ಮಂಗಳೂರು: ಕಳೆದ ಆರು ವರ್ಷಗಳಿಂದ ಹೋರಾಟ ಮಾಡಿರುವುದು ಟೋಲ್ ಗೇಟ್ ತೆಗೆಯಿರಿ ಎಂದಲ್ಲ, ಅಲ್ಲಿ ಅನಧಿಕೃತವಾಗಿ ವಸೂಲು ಮಾಡುತ್ತಿರುವ ಸುಂಕವನ್ನು ಪೂರ್ತಿ ರದ್ದು ಮಾಡಿಯೆಂದು. ಸುರತ್ಕಲ್ ಟೋಲ್ ಶುಲ್ಕವನ್ನು ಹೆಜಮಾಡಿಯಲ್ಲಿ ವಸೂಲು ಮಾಡುವ ತೀರ್ಮಾನ ತೀರಾ ಅನ್ಯಾಯದಿಂದ ಕೂಡಿದೆ. ಆ ರೀತಿಯ ಗಜೆಟ್ ನೋಟಿಫಿಕೇಶನ್ ಹೊರಡಿಸಿಲು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳೇ ನೇರ ಕಾರಣ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದರು.
ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ವರ್ಷದ ಫೆಬ್ರವರಿಯಿಂದ ಅಕ್ಟೋಬರ್ 28ರ ವರೆಗೆ ಹತ್ತಕ್ಕೂ ಹೆಚ್ಚು ಸಭೆಗಳನ್ನು ಹೆದ್ದಾರಿ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ನಡೆಸಿದೆ. ಆದರೆ ಈ ಯಾವುದೇ ಸಭೆಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಯಾವುದೇ ಎಂಪಿಗಳು, ಉಸ್ತುವಾರಿ ಸಚಿವರು, ಶಾಸಕರಾಗಲಿ ಭಾಗವಹಿಸಿಲ್ಲ ಎಂದರು.
ಹೀಗಾಗಿ ಸುರತ್ಕಲ್ ಟೋಲ್ ನಲ್ಲಿ ಅಷ್ಟೊಂದು ಹಣ ಸಂಗ್ರಹ ಆಗಿದ್ದರೂ, ಮತ್ತೆ ಆರೇಳು ವರ್ಷಗಳ ಹಿಂದಿನ ಮಾದರಿಯಲ್ಲೇ ಇಲ್ಲಿ ಅಕ್ರಮವಾಗಿ ಸುಂಕ ಸಂಗ್ರಹ ಮಾಡುವ ಆದೇಶ ಆಗಿದೆ. ಈಗ ತೀರ್ಮಾನ ಮಾಡಿ ಆಗಿದೆ. ಆದ್ರೆ ದಕ್ಷಿಣ ಕನ್ನಡ ಜಿಲ್ಲೆಯ ಎಂಪಿ, ಎಂಎಲ್ಎಗಳು ಮಾತನಾಡುತ್ತಿಲ್ಲ, ಉಡುಪಿಯಿಂದ ರಘುಪತಿ ಭಟ್ ಅವರ ಸ್ವರ ಮಾತ್ರ ಕೇಳುತ್ತಿದೆ. ಉಳಿದವರು ಏನೂ ಮಾಡುತ್ತಿದ್ದಾರೆ ಅಂಥಾ ಗೊತ್ತಿಲ್ಲ ಎಂದು ಕುಟುಕಿದರು.
ಆದ್ರೆ ನಾವು ಈಗಾಗಲೇ ಉಡುಪಿ ಜಿಲ್ಲಾಡಳಿತಕ್ಕೆ ತಿಳಿಸಿದ್ದೇವೆ. ಈ ಪ್ರಸ್ತಾಪ ಅನ್ಯಾಯದಿಂದ ಕೂಡಿದೆ. ಈ ಬಗ್ಗೆ ತಕ್ಷಣ ಸಭೆ ಕರೆದು, ಹೆದ್ದಾರಿ ಪ್ರಾಧಿಕಾರಕ್ಕೆ ಹಾಗೂ ರಾಜ್ಯ ಸರಕಾರಕ್ಕೆ ತಿಳಿಸಬೇಕೆಂದು ಸಲಹೆ ನೀಡಿದ್ದೇವೆ ಎಂದರು.