ಮಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬೆನ್ನಲ್ಲೇ ನೈತಿಕ ಪೊಲೀಸ್ಗಿರಿಗೆ ಕಡಿವಾಣ ಹಾಕಲು ನಿರ್ಧಾರ ಮಾಡಿದೆ. ಅದರಂತೆ ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರಿನಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಕಾರ್ಯಾರಂಭವಾಗಿದೆ. ಸಿಸಿಬಿ ವಿಭಾಗದ ಎಸಿಪಿ ನೇತೃತ್ವದಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ಕೆಲಸ ಮಾಡಲಿದ್ದು, ಸಿಎಸ್ವಿ ಇನ್ಸ್ಪೆಕ್ಟರ್ ಸೇರಿದಂತೆ ಐವರು ಸಿಬ್ಬಂದಿಯೊಂದಿಗೆ ಆ್ಯಂಟಿ ಕಮ್ಯೂನಲ್ ವಿಂಗ್ ಕಾರ್ಯಾರಂಭಿಸಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ.
ಇನ್ನು ಈ ಬಗ್ಗೆ ಕುಲದೀಪ್ ಕುಮಾರ್ ಜೈನ್ ಪ್ರತಿಕ್ರಿಯಿಸಿದ್ದು, ಮಂಗಳೂರು ನಗರದ ಸಿಸಿಬಿ ಎಸಿಪಿ ಉಸ್ತುವಾರಿಯಲ್ಲಿ ‘ಆ್ಯಂಟಿ ಕಮ್ಯುನಲ್ ವಿಂಗ್’ ತಂಡ ರಚನೆ ಮಾಡಲಾಗಿದ್ದು, ನಗರದಲ್ಲಿ ನಡೆಯಬಹುದಾದ ನೈತಿಕ ಪೊಲೀಸ್ಗಿರಿ ಸಮಸ್ಯೆಯನ್ನು ನಿಭಾಯಿಸುವುದು ಇದರ ಕರ್ತವ್ಯವಾಗಿದೆ. ಈ ಹಿಂದೆ ವರದಿಯಾಗಿರುವ ಕೋಮು ವಿಚಾರಕ್ಕೆ ಸಂಬಂಧಿಸಿದ ಎಲ್ಲಾ ಕೊಲೆ, ಕೊಲೆ ಪ್ರಯತ್ನ, ದೊಂಬಿ ಪ್ರಕರಣಗಳು. ನೈತಿಕ ಪೊಲೀಸ್ಗಿರಿ ಮತ್ತು ಗೋವುಗಳ ಕಳ್ಳತನ, ಅಕ್ರಮ ಗೋ-ಸಾಗಾಟ, ಗೋ-ವಧೆ ಮುಂತಾದ ಪ್ರಕರಣಗಳನ್ನು ಈ ವಿಂಗ್ ಪರಿಶೀಲನೆ ನಡೆಸಲಿದೆ.ಕೋಮು ವಿಚಾರಕ್ಕೆ ಸಂಬಂಧಪಟ್ಟಂತೆ ಕಾರ್ಯಾಚರಿಸುತ್ತಿರುವ ಎಲ್ಲಾ ಸಂಘಟನೆಗಳ ಬಗ್ಗೆ ಮಾಹಿತಿಯನ್ನ ಆ್ಯಂಟಿ ಕಮ್ಯುನಲ್ ವಿಂಗ್ ಸಂಗ್ರಹ ಮಾಡಲಿದೆ ಎಂದು ತಿಳಿಸಿದರು.