ಬೆಳ್ತಂಗಡಿ: ಇಲ್ಲಿನ ಕಡಂಬಳ್ಳಿ ವಾಳ್ಯಸ್ತರ ಕೃಷಿ ನೀರಿನ ಮೃತ್ಯುಂಜಯ ನದಿಯ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿರುವ ಬೃಹತ್ ಪ್ರಮಾಣದ ಮರ ತೆರವು ಕಾರ್ಯಾಚರಣೆ ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣಾ ತಂಡದ ತಾಲೂಕಿನ ನಾನಾ ಘಟಕಗಳ ವತಿಯಿಂದ, ಬೆಳ್ತಂಗಡಿ ರೋಟರಿ ಕ್ಲಬ್, ಮುಂಡಾಜೆ ಗ್ರಾಮ ಪಂಚಾಯಿತಿ, ಮುಂಡಾಜೆ ರೋಟರಿ ಸಮುದಾಯ ದಳ, ಕಿಂಡಿ ಅಣೆಕಟ್ಟು ಹಿತರಕ್ಷಣಾ ಸಮಿತಿ, ಸ್ಥಳೀಯ ಸಂಘ ಸಂಸ್ಥೆ ಹಾಗೂ ಊರವರ ಸಹಕಾರದಲ್ಲಿ ಭಾನುವಾರ ಜರಗಿತು.
ಕಳೆದ ತಿಂಗಳಲ್ಲಿ ಹಲವಾರು ಬಾರಿ ನದಿ ನೀರು ಏರಿಕೆಯಾದ ಸಮಯದಲ್ಲಿ ಈ ಕಿಂಡಿ ಅಣೆಕಟ್ಟಿನಲ್ಲಿ ಭಾರಿ ಪ್ರಮಾಣದ ಮರಮಟ್ಟು ಸಂಗ್ರಹಗೊಂಡು ಸಮೀಪದ ಮುಂಡ್ರುಪಾಡಿ ಪರಿಸರದ ಹಲವರ ತೋಟಗಳನ್ನು ಆವರಿಸಿದೆ.ಕಿಂಡಿ ಅಣೆಕಟ್ಟಿನಲ್ಲಿ ತ್ಯಾಜ್ಯದೊಂದಿಗೆ ಹೂಳು ತುಂಬಿ,ನದಿ ನೀರು ಸರಾಗವಾಗಿ ಹರಿಯಲು ಅಡ್ಡಿ ಉಂಟಾಗಿತ್ತು. ಇದಕ್ಕೂ ಮೊದಲು ಜುಲೈ ಕೊನೆಯ ವಾರದಲ್ಲಿ ಕಿಂಡಿ ಅಣೆಕಟ್ಟಿನ ಫಲಾನುಭವಿಗಳು ಅರಮಟ್ಟು ತೆರೆವುಗೊಳಿಸಿದ್ದರು.ಈ ಕಾಮಗಾರಿ ನಡೆದ ಎರಡೇ ದಿನಗಳಲ್ಲಿ ಮತ್ತೆ ನದಿಯಲ್ಲಿ ನೀರು ಏರಿಕೆ ಉಂಟಾಗಿ ಭಾರಿ ಪ್ರಮಾಣದ ಮರಮಟ್ಟು ಸಂಗ್ರಹ ಗೊಂಡಿತ್ತು. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮರಮಟ್ಟು ತೆರವಿಗೆ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಹಕಾರ ಕೋರಿದರು. ಅದರಂತೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ರವರ ಮಾರ್ಗದರ್ಶನದಲ್ಲಿ ಯೋಜನಾಧಿಕಾರಿ ಜೈವಂತ್ ಪಟಗಾರ ಅವರ ನಿರ್ದೇಶನದಂತೆ ಕಾಮಗಾರಿ ನಡೆದಿದೆ.
ಈ ಕಿಂಡಿ ಅಣೆಕಟ್ಟಿನಲ್ಲಿ ಮರಮಟ್ಟು ತುಂಬುವ ಸಮಸ್ಯೆ ಮಳೆಗಾಲದಲ್ಲಿ ಪುನರಾವರ್ತನೆ ಕೊಳ್ಳುತ್ತಿದ್ದು ಸಮೀಪದ ಮುಂಡ್ರುಪಾಡಿ ಪರಿಸರದ ತೋಟಗಳಲ್ಲಿ ಕೃಷಿ ಹಾನಿ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ನದಿ ತುಂಬಿ ಹರಿದರೆ ಮತ್ತೆ ಮರಮಟ್ಟು ಸಿಲುಕುವ ಭೀತಿ ಇದೆ. ಇದಕ್ಕೊಂದು ಸೂಕ್ತ ಪರಿಹಾರ ಒದಗಿಸುವಂತೆ ಪರಿಸರದ ಜನತೆ ಆಗ್ರಹಿಸಿದೆ.
ಪ್ರಾಕೃತಿಕ ವಿಕೋಪಗಳಿಂದ ಉಂಟಾಗುವ ಸಮಸ್ಯೆಗಳಿಗೆ ತುರ್ತು ಸ್ಪಂದನೆಗೆ ಸರಕಾರದ ವತಿಯಿಂದ ಆಪತ್ ಮಿತ್ರ ಯೋಜನೆಯೆಲ್ಲಿ ಇತ್ತೀಚೆಗೆ ಅನೇಕ ಯುವಕರಿಗೆ ತರಬೇತಿ ನೀಡಲಾಗಿದೆ. ಆದರೆ ಇವರಿಗೆ ಅಗತ್ಯ ಸೌಕರ್ಯ,ಸಲಕರಣೆ ಒದಗಿಸದ ಕಾರಣ ತರಬೇತಿ ನಡೆದರು ಇದು ಅಧಿಕೃತ ಗೊಂಡಿಲ್ಲ. ತರಬೇತಿ ನಡೆದು ತಿಂಗಳು ಎರಡು ಕಳೆದಿದ್ದರೂ ಈ ಯೋಜನೆ ಫಲಪ್ರದವಾಗದಿರುವುದು ವಿಪರ್ಯಾಸ. ಇಲ್ಲಿನ ಕಾಮಗಾರಿಯಲ್ಲಿ ಆಪತ್ ಮಿತ್ರ ತರಬೇತಿ ಪಡೆದವರು ಭಾಗವಹಿಸಿ ಸಹಕರಿಸಿದ್ದಾರೆ.ಇಂತಹ ಕಡೆ ಅತಿ ಅಗತ್ಯವಾಗಿ ಬೇಕಿರುವ ಇವರ ಸೇವೆಗೆ ಅಗತ್ಯ ಅನುಕೂಲ ನೀಡಿ ಕೂಡಲೇ ಅಧಿಕೃತಗೊಳಿಸುವ ಅಗತ್ಯವಿದೆ.