ಬೆಳ್ತಂಗಡಿ: ಈ ದೇಶದಲ್ಲಿ ಅಲ್ಪಸಂಖ್ಯಾತ ಶ್ರೇಯೋಭಿವೃದ್ಧಿ ದೃಷ್ಟಿಯಿಂದ ಸರಕಾರದ ಅನೇಕ ಯೋಜನೆಗಳನ್ನು ಮೀಸಲಿಡುತ್ತಾ ಬರಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 8 ವರ್ಷದಲ್ಲಿ ಈ ದೇಶದ ಜನರ ಕಾಳಜಿಯಿಂದ ಅನೇಕ ಯೋಜನೆಗಳನ್ನು ನೀಡಿ ಜಗದ್ವಂದ್ಯ ಭಾರತವನ್ನಾಗಿ ಸಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಮೋದಿಯವರ 8 ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಮಂಡಲ ವತಿಯಿಂದ ಉಜಿರೆ ಶಾರದಾ ಮಂಟಪದಲ್ಲಿ ಜೂ.22 ರಂದು ಹಮ್ಮಿಕೊಂಡ ಅಲ್ಪಸಂಖ್ಯಾತ ಬಂಧುಗಳ ಸಮಾವೇಶ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈವರೆಗಿನ ಸರಕಾರಗಳಿಂದ 10 ಪಟ್ಟು ಹೆಚ್ಚು ಅನುದಾನವನ್ನು ಮೀಸಲಿರಿಸಿದ್ದರೆ ಅದು ಪ್ರಧಾನಿ ಮೋದಿ ಸರಕಾರ. ಇದಕ್ಕೆ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರ ಮರು ಆಯ್ಕೆ ಸಾಕ್ಷಿಯಾಗಿದೆ. ಈ ಹಿಂದೆ ಮುಸಲ್ಮಾನ ಸಮುದಾಯವನ್ನು ಮತ ಬ್ಯಾಂಕ್ ಗಾಗಿ ಓಲೈಸಿದ್ದರು. ಆದರೆ ಓಲೈಕೆ ರಾಜಕೀಯವಲ್ಲದೆ 20 ಕೋಟಿ ಉಜ್ವಲ ಯೋಜನೆ ಸೇರಿದಂತೆ ವಿಮಾ ಯೋಜನೆ, ಕಿಸಾನ್ ಯೋಜನೆ, ಭೇಟಿ ಬಚಾವೋ ಭೇಟಿ ಪಡಾವೊ, ನಯಾ ಉಡಾನ್ ಎಂಬಂತೆ ನೂರಾರು ಯೋಜನೆಗಳನ್ನು ನಾವೆಲ್ಲ ಭಾರತೀಯರು ಎಂಬ ಒಂದೇ ಕಲ್ಪನೆಯಡಿ ಅನುಷ್ಠಾನಕ್ಕೆ ತಂದಿರುವುದು 70 ವರ್ಷಗಳಲ್ಲ ಕೇವಲ 8 ವರ್ಷಗಳಲ್ಲಿ ಎಂದು ಹೇಳಿದರು.
ತಾಲೂಕಿನಲ್ಲಿ ಈ ಹಿಂದೆ ರಾಜಕೀಯದಿಂದ ಅಭಿವೃದ್ಧಿ ಕುಂಟಿತವಾಗಿತ್ತು. ಆದರೆ ನಾಲ್ಕು ವರ್ಷದಲ್ಲಿ ಬೇಧಭಾವವಿಲ್ಲದೆ ಸಮಾನತೆಯಿಂದ ಜಾತಿ ಧರ್ಮವನ್ನು ನೋಡದೆ ರಾಜಧರ್ಮದಲ್ಲಿ ಸಹಕಾರ ನೀಡಿದ್ದೇನೆ. ಜೈನ ಸಮುದಾಯವು ಅಹಿಂಸಾ ಮಾರ್ಗದಡಿ ಭಾರತೀಯ ಸಂಸ್ಕೃತಿಯನ್ನು ಬೆಳೆಸುತ್ತಾ ಬಂದಿದೆ. ಜೈನಸಮುಧಾಯ ಭವನಕ್ಕೆ 50 ಲಕ್ಷ ರೂ. ನೆರವು ನೀಡಲಾಗಿದೆ. ಸೇವಾ ಮನೋಭಾವದ ಕ್ರೈಸ್ತ ಸಮುದಾಯದವರ ಚರ್ಚ್ ಗಳ ಅಭಿವೃದ್ಧಿಗೆ ಸಾಕಾರ, ಮುಸಲ್ಮಾನ ಸಮುದಾಯಕ್ಕಾಗಿ 15 ಎಕ್ರೆಯನ್ನು ಕರಾಯದಲ್ಲಿ ಮೀಸಲಿರಿಸಿ ಮೌಲಾನಾ ಅಝಾದ್ ಶಾಲೆಯನ್ನು ನಿರ್ಮಿಸುವಲ್ಲಿ ರಾಜಧರ್ಮದ ಸೇವೆ ನೀಡಿದ್ದೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಕಾಜೂರು ಮಸೀದಿಗೆ 1.50 ಕೋ.ರೂ. ನೆರವು
ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಸರ್ವಧರ್ಮೀಯರ ಕ್ಷೇತ್ರವಾಗಿರುವ ಕಾಜೂರು ದರ್ಗಾದಲ್ಲಿ ಪ್ರವಾಸಿಗರ ಹಿತದೃಷ್ಟಿಯಿಂದ ಸದ್ಭಾವನ ಮಂದಿರ ಹಾಗೂ ವಸತಿ ಗೃಹ ನಿರ್ಮಾಣಕ್ಕೆ 1.50 ಕೋ.ರೂ. ಅನುದಾನ ಒದಗಿಸಲಾಗಿದೆ. ಸಧ್ಯದಲ್ಲೆ ಅಲ್ಪಸಂಖ್ಯಾತ ಸಚಿವರಿಂದಲೇ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಘೋಷಿಸಿದರು.
ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್, ಗಣೇಶ್ ಗೌಡ, ಉಜಿರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಾಬು ಗೌಡ, ಅಲ್ಪಸಂಖ್ಯಾತ ಮೋರ್ಚ ಪ್ರ.ಕಾರ್ಯದರ್ಶಿ ವಾಲ್ಟರ್ ಮೋನಿಸ್ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಟ್ಟು 250 ಮಂದಿ ಸಾಧಕರನ್ನು ಗೌರವಿಸಲಾಯಿತು.
ಮಂಡಲ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅರುಣ್ ಕ್ರಾಸ್ತಾ ಪ್ರಾಸ್ತಾವಿಸಿದರು. ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕ್ರಮ ಪ್ರಭಾರಿ ಶಶಿಧರ್ ಕಲ್ಮಂಜ ಸ್ವಾಗತಿಸಿದರು. ಅಲ್ಪಸಂಖ್ಯಾತ ಮೋರ್ಚಾ ಪ್ರ.ಕಾರ್ಯದರ್ಶಿ ಅಭಿಜಿತ್ ಜೈನ್ ವಂದಿಸಿದರು. ಶಶಿಧರ್ ಅಳದಂಗಡಿ ವಂದೇಮಾತರಂ ಹಾಡಿದರು. ಅನೂಪ್ ಜೆ.ಪಾಯಸ್ ಕಾರ್ಯಕ್ರಮ ನಿರೂಪಿಸಿದರು.