ಮಂಗಳೂರು: ವಯೋವೃದ್ಧರ ಕುಟುಂಬಕ್ಕೆ ಒಡಹುಟ್ಟಿದ ಸೋದರನೇ ವಿಲನ್ ಆಗಿದ್ದು ಆಸ್ತಿ ಕೊಳ್ಳೆ ಹೊಡೆಯೋ ಪ್ಲಾನ್ ಮಾಡ್ಕೊಂಡ ಆತ ಆಸ್ತಿಪತ್ರವನ್ನು ಲಪಟಾಯಿಸಿ ವಂಚನೆಯ ಹಾದಿ ಹಿಡಿದಿದ್ದಾನೆ. ಇದರ ವಿರುದ್ಧ ಸಿಡಿದೆದ್ದ ಸೋದರ ಒಬ್ಬಂಟಿ ಹೋರಾಟಕ್ಕೆ ಮುಂದಾಗಿದ್ದಾರೆ.
ಸದ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲು ಸಿದ್ಧತೆ ಮಾಡಿಕೊಂಡಿದ್ದು ಕಾನತ್ತೂರು ಕ್ಷೇತ್ರಕ್ಕೆ ದೂರು ನೀಡಲು ಮುಂದಾಗಿದ್ದಾರೆ. ಇದು ಪಚ್ಚನಾಡಿ ನಿವಾಸಿ ಚಂದ್ರಹಾಸ್ ಭಂಡಾರಿ ಎಂಬುವರ ಕಥೆ ವ್ಯಥೆ.
ಪ್ರಕರಣದ ಹಿನ್ನೆಲೆ: ಚಂದ್ರಹಾಸ್ ಭಂಡಾರಿಯವರಿಗೆ ಪಿತ್ರಾರ್ಜಿತವಾಗಿ ಸಿಕ್ಕ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿ ಇತ್ತು. ಸೋದರ ಸೋದರಿಯರಿಗೆ ಆಸ್ತಿ ಸಮಾನವಾಗಿ ಹಂಚಿಕೆಯಾಗಿತ್ತು. ಚಂದ್ರಹಾಸ್ ಭಂಡಾರಿಯವರಿಗೆ ಇಬ್ಬರು ಮಕ್ಕಳಿದ್ದು ತಮ್ಮ ಕಾಲ ಮೇಲೆ ನಿಲ್ಲುತ್ತಲೇ ತಾಯಿ ಜೊತೆಗೆ ಹೊರಟುಹೋಗಿದ್ದಾರೆ . ನಂತರ ಭಂಡಾರಿ ಅವರದ್ದು ಒಂಟಿ ಜೀವನ ಪ್ರಾರಂಭವಾಯಿತು. “ಆಗ ಕಿರಿಯ ಸೋದರ ಹರೀಶ್ ಭಂಡಾರಿ ಕಾಟ ಕೊಡಲು ಆರಂಭಿಸಿದ್ದು 4 ವರ್ಷಗಳ ಹಿಂದೆ ತನ್ನ ಸೋದರಿಯರ ಜೊತೆ ಮನೆಗೆ ಬಂದ ಹರೀಶ್ ಭಂಡಾರಿ ಬಲವಂತವಾಗಿ ಆಸ್ತಿಪತ್ರ ಲಪಟಾಯಿಸಿ ಹೋಗಿಬಿಟ್ಟ. ನನಗೆ ಸೇರಿದ್ದ 1 ಕೋಟಿ ರೂ. ಬೆಲೆಬಾಳುವ ಜಾಗವನ್ನು ಆತನ ಹೆಸರಿಗೆ ನೋಂದಣಿ ಮಾಡಿಸಿದ್ದಲ್ಲದೆ ಕೋಟ್ಯಂತರ ರೂ. ಬೆಲೆಬಾಳುವ ಆಸ್ತಿಯನ್ನು ಆತನ ಹೆಸರಿಗೆ ವೀಲು ಮಾಡಿಸಿಕೊಂಡಿದ್ದಾನೆ” ಎಂದು ಅಲವತ್ತುಕೊಳ್ಳುತ್ತಾರೆ ಚಂದ್ರಹಾಸ್ ಭಂಡಾರಿ.
ಹೀಗೆ ಜಿಪಿಎ ತಮ್ಮ ಕೈಲಿದ್ದರೂ ಭಂಡಾರಿಯವರು ಆಸ್ತಿ ಪತ್ರ ಇಲ್ಲದೆ ಕಂಗಲಾಗಿದ್ದಾರೆ. ಇದೇ ಚಿಂತೆಯಿಂದ ಮಾನಸಿಕ ರೋಗಕ್ಕೂ ತುತ್ತಾದ ಭಂಡಾರಿ ಅವರು ಸದ್ಯ ಚೇತರಿಸಿಕೊಂಡಿದ್ದು ದಾಖಲೆ ಪತ್ರ ವಾಪಾಸ್ ಕೊಡುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನಗರದ ಖ್ಯಾತ ವಕೀಲ ಕೃಷ್ಣಮೂರ್ತಿ ಅವರ ಮೂಲಕ ಕಾನೂನಾತ್ಮಕ ಹೋರಾಟ ನಡೆಸುತ್ತಿದ್ದಾರೆ. ಭಂಡಾರಿ ಅವರು ತಮಗಾದ ಅನ್ಯಾಯದ ವಿರುದ್ಧ ಹೋರಾಡಲು ಟೊಂಕ ಕಟ್ಟಿ ನಿಂತಿದ್ದು ಮಾನವ ಹಕ್ಕು ಆಯೋಗದ ಮೂಲಕ ತಮ್ಮ ಮಕ್ಕಳು, ಸೋದರನಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಕುತ್ತಾರ್ ನಲ್ಲಿ ಬಾರ್ ಹೊಂದಿದ್ದ ಇನ್ನೋರ್ವ ಸೋದರ ಸುರೇಶ್ ಭಂಡಾರಿ ನೀರಿಗೆ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದು ಆತನ ಸಾವಿನಲ್ಲೂ ಸಂದೇಹವಿದೆ ಎನ್ನುತ್ತಾರೆ.
ತಮಗೆ ಆಗಿರುವ ನಷ್ಟವನ್ನು ಭರಿಸಬೇಕು, ಆಸ್ತಿಯ ದಾಖಲೆ ಪತ್ರಗಳನ್ನು ವಾಪಾಸ್ ಕೊಡಬೇಕು. 1.5 ಕೋಟಿ ಮೌಲ್ಯದ ಆಸ್ತಿಯನ್ನು 70 ಲಕ್ಷ ರೂ. ಗೆ ಸೋದರ ಫೋರ್ಜರಿ ಮಾಡಿ ಮಾರಾಟ ಮಾಡಿದ್ದಾನೆ ಎಂದು ದೂರಿರುವ ಚಂದ್ರಹಾಸ್ ಭಂಡಾರಿ ಅವರು ನ್ಯಾಯಾಲಯಕ್ಕೆ ಹರೀಶ್ ಭಂಡಾರಿ, ಸುನೀತಾ ಭಂಡಾರಿ, ನಳಿನಾಕ್ಷಿ, ಶೀಲಾವತಿ ವಿರುದ್ಧ ದೂರು ನೀಡಿದ್ದು ನ್ಯಾಯ ಸಿಗುವ ವಿಶ್ವಾಸ ಹೊಂದಿದ್ದಾರೆ. ತುಳುನಾಡಿನ ಪುಣ್ಯಕ್ಷೇತ್ರ ಕಾನತ್ತೂರಿನ ದೈವಗಳ ಮೊರೆಹೋಗಲು ನಿರ್ಧರಿಸಿದ್ದು ತಮಗಾದ ಅನ್ಯಾಯ ಇನ್ಯಾರಿಗೂ ಆಗಬಾರದು ಎಂದು ಕಣ್ಣೀರು ಹಾಕುತ್ತಿದ್ದಾರೆ.