ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವ ಸಂಭ್ರಮವು 4ನೇ ದಿನಕ್ಕೆ ಪ್ರವೇಶಿಸುತ್ತಿದ್ದು ಮುಖ್ಯವಾಗಿ ಸರ್ವಧರ್ಮಸಮ್ಮೇಳನದ 90 ನೇ ಅಧಿವೇಶನ ನಡೆಯಲಿದ್ದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಉದ್ಘಾಟಿಸಲಿದ್ದಾರೆ.
ನಾಲ್ಕನೇ ದಿನದ ಕಾರ್ಯಕ್ರಮಗಳು:
ಸರ್ವಧರ್ಮ ಸಮ್ಮೇಳನ
ಮಂಗಳವಾರ ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ 5 ಗಂಟೆಯಿಂದ ನಡೆಯುವ ಸರ್ವಧರ್ಮ ಸಮ್ಮೇಳನವನ್ನು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಿವಮೊಗ್ಗದ ಬಹುಶ್ರುತ ವಿದ್ವಾಂಸ ಮತ್ತು ಸುಪ್ರಸಿದ್ಧ ನ್ಯಾಯವಾದಿ ಎಂ.ಆರ್.ಸತ್ಯನಾರಾಯಣ ವಹಿಸಲಿದ್ದಾರೆ. ಉಪನ್ಯಾಸಕರಾಗಿ ಬಸ್ರಿಕಟ್ಟೆ ಧರ್ಮಗುರು ಫಾ. ಮಾರ್ಸೆಲ್ ಪಿಂಟೋ, ವಿಜಯಪುರ ಕ.ಸಾ.ಪ. ಜಿಲ್ಲಾಧ್ಯಕ್ಷ ಹಾಸಿಂಪೀರ ಇ ವಾಲೀಕಾರ, ಮೂಡಬಿದ್ರೆಯ ವಿಶ್ರಾಂತ ಮುಖ್ಯೋಪಾಧ್ಯಾಯ, ವಾಗ್ಮಿ ಮುನಿರಾಜ ರೆಂಜಾಳ ಭಾಗವಹಿಸಲಿದ್ದಾರೆ.
ವಸ್ತುಪ್ರದರ್ಶನ ಮಂಟಪದಲ್ಲಿ ಸಂಜೆ 5.30ರಿಂದ ಉಜಿರೆಯ ಸರ್ವೇಶ್ ದೇವಸ್ಥಳಿಯವರಿಂದ ಶಾಸ್ತ್ರೀಯ ಸಂಗೀತ/ ಭಕ್ತಿ ಸಂಗೀತ, ಬಳಿಕ ಉಳ್ಳಾಲದ ಯಶಸ್ವಿನಿ ಅವರಿಂದ ಸಂಗೀತ, ನಂತರ ಮಂಗಳೂರಿನ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಮತ್ತು ವಾಣಿಶ್ರೀ ವಿ. ಅವರಿಂದ ಯುಗಳ ನೃತ್ಯ. ಕೊನೆಯಲ್ಲಿ ಶಿವಮೊಗ್ಗದ ಜಾದೂಗಾರ್ ಪ್ರಶಾಂತ ಎಸ್.ಹೆಗ್ಡೆ ಇವರಿಂದ ಮ್ಯಾಜಿಕ್ ವಿಸ್ಮಯ ಪ್ರದರ್ಶನಗೊಳ್ಳಲಿದೆ.
ಜುಗಲ್ಬಂದಿ: ಅಮೃವರ್ಷಿಣಿ ಸಭಾಭವನದಲ್ಲಿ ರಾತ್ರಿ ಗಂಟೆ 8.30 ರಿಂದ ವಯಲಿನ್ನಲ್ಲಿ ಆರ್. ಕುಮರೇಶ್, ವೀಣಾದಲ್ಲಿ ವಿದುಷಿ ಡಾ.ಜಯಂತಿ ಕುಮರೇಶ್, ಮೃದಂಗದಲ್ಲಿ ವಿದ್ವಾನ್ ಜಯಚಂದ್ರ ರಾವ್, ತಬಲಾ ಮತ್ತು ಮರ್ಚಿಂಗ್ನಲ್ಲಿ ವಿದ್ವಾನ್ ಪ್ರಮಥ್ ಕಿರಣ್ ಜುಗಲ್ಬಂದಿ ನಡೆಸಿಕೊಡಲಿದ್ದಾರೆ.
ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಕಂಚಿಮಾರುಕಟ್ಟೆ ಉತ್ಸವ ನೆರವೇರಿಲಿದೆ.
ನ.23ರ ಕಾರ್ಯಕ್ರಮಗಳು:
ನ.23 ರಂದು ನಡೆಯುವ ಸಾಹಿತ್ಯ ಸಮ್ಮೇಳನವನ್ನು ರಾಷ್ಟ ಪ್ರಶಸ್ತಿ ವಿಜೇತ, ಚಲನಚಿತ್ರ ನಿರ್ದೆಶಕ ಪಿ. ಶೇಷಾದ್ರಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ರಾಷ್ಟ ಪ್ರಶಸ್ತಿ ಪುರಸ್ಕೃತ ವಿದ್ವಾಂಸ, ಸಂದರ್ಶಕ ಪ್ರಾಧ್ಯಾಪಕ ವಿದ್ವಾನ್ ಡಾ.ಹೆಚ್.ವಿ.ನಾಗರಾಜ ರಾವ್ ವಹಿಸಿದ್ದಾರೆ. ಉಪನ್ಯಾಸಕರಾಗಿ ಸಾಹಿತ್ಯ ಪರಿಚಾರಕ ಮತ್ತು ಸುಶಿಕ್ಷಣ ಸೇವಾಪರ ಸಂಸ್ಥೆ ಸ್ಥಾಪಕ ಸತ್ಯೇಶ್ ಎನ್. ಬೆಳ್ಳೂರು, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಐನಕೈ, ಕನ್ನಡ ಸಹಾಯಕ ಪ್ರಾಧ್ಯಾಪಕ ಮತ್ತು ಲೇಖಕಿ ಡಾ. ಗೀತಾ ವಸಂತ ಭಾಗವಹಿಸಲಿದ್ದಾರೆ.
ವಸ್ತುಪ್ರದರ್ಶನ ಮಂಟಪದಲ್ಲಿ ಸಂಜೆ 5.30 ರಿಂದ ಮಡಿಕೇರಿಯ ಮೇಘಾ ಭಟ್ ಇವರಿಂದ ಶಾಸ್ತ್ರಿಯ ಸಂಗೀತ ಬಳಿಕ ಬೆಂಗಳೂರಿನ ಅಪೂರ್ವ ಅನಿರುದ್ಧ ಇವರಿಂದ ವೀಣಾ ವಾದನ, ನಂತರ ರಾಣೆಬೆನ್ನೂರಿನ ವಿ. ರಜನಿ ಎಲ್. ಕರಿಗಾರ ಇವರಿಂದ ಹಿಂದೂಸ್ಥಾನಿ ಸಂಗೀತ, ಕೊನೆಯಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರದ ವಿದುಷಿ ಶಾಲಿನಿ ಆತ್ಮಭೂಷಣ್ ಇವರಿಂದ ಸಮೂಹ ನೃತ್ಯ ಮತ್ತು ಕೊನೆಯಲ್ಲಿ ಭದ್ರಾವತಿಯ ಪ್ರೀತಮ್ ಮೆಲೋಡಿ ಆರ್ಕೆಸ್ಟಾದ ಶಂಕರ್ ಬಾಬು ಅರ್ಪಿಸುವ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಸಂಗೀತ ನೃತ್ಯ ವೈವಿಧ್ಯ: ಅಮೃತವರ್ಷಿಣಿ ಸಭಾಭವನದಲ್ಲಿ ರಾತ್ರಿ 8.30 ರಿಂದ ಬಹು ಗ್ರ್ಯಾಮಿ ಪ್ರಶಸ್ತಿ ವಿಜೇತ, ಸಂಗೀತ ಸಂಯೋಜಕ ಮತ್ತು ಅರ್ಥ್ ಡೇ ನೆಟ್ವರ್ಕ್ನ ರಾಯಭಾರಿ, ಹೆಸರಾಂತ ಕಲಾವಿದ ರಿಕಿ ಕೇಜ್ ಅವರು ಸಂಗೀತ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಗೌರಿಮಾರುಕಟ್ಟೆ ಉತ್ಸವ ನೆರವೇರಲಿದೆ.