ಲದ ಮಹತ್ವ ಬಂದಿದೆ. ಆದರೆ ಇಲ್ಲಿನ ಯಕ್ಷಗಾನ, ಕಂಬಳ ಕ್ರೀಡೆಗೆ ಸುಪ್ರೀಂಕೋರ್ಟ್ನ ಶಬ್ಧಮಾಲಿನ್ಯ ನಿಯಮ ನಿರ್ಬಂಧ ಆದೇಶದಿಂದ ಕರಿಛಾಯೆ ಆವರಿಸಿದೆ. ಇದರಿಂದ ಮೇಳದ ಯಜಮಾನರು, ಕಂಬಳ ಸಂಘಟಕರು ಗೊಂದಲದಲ್ಲಿ ಸಿಲುಕಿದ್ದಾರೆ.
ಸುಪ್ರೀಂ ಕೋರ್ಟ್ ಶಬ್ಧಮಾಲಿನ್ಯ ನಿಯಮವನ್ನು ಎತ್ತಿಹಿಡಿದಿದ್ದು, 2005ರ ನಿಯಮವನ್ನು ಪಾಲಿಸುವಂತೆ ಖಡಕ್ ಆದೇಶ ನೀಡಿದೆ. ಈ ನಿಯಮದ ಪ್ರಕಾರ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಕೆಗೆ ನಿರ್ಬಂಧವಿದ್ದು, ಇದು ಕರಾವಳಿ ಜಿಲ್ಲೆಯಲ್ಲಿ ಜಾತ್ರೆ, ಉತ್ಸವಗಳಿಗೆ ತೊಂದರೆಯಾಗಿದೆ.
ರಾಜ್ಯದಲ್ಲಿ ಧ್ವನಿವರ್ಧಕ ಬಳಸಲು ಕೆಲವು ನಿಯಮ ವಿಧಿಸಲಾಗಿದೆ. ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಮಾತ್ರ ಧ್ವನಿವರ್ಧಕ ಬಳಸಬಹುದಾಗಿದೆ. ಕೈಗಾರಿಕಾ ಪ್ರದೇಶದಲ್ಲಿ ಹಗಲಿನಲ್ಲಿ 75 ಡೆಸಿಬಲ್ ಮತ್ತು ರಾತ್ರಿ 10 ಡೆಸಿಬಲ್ ನಷ್ಟು ಬಳಕೆಗೆ ಅವಕಾಶವಿದೆ. ವಾಣಿಜ್ಯ ಪ್ರದೇಶಗಳಲ್ಲಿ ಹಗಲಿನಲ್ಲಿ 65 ಡೆಸಿಬಲ್ ಮತ್ತು ರಾತ್ರಿ 55 ಡೆಸಿಬಲ್ ಮಟ್ಟ ಇರಬೇಕು. ವಸತಿ ವಲಯಗಳಲ್ಲಿ, ಕಟ್ಟಡ ಮಟ್ಟವು ಹಗಲಿನಲ್ಲಿ 55 ಡೆಸಿಬಲ್ ಮತ್ತು ರಾತ್ರಿಯಲ್ಲಿ 45 ಡೆಸಿಬಲ್ ಬಳಸಬಹುದು. ಶಾಂತ ವಲಯದಲ್ಲಿ ಹಗಲಿನಲ್ಲಿ 50 ಡೆಸಿಬಲ್ ಮತ್ತು ರಾತ್ರಿ 40 ಡೆಸಿಬಲ್ನಷ್ಟು ಶಬ್ಧಕ್ಕೆ ಅನುಮತಿ ನೀಡಲಾಗಿದೆ. ಈ ರೀತಿಯ ನಿಯಮಗಳನ್ನು ಪಾಲಿಸಿಕೊಂಡು ಯಕ್ಷಗಾನ, ಉತ್ಸವ, ಕಂಬಳ ನಡೆಸುವುದು ಕಷ್ಟ ಎನ್ನುತ್ತಾರೆ ಸಂಘಟಕರು
ರಾಜ್ಯದಲ್ಲಿ ಮಸೀದಿ, ದೇವಾಲಯ, ಚರ್ಚ್ ಗಳಿಂದ ಧ್ವನಿವರ್ಧಕ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಲಾಗಿದ್ದು, ಸುಮಾರು 11,850 ಅರ್ಜಿಗಳು ಬಂದಿವೆ. ಇದರಲ್ಲಿ 10,889 ಮಸೀದಿಗಳಿಗೆ, 3000ಕ್ಕೂ ಹೆಚ್ಚು ಹಿಂದೂ ದೇವಾಲಯ, 1400ಕ್ಕೂ ಹೆಚ್ಚು ಚರ್ಚ್ ಗಳಿಗೆ ಸರಕಾರ 2 ವರ್ಷಗಳವರೆಗೆ ಅನುಮತಿ ನೀಡಿದ್ದು, ಇದಕ್ಕೆ 450ರೂ. ಶುಲ್ಕ ಕಟ್ಟಲು ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು.
ಕರಾವಳಿ ಭಾಗದಲ್ಲಿ ಯಕ್ಷಗಾನ, ಕಂಬಳ, ಜಾತ್ರೋತ್ಸವಗಳು ನಡೆಯುವುದೇ ರಾತ್ರಿ ಹೊತ್ತಿನಲ್ಲಿ. ಸುಪ್ರೀಂ ಕೋರ್ಟ್ ನಿಯಮ ಈಗ ತೊಡಕಾಗಿದ್ದು, ಈ ಕಲೆಗಳು ಸಾಂಪ್ರದಾಯಿಕವಾಗಿ ನಡೆಯಬೇಕಾದರೆ ಜಿಲ್ಲಾಡಳಿತ ಸಹಕಾರ ಮುಖ್ಯವಾಗಿದೆ. ಕಾಲಮಿತಿ ಯಕ್ಷಗಾನಕ್ಕೆ ನಮ್ಮ ಹಠವಿಲ್ಲ. ಆದರೆ, ಸುಪ್ರೀಂ ಆದೇಶ ಹಿನ್ನೆಲೆಯಲ್ಲಿ ಆ ಬಗ್ಗೆ ಒಲವು ತೋರಿದ್ದು, ಕನಿಷ್ಠ ರಾತ್ರಿ 12 ಗಂಟೆಯವರೆಗೆ ಪ್ರದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ನೀಡಬೇಕು ಎಂದು ಸಂಘಟಕರ ಅಭಿಪ್ರಾಯ.