ಮಂಗಳೂರು: ಅಂಗಾಂಗ ದಾನದ ಪ್ರಕ್ರಿಯೆಯನ್ನು ೨೦೧೫ ರಲ್ಲಿ ಎ.ಜೆ. ಆಸ್ಪತ್ರೆ ಕೈಗೊಂಡಿತ್ತು ಮತ್ತು ಮಾಧ್ಯಮದ ಸಹಾಯದಿಂದ ಅದರ ಅರಿವು ಜನಸಾಮಾನ್ಯರಿಗೆ ತಲುಪಿತ್ತು. ಈ ಪ್ರಕ್ರಿಯೆಯು ಅವಿಭಾಜಿತ ದಕ್ಷಿಣ ಕನ್ನಡದ ಪ್ರಪ್ರಥಮ ದಾನಿಗಳಾದ ಜೀವನ್ ಮತ್ತು ಲೀನಾ ಅವರ ಹೆಸರನ್ನು ಅಜರಾಮರ ಗೊಳಿಸಲು “ಜೀವನ್ ವಿಲೀನ” ಎಂಬ ಹೆಸರಲ್ಲಿ ಪ್ರಖ್ಯಾತವಾಗಿದೆ.
ಅಂದಿನಿಂದ ಇಂದಿನವರೆಗೂ ೪೧ ದಾನಿಗಳಿಂದ ಪಡೆದ ಅಂಗಾಂಗಗಳಿಂದ ಸುಮಾರು ೧೫೦ ರೋಗಿಗಳು ಗುಣಮುಖರಾಗಿರುತ್ತಾರೆ ಹಾಗೂ ಅವರ ನೆಂಟರಿಷ್ಟರು ಈ ದಾನಿಗಳಿಗೆ ಮತ್ತು ಅವರ ಕುಟುಂಬದವರಿಗೆ ಯಾವತ್ತೂ ಚಿರರುಣಿಯಾಗಿರುತ್ತಾರೆ. ೨೦೨೨ ರಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಗರಿಷ್ಠ ಅಂಗಾಂಗ ದಾನವಾಗಿರುತ್ತದೆ.
ಇಂತಹ ಒಂದು ಘಟನೆ ೧೧ನೇ ಡಿಸೆಂಬರ್ ೨೦೨೨ ರಂದು ಸಂಭವಿಸಿದೆ. ಮೆದುಳು ನಿಷ್ಕ್ರಿಯವಾದ ಒಂದು ವ್ಯಕ್ತಿಯ ಅಂಗಾಂಗ ಗಳನ್ನು ದಾನ ಮಾಡಲು ಅವರ ಕುಟುಂಬದವರು ಮುಂದೆ ಬಂದರು. ಅವರಿಗೆ ಸಹಾಯವಾಗಿ ಕರ್ನಾಟಕ ಸರಕಾರದ ಅಂಗ ಸಂಸ್ಥೆಯಾದ “ಜೀವಸಾರ್ಥಕತೆ” ಮುಂದೆ ಬಂದು ಅವಶ್ಯಕತೆ ಇರುವ ರೋಗಿಗಳನ್ನು ಸಕ್ರಿಯ ಗೊಳಿಸಿದರು. ಅದೇ ರೀತಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ೧೨ನೇ ತಾರೀಖು ಶಸ್ತ್ರ ಚಿಕಿತ್ಸೆ ಮಾಡಿ ಅಂಗಾಂಗ ಗಳನ್ನು ಬೆಂಗಳೂರು, ಚೆನ್ನೈ, ಮಣಿಪಾಲ ಹಾಗೂ ಮೂತ್ತ್ರ ಪಿಂಡ (ಕಿಡ್ನಿ)ಗಳನ್ನು ಎ.ಜೆ.ಆಸ್ಪತ್ರೆಗೆ ವರ್ಗಾಯಿಸಿದರು. ಈ ಅಂಗಾಂಗಗಳನ್ನು ನಿಗದಿತ ಸಮಯದಲ್ಲಿ ರೋಗಿಗಳಿಗೆ ಜೋಡಿಸಬೇಕಾಗುತ್ತದೆ. ಈ ಅಪರೂಪದ ನಿದರ್ಶನದಲ್ಲಿ ಎರಡೂ ಕಿಡ್ನಿಗಳನ್ನು ಎ.ಜೆ.ಆಸ್ಪತ್ರೆಯ ಎರಡು ರೋಗಿಗಳಿಗೆ ಮೀಸಲಾಗಿಟ್ಟಿತು. ಎರಡೂ ರೋಗಿಗಳ ಶಸ್ತ್ರಕ್ರಿಯೆಯ ಪ್ರಕ್ರಿಯೆಯು ೬-೭ ಗಂಟೆಗಳ ಕಾಲಾವಧಿಯಲ್ಲಿ ಮುಗಿಸಬೇಕಾಗಿತ್ತು. ಇದನ್ನು ಶಸ್ತ್ರಕ್ರಿಯೆಯ ತಂಡವು ಸವಾಲಾಗಿ ತೆಗೆದು ಕೊಂಡಿತು. ಒಂದು ತಂಡವು ಮೃತ ವ್ಯಕ್ತಿಯ ಮೂತ್ರಪಿಂಡ (ಕಿಡ್ನಿ) ವನ್ನು ತೆಗೆದು ಸಿದ್ಧಪಡಿಸಿ, ಈ ಆಸ್ಪತ್ರೆಯಲ್ಲಿ ಇರುವ ಎರಡು ರೋಗಿಗಳಿಗೆ ಮೂತ್ರಪಿಂಡ(ಕಿಡ್ನಿ)ವನ್ನು ಮರು ಜೋಡಿಸಿ ಯಶಸ್ವಿಯಾಗಿ ಶಸ್ತ್ರಕ್ರಿಯೆಯನ್ನು ಪೂರೈಸಿತು. ಹೀಗೆ ಮೂತ್ರಪಿಂಡವನ್ನು ಕಸಿ ಮಾಡಿಸಿ ಕೊಂಡ ಎರಡೂ ರೋಗಿಗಳು ೧೨ ದಿನಗಳೊಳಗೆ ಗುಣಮುಖರಾಗಿ ಮನೆಗೆ ತೆರಳಿರುವರು.
ಸಾಮಾನ್ಯವಾಗಿ ಎರಡು ಅಂಗಗಳು ಒಂದೇ ಆಸ್ಪತ್ರೆಗೆ ಮಂಜೂರಾಗುವುದು ಬಹಳ ವಿರಳ. ಇಂತಹ ವಿಶೇಷ ಸನ್ನಿವೇಶದಲ್ಲಿ ಎ.ಜೆ. ಆಸ್ಪತ್ರೆಯ ಡಾ|| ಪ್ರಶಾಂತ್ ಮಾರ್ಲ, ಡಾ|| ಪ್ರೀತಮ್ ಶರ್ಮಾ, ಡಾ|| ರೋಶನ್ ವಿ.ಶೆಟ್ಟಿ (ಕಸಿ ಶಸ್ತ್ರಚಿಕಿತ್ಸಕರು), ಡಾ|| ರಾಘವೇಂದ್ರ ನಾಯಕ್ (ನೆಫ್ರಾಲಜಿಸ್ಟ್), ಡಾ|| ಹರೀಶ್ ಕಾರಂತ್ (ಅರಿವಳಿಕೆ ತಜ್ಞ), ಸೌಮ್ಯ (ಕಸಿ ಸಂಯೋಜಕಿ),. ಲೀಲಾವತಿ ಹೆಗ್ಡೆ. ಸವಿನಾ ರೋಶ್ನಿ, ಮಹಾಬಲ (ಒಟಿ ಸಿಬ್ಬಂದಿ) ಇದ್ದರು.