ಬೆಳ್ತಂಗಡಿ: ರಾಜ್ಯಸಭಾ ಸದಸ್ಯನಾದ ಬಳಿಕ ಈಗಿರುವ ಸಂಸತ್ತಿನ ದರ್ಶನ ಆಗಿದೆ. ಅದೇ ರೀತಿ ಮುಂಬರುವ ಚಳಿಗಾಲದ ಅಧಿವೇಶನ ಸಂದರ್ಭ ಹೊಸ ಸಂಸತ್ತಿನ ಕಟ್ಟಡದೊಳಗೆ ಕುಳಿತುಕೊಳ್ಳುವ ಸಂದರ್ಭ ಬರಲಿದೆ. ರಾಜ್ಯಸಭಾ ಸದಸ್ಯತ್ವದ ಹೊಸ ಅನುಭವಕ್ಕಾಗಿ ಇನ್ನಷ್ಟೇ ನಾನು ಸಿದ್ಧನಾಗಬೇಕಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಅವರನ್ನು ಅಭಿನಂದಿಸಲು ಭೇಟಿಯಾದಾಗ ದೆಹಲಿಯಲ್ಲಿ ತಮಗಾದ ಅನುಭವಗಳನ್ನು ಪತ್ರಕರ್ತರ ಮುಂದೆ ಹಂಚಿಕೊಂಡರು.
ಸಂಸತ್ತಿನೊಳಗೆ ಎಲ್ಲರೂ ಆತ್ಮೀಯವಾಗಿ ನಡೆದುಕೊಂಡರು. ಕೇಂದ್ರದ ಎಲ್ಲಾ ಸಚಿವರುಗಳು ಯಾವುದೇ ಹಮ್ಮುಬಿಮ್ಮು , ದೊಡ್ಡಸ್ತಿಕೆ ಇಲ್ಲದೆ ವ್ಯವಹರಿಸುತ್ತಿರುವುದು ನೋಡಿ ಅಚ್ಚರಿಯಾಯಿತು. ಶೋಭಾ ಕರಂದ್ಲಾಜೆಯವರು ರಾಜ್ಯಸಭೆ, ಲೋಕಸಭೆಯ ರೀತಿ, ನೀತಿಗಳನ್ನು ವಿವರಿಸಿದರು. ಸಂಸತ್ತಿನ ಸಿಬ್ಬಂದಿಗಳೂ ಆತ್ಮೀಯವಾಗಿ ನಡೆದುಕೊಂಡರಲ್ಲದೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡರು.
ಅಲ್ಲಿ ಇದ್ದ ಸಂದರ್ಭ ಸೆಂಟ್ರಲ್ ಹಾಲ್ನಲ್ಲಿ ದೇಶದ ಕೆಲ ಪ್ರಖ್ಯಾತ ಧಾರ್ಮಿಕ, ಸಾಮಾಜಿಕ ಮುಖಂಡರುಗಳ ಸಭೆಯಲ್ಲಿ ನನಗೂ ಭಾಗವಹಿಸಿ ಐದು ನಿಮಿಷಗಳ ಕಾಲ ಭಾಷಣ ಮಾಡಲು ಸಂದರ್ಭ ಸಿಕ್ಕಿತು. ಪ್ರಸ್ತುತ ದೇಶದಲ್ಲಿ ಪ್ರತಿಭೆಗಳಿಗೆ ಪ್ರೋತ್ಸಾಹ ಅವಕಾಶಗಳು ಸಿಗುತ್ತಿರುವ ಬಗ್ಗೆ, ಮಹಿಳಾ ಸಬಲೀಕರಣದ ಅಗತ್ಯತೆಯ ಬಗ್ಗೆ ಭಾಷಣದಲ್ಲಿ ವಿವರಿಸುವ ಅವಕಾಶ ದೊರೆಯಿತು ಎಂದ ಹೆಗ್ಗಡೆಯವರು, ಸಂಸತ್ತಿನ ವಾತಾವರಣದಲ್ಲಿ ಹೊಂದಿಕೊಳ್ಳಲು ಈ ಬಾರಿ ಅವಕಾಶ ಕಡಿಮೆ ಸಿಕ್ಕಿದೆ. ಮುಂದಿನ ಚಳಿಗಾಲದ ಅಧಿವೇಶನದ ಪೂರ್ಣ ಸದುಪಯೋಗಪಡಿಸಿಕೊಳ್ಳಲು ಬಯಸಿದ್ದೇನೆ. ರಾಜ್ಯಸಭೆಯಲ್ಲಿ ಅತ್ಯುತ್ತಮ ಭಾಷಣಗಳನ್ನು ಕೇಳುವ ಸದವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಅಲ್ಲದೆ ಸದಸ್ಯರಿಗೆ ಸಿಗುವ ಹಲವಾರು ಸೌಲಭ್ಯಗಳನ್ನೂ ಈ ಸಂದರ್ಭ ವಿವರಿಸಿದರು.
ಸಂಘದ ಅಧ್ಯಕ್ಷ ಗಣೇಶ ಶಿರ್ಲಾಲು, ಕಾರ್ಯದರ್ಶಿ ಚೈತ್ರೇಶ್ ಇಳಂತಿಲ, ಜತೆಕಾರ್ಯದರ್ಶಿ ಅಶ್ರಫ್ ಆಲಿ ಕುಂಞಿ, ಖಜಾಂಚಿ ಪುಷ್ಪರಾಜ ಶೆಟ್ಟಿ , ಸದಸ್ಯರುಗಳು ಉಪಸ್ಥಿತರಿದ್ದರು.