ಬಂಟ್ವಾಳ : ಸದಾ ಒಂದಿಲ್ಲೊಂದು ಕಾರಣದಿಂದ ಟ್ರಾಫಿಕ್ ಜಾಮ್ಸಮಸ್ಯೆ ಎದುರಿಸುತ್ತಿರುವ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರುವಿನಲ್ಲಿ ಶುಕ್ರವಾರ ಅಡುಗೆ ಎಣ್ಣೆ ಸಾಗಾಟದ ಟ್ಯಾಂಕರ್ ಲಾರಿಯೊಂದು ಕೆಟ್ಟು ನಿಂತು ತಾಸುಗಟ್ಟಲೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಮಾಣಿ ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲೇ ಕೆಟ್ಟು ನಿಂತಿರುವುದರಿಂದ ಸಮಸ್ಯೆ ಮತ್ತಷ್ಟು ಜಟಿಲಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪುತ್ತೂರು ಕಡೆಗೆ ಸೂರಿಕುಮೇರುವಿನಿಂದ ಮಾಣಿವರೆಗೆ, ಕಲ್ಲಡ್ಕ ಕಡೆಯಲ್ಲಿ ದಾಸಕೋಡಿವರೆಗೆ ವಾಹನಗಳ ಸರತಿ ಸಾಲು ಕಂಡು ಬಂತು.
ಟ್ಯಾಂಕರ್ ದುರಸ್ತಿ ಕಾರ್ಯ ಸುಲಭವಲ್ಲದ ಹಿನ್ನೆಲೆಯಲ್ಲಿ ಜಲ್ಲಿ ಹಾಕಿ ರಸ್ತೆಯನ್ನೇ ಅಗಲೀಕರಣಗೊಳಿಸಿ ವಾಹನಸಂಚಾರಕ್ಕೆ ತಕ್ಕಮಟ್ಟಿಗೆ ಅನುಕೂಲ ಮಾಡಿಕೊಡಲಾಯಿತು.ವಿಟ್ಲ ಪೊಲೀಸರು ಹಾಗೂ ಸ್ಥಳೀಯ ಯುವಕರ ತಂಡ ಸುಗಮವಾಹನ ಸಂಚಾರಕ್ಕೆ ನೆರವಾದರು.