ಉಳ್ಳಾಲ: ಮಂಗಳೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಸಮರ್ಥ ಅಭ್ಯರ್ಥಿಯ ಆಯ್ಕೆ ನಡೆದಿದೆ. 210 ಬೂತ್ ಗಳಲ್ಲಿ , ತಾಲೂಕು ಮತ್ತು ಗ್ರಾಮದ ಶಕ್ತಿಕೇಂದ್ರಗಳಲ್ಲಿನ ಅವಿರತ ಶ್ರಮದಿಂದ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ. ಈ ಮೂಲಕ ಜಿಲ್ಲೆಯ 8 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂಬುದನ್ನು ತನ್ನ ಅನುಭವದಿಂದ ಹೇಳಬಲ್ಲೆ ಎಂದು ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಪಂಡಿತ್ ಹೌಸ್ ಬಿಜೆಪಿ ಕಾರ್ಯಾಲಯದಲ್ಲಿ ಇಂದು ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಸರಕಾರ ನೀಡಿರುವುದರಿಂದ ಈ ಬಾರಿ ಜನತೆಯಿಂದ ಅಚ್ಚರಿಯ ಫಲಿತಾಂಶ ಬಿಜೆಪಿ ಮಂಗಳೂರು ಕ್ಷೇತ್ರದಲ್ಲಿ ನೀಡಲಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿ ವಿಶ್ವಾಸದ ಬಾಳು ನಡೆಸಬೇಕು ಅನ್ನುವ ಉದ್ದೇಶದಿಂದ ರಾಜ್ಯ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಈವರೆಗಿನ ಸರಕಾರಗಳು ಮಾಡದ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೀಸಲಾತಿ ಹೆಚ್ಚಳ, 75 ಯುನಿಟ್ ಉಚಿತ ವಿದ್ಯುತ್, ಗ್ರಾಮಗಳಿಗೆ 17,000 ಕೊಳವೆ ಬಾವಿಗಳ ನಿರ್ಮಾಣ, 10,000 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳ ವಿತರಣೆ ಮಾಡಲಾಗಿದೆ. ಸಣ್ಣ ಜಾತಿಯವರು ಮುಖ್ಯವಾಹಿನಿಗೆ ಬರುವಂತಾಗಲು 12 ನಿಗಮಗಳ ಸ್ಥಾಪನೆ, 23,000 ಮೀನುಗಾರರ ಸಾಲಮನ್ನಾ ಸೇರಿದಂತೆ ಪ್ರಮುಖವಾಗಿ ಮಂಗಳೂರು-ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಆಗುತ್ತಿರುವ ಸಮಸ್ಯೆ ಪರಿಹಾರಕ್ಕಾಗಿ 180 ಕೋ.ರೂಗಳಲ್ಲಿ ಹೆಜಮಾಡಿಯಲ್ಲಿ ಬಂದರು ಸ್ಥಾಪನೆ ಮೀನುಗಾರರಿಗೆ ನೀಡಿರುವ ಬಹುದೊಡ್ಡ ಕೊಡುಗೆಯಾಗಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಮಂಗಳೂರು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ, ಮಂಗಳೂರು ಮಂಡಲ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಕ್ಷೇತ್ರ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಪ್ರವಾಸಿ ಪ್ರಭಾರಿ ಕುಂಟಾರು ರವೀಶ್ ತಂತ್ರಿ, ಚುನಾವಣಾ ಉಸ್ತುವಾರಿ ಚೆನ್ನಪ್ಪ ಕೋಟ್ಯಾನ್, ಚಂದ್ರಹಾಸ್ ಉಳ್ಳಾಲ್, ಚಂದ್ರಶೇಖರ್ ಉಚ್ಚಿಲ್ ಮುಂತಾದವರು ಉಪಸ್ಥಿತರಿದ್ದರು.