ಮಂಗಳೂರು: ಪುತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಡಿವಿ ಸದಾನಂದ ಗೌಡ ಅವರ ಭಾವಚಿತ್ರವಿರುವ ಬ್ಯಾನರ್ ನಲ್ಲಿ ಶ್ರದ್ದಾಂಜಲಿ ಎಂದು ಬರೆದು , ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿತ್ತು.ಇದೀಗ ಪೊಲೀಸರು ಬೆತ್ತ ಹಿಡಿದು ಬಾರಿಸಿ ಬೆನ್ನು ಪುಡಿ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆನ್ನುವ ಆರೋಪ ಕೇಳಿ ಬಂದಿದೆ. ಅಲ್ಲದೆ ಅರುಣ್ ಪುತ್ತಿಲ ಠಾಣೆಯಲ್ಲಿದ್ದವರನ್ನು ಬಿಡಿಸಿ ಕರೆ ತಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನ್ಯೂಸ್ ಕನ್ನಡ ವೆಬ್ಗೆ ನೀಡಿರುವ ಪುತ್ತೂರು ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ, ಸಂಘಟನೆಯ ಕಾರ್ಯಕರ್ತರನ್ನು ಠಾಣೆಗೆ ಕರೆದೊಯ್ದು ಹೀನಾಯವಾಗಿ ಹಲ್ಲೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಹಿಂದು ಸಮಾಜದ ಯಾರಿಗೂ ಕೂಡ ನೋವುಂಟಾದಲ್ಲಿ ಸ್ಪಂದನೆ ಮಾಡುವುದು ನನ್ನ ಕರ್ತವ್ಯ ಅದನ್ನು ನಾನು ಮಾಡಿದ್ದೇನೆ ಎಂದಿದ್ದಾರೆ.
ಪಕ್ಷ, ಸಂಘಟನೆಗಾಗಿ ದುಡಿದ ಕಾರ್ಯಕರ್ತರನ್ನು ಈ ರೀತಿ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇಲಾಖೆಯವರು ಈ ನಿಟ್ಟಿನಲ್ಲಿ ಸಮರ್ಥವಾಗಿ ಕೆಲಸ ಮಾಡಬೇಕಿದೆ. ಪೊಲೀಸರು ಅಮಾಯಕರ ಮೇಲೆ ಹಲ್ಲೆ ನಡೆಸುವ ಘಟನೆ ನಡೆಸಬಾರದು. ಇಂತಹ ಕೃತ್ಯಗಳು ಮುಂದುವರಿದಲ್ಲಿ ಇದಕ್ಕೆ ತಕ್ಕ ಉತ್ತರವನ್ನು ಸಂಘಟನೆ, ಸಮಾಜದ ಮೂಲಕ ನೀಡುತ್ತೇವೆ.
ಒಬ್ಬ ರಾಜಕಾರಣಿ ಹಿಂದು ಕಾರ್ಯಕರ್ತನಿಗೆ ಧಿಕ್ಕಾರ ಕೂಗುತ್ತಾರೆ ಎಂದಾದರೆ. ಅದಕ್ಕೆ ಏನೆಂದು ಹೇಳಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆಯ ಹಿಂದೆ ಯಾರಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಬ್ಯಾನರ್ಗೆ ಚಪ್ಪಲಿ ಹಾರ ಹಾಕಿರುವುದು ಕಾರ್ಯಕರ್ತರ ಆಕ್ರೋಶದ ಪ್ರತೀಕ ಹಾಗೂ ಸಹಜ ಬೆಳವಣಿಗೆ. ಪ್ರಧಾನಿ ಮೋದಿ ಅವರ ಬ್ಯಾನರ್ ಗೆ ಬೆಂಕಿ ಹಚ್ಚುವ ಕೃತ್ಯಗಳು ನಡೆದಾಗ ಇದೇ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿಲ್ಲ. ಹಿಂದು ಸಂಘಟನೆ, ಪಕ್ಷದ ಕಾರ್ಯಕರ್ತರು ತಮ್ಮ ಶ್ರಮಕ್ಕೆ ಬೆಲೆ ಇಲ್ಲವೆಂಬ ಆಕ್ರೋಶದಿಂದ ನಡೆಸಿದ ಕೃತ್ಯದ ಬಗ್ಗೆ ಕುಳಿತು ಮಾತನಾಡಿ ಅದನ್ನು ಬಗೆಹರಿಸುವ ಕೆಲಸ ಮಾಡಬೇಕಿತ್ತು. ಅದು ಬಿಟ್ಟು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವ ಕೃತ್ಯ, ಧಿಕ್ಕಾರ ಕೂಗಲು ಇವರಿಗೆ ಅಧಿಕಾರ ನೀಡಿದವರು ಯಾರು ಎಂದು ಅರುಣ್ ಪುತ್ತಿಲ ಪ್ರಶ್ನಿಸಿದ್ದಾರೆ.
ಮತ ಎಣಿಕೆ ಬಳಿಕ ಹತ್ತು ಹಲವು ಹತಾಶೆಯ ಕೃತ್ಯ ನಡೆದಿದೆ. ವಿಟ್ಲದಲ್ಲಿ ಬಾಲಕಿಯ ಅತ್ಯಾಚಾರ ಯತ್ನ, ಗ್ಯಾಸ್ ಏಜೆಂಟ್ ಗೆ ಸಾರ್ವಜನಿಕವಾಗಿ ಹಲ್ಲೆ ಮಾಡಲಾಯಿತು. ಕೂರ್ನಡ್ಕದಲ್ಲಿ ಕೇಸರಿ ಬಟ್ಟೆ ಉಟ್ಟ ಕಾರಣಕ್ಕೆ ಹಲ್ಲೆ ಮಾಡಲಾಯಿತು. ಆದರೆ ಹಿಂದುತ್ವದ ಹೆಸರಿನಲ್ಲಿ ಅಧಿಕಾರ ಪಡೆದವರು ಯಾರೂ ಕೂಡ ಪ್ರಶ್ನೆ ಮಾಡುವ ಗೋಜಿಗೆ ಹೋಗಿಲ್ಲ. ನಿನ್ನೆ ಮಸೀದಿಯಿಂದ ಹೊರಟ ಮಕ್ಕಳು ಕಲ್ಲು ಬಿಸಾಡಿ ಬ್ಯಾನರ್ ಹರಿಯುವ ಕೆಲಸ ಮಾಡಿದ್ದಾರೆ. ಇಂತಹ ಕಾರ್ಯ ಪ್ರೇರೇಪಣೆಯಿಂದ ಮಾತ್ರ ನಡೆಯಲು ಸಾಧ್ಯ. ಸಮಾಜದ ಮೇಲೆ ಸಂಘರ್ಷಕ್ಕೆ ಸಿದ್ಧ ಎಂಬ ಎಂಬ ನಿಟ್ಟಿನಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ಇನ್ನು ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದಿಂದ ಬಿಜೆಪಿ ಅಭ್ಯರ್ಥಿಯಾಗಬೇಕು ಎಂದು ಪ್ರಧಾನಿಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಚುನಾವಣೆ ಸಂದರ್ಭ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರು, ಜಿಲ್ಲೆಯ ಸ್ವಾಮೀಜಿಗಳು, ಬಿಜೆಪಿ ಹಿರಿಯರು, ಸಂಘಟನೆಯ ಪ್ರಮುಖರು ಇವರ ಯೋಚನೆ, ಯೋಜನೆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹೆಜ್ಜೆ ಇಡಲಾಗುವುದು.
ಎಲ್ಲರ ಜೊತೆಗೆ ಸಮಾಲೋಚನೆ ನಡೆಸಿಯೇ ಮುಂದೆ ನಿರ್ಧಾರ ಕೈಗೊಳ್ಳಲಾಗುವುದು. ಕಾರ್ಯಕರ್ತರಿದ್ದಲ್ಲಿ ನಾನಿದ್ದೇನೆ. ಕಾರ್ಯಕರ್ತರು, ಹಿರಿಯ ಭಾವನೆಗಳಿಗೆ ಬೆಲೆ ಕೊಡುವುದು ನಮ್ಮ ಕರ್ತವ್ಯ. ನಾವೆಲ್ಲರೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಣ ಪಡೆದಿರುವವರು ನಾವು. ಈ ರಾಷ್ಟ್ರ ಪರಮ ವೈಭವದತ್ತ ಹೋಗಬೇಕು ಹಿಂದು ರಾಷ್ಟ್ರ ಆಗಬೇಕು ಎಂಬುದು ನಮ್ಮ ಕಲ್ಪನೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರಿಗೆ ನಮ್ಮ ಬೆಂಬಲ ಇದೆ ಎಂದು ತಿಳಿಸಿದ್ದಾರೆ.