ಬೆಳ್ತಂಗಡಿ: 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ನಡೆದ ನೈತಿಕ ಪೊಲೀಸ್ಗಿರಿಯಲ್ಲಿ ವ್ಯಕ್ತಿಯೊಬ್ಬರಿಗೆ ಯುವಕರ ಗೊಂಪೊಂದು ದೈಹಿಕ ಹಲ್ಲೆ ಮಾಡಿದ್ದು ಈ ವೇಳೆ ಅವರ ರಕ್ಷಣೆಗೆ ಧಾವಿಸಿದ ವ್ಯಕ್ತಿಯನ್ನು ದೂಡಿಹಾಕಿದಾಗ ಅವರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಶಾಂತಿನಗರ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಶಾಂತಿನಗರ ನಿವಾಸಿ ಜಾರಪ್ಪ ನಾಯ್ಕ್ (55)ಎಂಬವರೇ ಈ ಘಟನೆ ವೇಳೆ ಸಾವನ್ನಪ್ಪಿದವರು. ಸ್ಥಳೀಯ ನಿವಾಸಿಗಳಾದ ಚಂದ್ರಕಾಂತ್ ನಾಯ್ಕ್, ಮನೋಹರ್ ಗೌಡ, ಹರಿಪ್ರಸಾದ್ ಪೂಜಾರಿ, ದೀಪಕ್ ಶೆಟ್ಟಿ ಇವರು ಆರೋಪಿಗಳು.
ಬಾಲಕಿಗೆ ಲೈಂಗಿಕ ಹಲ್ಲೆ ಮಾಡಿದ್ದಾರೆ ಎಂಬ ಆರೋಪದಡಿ ನಾರಾಯಣ ನಾಯ್ಕ( 47) ಎಂಬವರಿಗೆ ತಂಡ ಶುಕ್ರವಾರ ಸಂಜೆ ಹಲ್ಲೆ ನಡೆಸಿತ್ತು. ಈ ವೇಳೆ ವಿವರ ಅರಿತು ಜಾರಪ್ಪ ನಾಯ್ಕ ಅವರು ಸ್ಥಳಕ್ಕೆ ಬಂದು ಹಲ್ಲೆ ತಡೆಯಲು ಮುಂದಾದಾಗ ಅವರನ್ನು ತಂಡ ದೂಡಿದಾಗ ನೆಲಕ್ಕೆ ಬೀಳುವ ರಭಸದಲ್ಲಿ ಅವರನ್ನು ತಡೆಯುತ್ತಿದ್ದಂತೆ ಅವರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಅಸುನೀಗಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ನಾರಾಯಣ ನಾಯ್ಕ ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಿಂದ ಮೃತರಾದ ಜಾರಪ್ಪ ನಾಯ್ಕ ನಾರಾಯಣ ನಾಯ್ಕ ಅವರ ಪತ್ನಿಯ ಅಕ್ಕನ ಪತಿಯಾಗಿದ್ದಾರೆ. ಶಾಂತಿನಗರ ಆಟದ ಮೈದಾನದ ಬಳಿ ಘಟನೆ ನಡೆದಿದೆ.
ವಿವರ ಅರಿತು ಸ್ಥಳಕ್ಕೆ ಆಗಮಿಸಿದ ಜಾರಪ್ಪ ನಾಯ್ಕ ಅವರ ಪುತ್ರ ರಾಜಶೇಖರ್ ಅವರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆ(ಎಟ್ರಾಸಿಟಿ) ಮತ್ತು ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದೆ.