ಬೆಳ್ತಂಗಡಿ: ಕಳೆದ ಎರಡು ದಿನಗಳಿಂದ ಬೆಳ್ತಂಗಡಿ ತಾಲೂಕಿನಾದ್ಯಂತ ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ನದಿ ನೀರಿನ ಮಟ್ಟ ಹೆಚ್ಚಾಗಿರುವ ನಡುವೆ ಕಿಂಡಿ ಅಣೆಕಟ್ಟುಗಳಲ್ಲಿ ಮರಮಟ್ಟುಗಳ ತ್ಯಾಜ್ಯ ತುಂಬಿವೆ.
ತಾಲೂಕಿನ ನೇತ್ರಾವತಿ, ಮೃತ್ಯುಂಜಯ, ಫಲ್ಗುಣಿ, ಸೋಮಾವತಿ ನದಿ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಕಾಪು, ಕಡಂಬಳ್ಳಿ, ಕಲ್ಮಂಜ, ಪಜಿರಡ್ಕ, ನಿಡಿಗಲ್ ಸಹಿತ ಇತ್ತೀಚೆಗೆ ನಿರ್ಮಿಸಿದ ಕಿಂಡಿ ಅಣೆಕಟ್ಟುಗಳಲ್ಲಿ ತ್ಯಾಜ್ಯ ತುಂಬಿದೆ.
ಗುರುವಾರ ರಾತ್ರಿ ಪೂರ್ತಿ ಮಳೆ ಭಾರಿ ಮಳೆಯಾದ ಪರಿಣಾಮ ಉಜಿರೆ ಗಣೇಶ್ ಕಲಾ ಮಂದಿರ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಯಾರೂ ವಾಸ್ತವ್ಯ ಇಲ್ಲದ ಹಂಚಿನ ಹಳೇ ಮನೆಯೊಂದು ಧರಾಶಾಯಿಯಾಗಿದೆ. ಕೆಲವೆಡೆ ಅಡಿಕೆ ಸಸಿಗಳು ಗಾಳಿ ಮಳೆಗೆ ತುಂಡರಿಸಿ ಬಿದ್ದಿವೆ. ಗುರುವಾರ ಭಾರಿ ಮಳೆಯಿಂದಾಗಿ ತಾಲೂಕಿನ ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಯಿತು. ನಿರಂತರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ಅಲ್ಲಲ್ಲಿ ಹೊಂಡ ಗುಂಡಿಯಾಗಿವೆ.