ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಅತಿದೊಡ್ಡ ಉತ್ಸವ ಎಂದರೆ ಅದು ಚಂಪಾಷಷ್ಠಿ ಮಹೋತ್ಸವ. ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಮಹೋತ್ಸವ ನಡೆದಿದ್ದು, ಸುಬ್ರಹ್ಮಣ್ಯ ದೇವರ ಬ್ರಹ್ಮ ರಥೋತ್ಸವ ಸಂಪನ್ನಗೊಂಡಿದೆ.
ಧನು ಲಗ್ನ ಮುಹೂರ್ತದಲ್ಲಿ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿದ್ದು, ಸುಬ್ರಹ್ಮಣ್ಯ ದೇವರ ಬ್ರಹ್ಮ ರಥೋತ್ಸವ ಕಣ್ತುಂಬಿಕೊಳ್ಳುವ ಸಲುವಾಗಿ ಭಕ್ತ ಸಾಗರ ಆಗಮಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ದೊಡ್ಡ ಉತ್ಸವ ಇದಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿಸೆಂಬರ್ 10 ರಿಂದ ಕುಕ್ಕೆ ಚಂಪಾಷಷ್ಠಿ ಮಹೋತ್ಸವ ಆರಂಭಗೊಂಡಿದೆ. ದೇವರು ಕೊಪ್ಪರಿಗೆ ಏರುವುದರ ಮೂಲಕ ಜಾತ್ರೆ ಆರಂಭವಾಗಿದೆ. ಈಗಾಗಲೇ ಭಕ್ತರು ಕುಕ್ಕೆಗೆ ಆಗಮಿಸುತ್ತಿದ್ದಾರೆ.
ಚಂಪಾಷಷ್ಠಿ ಭಾಗವಾಗಿ ಪ್ರಮುಖವಾಗಿ ನಡೆಯುವುದು ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ. ಡಿ.17ರಂದು ಪಂಚಮಿ ರಥೋತ್ಸವ ಡಿ.18 ರಂದು ಬೆಳಗ್ಗೆ ಚಂಪಾಷಷ್ಠಿ ಬ್ರಹ್ಮರಥೋತ್ಸವ, ಡಿ.19 ರಂದು ಅವಭ್ರಥೋತ್ಸವ ಮತ್ತು ನೌಕವಿಹಾರ, ಡಿ.24 ರಂದು ಕೊಪ್ಪರಿಗೆ ಇಳಿಯುವುದರ ಮೂಲಕ ಜಾತ್ರೆ ಸಮಾಪನಗೊಳ್ಳಲಿದೆ. ಅಂದು ರಾತ್ರಿ ನೀರಿನಲ್ಲಿ ಬಂಡಿ ಉತ್ಸವ ನೆರವೇರಲಿದೆ. ಹಾಗೂ ಪುರುಷರಾಯ, ಹೊಸಳಿಗಮ್ಮ ಹಾಗೂ ಪರಿವಾರ ದೈವಗಳ ನಡಾವಳಿ ನಡೆಯಲಿವೆ.