ಮಂಗಳೂರು: ನೀವೇ ಕ್ರಿಮಿನಲ್ಗಳು ನಿಮ್ಮ ಕೈಯ್ಯಲ್ಲಿ ಶಿವಾಜಿನಾ..?’ ಶಿವಾಜಿಗೆ ಅವಮಾನ ನಿನ್ನ ಕೈ ಮೇಲೆ ಇರೋದು. ಮೊದಲು ಅಳಿಸು ಅದನ್ನು. ‘ಕ್ರಿಮಿನಲ್ಸ್ ಗಳಿಗೆಲ್ಲಾ ಯಾವ ದೇವರು ಕಾಯ್ತಾನೆ’ ಮೊದಲು ಮನುಷ್ಯರಾಗೋದನ್ನು ಕಲಿಯಿರಿ. ‘ನೀನೇ ಕ್ರಿಮಿನಲ್, ಡಾಕ್ಟರ್ ಆಗಿ ಏನ್ ಮಾಡ್ತೀಯಾ’. ‘ನಾಯಿಯೇನೋ ನೀನು. ಮನುಷ್ಯನಲ್ವಾ?’ ಮೊದಲು ಸರಿಯಾಗಿ ಮನುಷ್ಯನ ರೀತಿ ಇರೋಕೆ ಕಲಿ. ‘ನಗ್ಬೇಡಾ ನಮ್ಮ ನೆಂಟರ ಹುಡುಗ ಅಲ್ಲ ನೀನು’ ಹೀಗೆ ಒಬ್ಬೊಬ್ಬ ಕ್ರಿಮಿನಲ್ಗಳ ಅವತಾರ ಕಂಡು ಮಂಗಳೂರು ಪೊಲೀಸ್ ಕಮಿಷನರ್ ಯದ್ವಾತದ್ವಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮಂಗಳೂರು ಪೊಲೀಸ್ ಪರೇಡ್ ಮೈದಾನದಲ್ಲಿ ಇಂದು ಕ್ರಿಮಿನಲ್ಗಳ ಪರೇಡ್ ನಡೆಯಿತು. ಈ ಪರೇಡ್ ಗೆ ಬಂದಿದ್ದ ಒಬ್ಬೊಬ್ಬ ಕ್ರಿಮಿನಲ್ ಗಳ ಅವತಾರ ಕಂಡು ಪೊಲೀಸ್ ಕಮಿಷನರ್ ಯದ್ವಾತದ್ವಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ಕೆಲ ಕ್ರಿಮಿನಲ್ಗಳ ಕೈಯ್ಯಲ್ಲಿದ್ದ ಐಫೋನ್, ಕ್ರೆಡಿಟ್, ಡೆಬಿಟ್ ಕಾರ್ಟ್ ಗಳು, ಪರ್ಸ್ ತುಂಬಾ ಹಣವನ್ನು ಕಂಡು ದಂಗಾದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವುಗಳನ್ನು ಮುಟ್ಟುಗೋಲು ಹಾಕಿ ಪರಿಶೀಲನೆ ನಡೆಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಳವು, ಡಕಾಯಿತಿ, ಜಾನುವಾರು ಕಳವು ಸೇರಿದಂತೆ ಮಾದಕವ್ಯಸನಿಗಳ ಮೇಲೆ ಎಂಒಬಿ ಕಾರ್ಡ್ ತೆರೆಯಲಾಗುತ್ತದೆ. ಇಂದು ಇಂತಹ ಎಂಒಬಿ ಕಾರ್ಡ್ ತೆರೆಯಲಾಗಿರುವವರ ಪರೇಡ್ ನಡೆಯಿತು. ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 17 ಪೊಲೀಸ್ ಠಾಣೆಗಳ 275 ಕ್ಕೂ ಅಧಿಕ ಕ್ರಿಮಿನಲ್ಗಳ ಪರೇಡ್ ನಡೆಯಿತು. ಈ ವೇಳೆ ಪೊಲೀಸ್ ಕಮಿಷನರ್ ಕ್ರಿಮಿನಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಎಲ್ಲಾ ಕ್ರಿಮಿನಲ್ ಗಳ ಮೊಬೈಲ್ ಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಪೊಲೀಸರು, ಅವರ ಚಲನವಲನಗಳ ಮೇಲೆ ನಿಗಾ ಇರಿಸಿದ್ದಾರೆ. ವಿಚಾರಣೆ ಬಳಿಕ ಪೊಲೀಸರು ಎಲ್ಲಾ ಕ್ರಿಮಿನಲ್ ಗಳನ್ನೂ ಮೈದಾನದಲ್ಲಿ ಮೂರು ಸುತ್ತು ಪರೇಡ್ ಮಾಡಿಸಿದರು.