ಮಂಗಳೂರು: ಕರ್ನಾಟಕದಲ್ಲಿ ಕಳೆದ ಹಲವು ವರ್ಷಗಳಿಂದ ತಣ್ಣಗಾಗಿದ್ದ ನಕ್ಸಲ್ ಹಾವಳಿ ಮತ್ತೆ ಜೀವ ಪಡೆದುಕೊಂಡಿರುವ ಆತಂಕ ಎದುರಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದ ಪುಂಜಾಜೆ ಮನೆ ನಿವಾಸಿ ಜೋಸಿ ಆಂಟನಿ ಮನೆಗೆ ಓರ್ವ ಮಹಿಳೆ ಸೇರಿ ಐದು ಜನ ಅಪರಿಚಿತರ ತಂಡ ಭೇಟಿ ನೀಡಿದ್ದು, ಮನೆ ಬಾಗಿಲು ತೆರೆಯುವಂತೆ ಬಲವಂತ ಮಾಡಿದ ಘಟನೆ ನಡೆದಿದೆ.
ಖಾಕಿ ಬಟ್ಟೆ ಧರಿಸಿದ್ದ ಓರ್ವ ಮಹಿಳೆ ಸೇರಿದಂತೆ ಐವರ ತಂಡ ಕೈಯಲ್ಲಿ ಮಾರಕ ಅಸ್ತ್ರ ಹಿಡಿದಿದ್ದು, ನಾವು ವೇಣೂರು ಪೊಲೀಸರು ಎಂದು ಪರಿಚಯ ಮಾಡಿಕೊಂಡು ಜೋಸಿ ಆಂಟನಿ ಅವರ ಮನೆಗೆ ಬಂದಿದ್ದಾರೆ. ಈ ವೇಳೆ ಮನೆಯವರು ಬಾಗಿಲು ತೆರೆಯದ ಕಾರಣ ಹಾರೆಯಲ್ಲಿ ಮೀಟಿ ಬಾಗಿಲು ತೆರೆಯಲು ಯತ್ನಿಸಿದ್ದಾರೆ. ಈ ಹಿನ್ನಲೆಯಲ್ಲಿ ಘಟನಾ ಸ್ಥಳಕ್ಕೆ ವೇಣೂರು ಮತ್ತು ಬೆಳ್ತಂಗಡಿ ಪೊಲೀಸರು ದೌಡಾಯಿಸಿದ್ದಾರೆ.