ಮಂಗಳೂರು,(ಆ.26): ಮಂಗಳೂರು ಗಡಿ ಭಾಗದ ಕಾಸರಗೋಡಿನ ಹಲವೆಡೆ ರೈಲು ಹಳಿ ತಪ್ಪಿಸಲು ಯತ್ನಿಸಿರುವ ಘಟನೆ ನಡೆದಿದೆ.
ಕಳೆದ ಕೆಲ ದಿನಗಳಲ್ಲಿ ಕೇರಳ ರಾಜ್ಯದ ಕಾಸರಗೋಡಿನ ಹಲವೆಡೆ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ತೃಕ್ಕನ್ನಾಡು, ಕುಂಬಳೆ, ಹೊಸದುರ್ಗ, ತಳಂಗರೆದಲ್ಲಿ ರೈಲು ಹಳಿ ತಪ್ಪಿಸಲು ಯತ್ನಿಸಲಾಗಿದ್ದು, ಅ.21ರ ರವಿವಾರ ಕೋಟಿಕುಳಂ-ಬೇಕಲ ಮಧ್ಯೆ ತೃಕ್ಕನ್ನಾಡು ದೇಗುಲದ ಹಿಂದುಗಡೆ ರೈಲು ಹಳಿಯಲ್ಲಿ ಕಬ್ಬಿಣದ ಸರಳುಗಳು ಪತ್ತೆಯಾಗಿದೆ.
ಘಟನೆ ಬೆನ್ನಲ್ಲೇ ಕೇರಳ ಪೊಲೀಸ್ ಇಲಾಖೆ ಹಾಗೂ ರೈಲ್ವೇ ಭದ್ರತಾ ಪಡೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿದೆ. ರೈಲ್ವೇ ಹಳಿ ಮೇಲೆ ಕಲ್ಲು, ಕಬ್ಬಿಣದ ಸರಳು, ಕಾಂಕ್ರೀಟ್ ತುಂಡುಗಳನ್ನಿರಿಸಿ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಲಾಗಿದೆ.
35 ಕಿಲೋ ತೂಕದ ಕಾಂಕ್ರೀಟ್ ತುಂಡನ್ನು ಹಳಿ ಮೇಲೆ ಇರಿಸಿ ದುಷ್ಕೃತ್ಯಕ್ಕೆ ಪ್ಲಾನ್ ಎಸಗಿರೋ ಅನುಮಾನ ವ್ಯಕ್ತವಾಗಿದೆ. ಕುಂಬಳೆ ರೈಲು ನಿಲ್ದಾಣದ 400 ಮೀಟರ್ ದೂರದಲ್ಲೂ ಹಳಿಗಳ ಮೇಲೂ ಕಲ್ಲುಗಳು ಪತ್ತೆಯಾಗಿದ್ದು, ರೈಲ್ವೇ ಭದ್ರತಾ ಪಡೆ (ಆರ್ಪಿಎಫ್), ರೈಲ್ವೇ ಪೊಲೀಸರು ಮತ್ತು ಸ್ಥಳೀಯ ಪೊಲೀಸರಿಂದ ತನಿಖೆ ಆರಂಭವಾಗಿದೆ.
ಮಂಗಳೂರು-ಚೆನ್ನೈ ಸೂಪರ್ಫಾಸ್ಟ್ ರೈಲು ಸಂಚರಿಸುವ ಮಾರ್ಗದಲ್ಲಿ ಕಲ್ಲುಗಳು ಪತ್ತೆಯಾದರೆ, ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯ ಹಲವೆಡೆ ರೈಲಿಗೆ ಕಲ್ಲು ತೂರಿದ ಬಗ್ಗೆಯೂ ಮಾಹಿತಿ ಇದೆ. ಕಳೆದ ಶನಿವಾರ ಚಿತ್ತಾರಿ ಎಂಬಲ್ಲಿ ಕೊಯಮತ್ತೂರು-ಮಂಗಳೂರು ರೈಲಿನ ಮೇಲೆ ಕಲ್ಲು ತೂರಾಟವಾಗಿದ್ದು, ಕರ್ನಾಟಕ ಗಡಿ ಭಾಗದ ಕಾಸರಗೋಡಿನ ರೈಲ್ವೇ ಹಳಿಗಳಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿರೋ ಅನುಮಾನ ಮತ್ತಷ್ಟು ಹೆಚ್ಚಾಗಿದೆ.
ಕಾಸರಗೋಡು ರೈಲ್ವೇ ನಿಲ್ದಾಣದ ಆರ್ಪಿಎಫ್ ತಂಡ ಸ್ಥಳಕ್ಕೆ ಆಗಮಿಸಿ ಅಡೆತಡೆಯನ್ನು ನಿವಾರಿಸಿ ಪರಿಶೀಲನೆ ನಡೆಸಿದೆ. ಕಾಸರಗೋಡು ಕಡೆಗೆ ಬೇಕಲ್-ಕೊಟ್ಟಿಕುಳಂ ವಿಭಾಗದಲ್ಲಿ ಕಬ್ಬಿಣದ ಬ್ಲಾಕ್ಗಳು ಪತ್ತೆಯಾದ ಬೆನ್ನಲ್ಲೇ ಎಲ್ಲಾ ಟ್ರ್ಯಾಕ್ ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಭಾರವಾದ ವಸ್ತುವನ್ನು ಟ್ರ್ಯಾಕ್ನಲ್ಲಿ ಇಡುವಲ್ಲಿ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳ ಪಾತ್ರವನ್ನು ಆರ್ಪಿಎಫ್ ತನಿಖಾ ತಂಡ ಶಂಕಿಸಿದೆ.