ಮಂಗಳೂರು: ಕೇಂದ್ರ ಸರಕಾರ, ರಾಜ್ಯ ಸರಕಾರಗಳ ಸಹಯೋಗದೊಂದಿಗೆ ಒಟ್ಟು 4,750 ಕೋ.ರೂ.ಅನುದಾನವನ್ನು ಕಳೆದ ನಾಲ್ಕುವರೆ ವರ್ಷಗಳ ಅವಧಿಯಲ್ಲಿ ತಮ್ಮ ಕ್ಷೇತ್ರಕ್ಕೆ ತಂದಿರುವುದಾಗಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಂಗಳವಾರ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ಅವರು ಕರ್ನಾಟಕದ ಇತಿಹಾಸದಲ್ಲಿ ಈ ಹಿಂದೆಂದೂ ಮಂಗಳೂರಿಗೆ ಇಷ್ಟೊಂದು ದೊಡ್ಡ ಮೊತ್ತದ ಅನುದಾನ ಬಂದದ್ದಿಲ್ಲ ಎಂದರು.
ಆದರೆ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬವಾಗಿದೆ. ಮಳೆ ಮತ್ತು ಎರಡು ವರ್ಷಗಳ ಕೊರೊನಾ ಜಾಗತಿಕ ಸಾಂಕ್ರಾಮಿಕದಿಂದ ಕಾಮಗಾರಿಗಳು ವಿಳಂಬಗತಿಯಲ್ಲಿ ಸಾಗಿವೆ. ನಗರದಲ್ಲಿ ಒಂದು ರಸ್ತೆ ಕಾಮಗಾರಿ ಮುಗಿದ ಬಳಿಕವೇ ಇನ್ನೊಂದು ಕಾಮಗಾರಿಯನ್ನು ಆರಂಭ ಮಾಡಬೇಕಾಗಿದೆ.ಇದೂ ವಿಳಂಬಕ್ಕೆ ಇನ್ನೊಂದು ಕಾರಣ ಎಂದವರು ವಿವರಿಸಿದರು.
ನಗರದಲ್ಲಿ 792 ಕೋ.ರೂ.ವೆಚ್ಚದ ಜಲಸಿರಿ ಯೋಜನೆ ಅನುಷ್ಠಾನಕ್ಕೆ ಬರುತ್ತಿದೆ. ಈಗ 5 ರಿಂದ 7 ಪ್ರತಿಶತದಷ್ಟು ಮಾತ್ರ ಕಾಮಗಾರಿ ಆಗಿದೆ.2055ನೇ ಇಸವಿಯಲ್ಲಿ ನಗರದಲ್ಲಿ ಇರಬಹುದಾದ ಜನಸಂಖ್ಯೆಯ ಲೆಕ್ಕಾಚಾರದಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ.ಈಗಾಗಲೇ 18 ಜಲ ಸಂಗ್ರಾಹಕಗಳನ್ನು ಕಟ್ಟಲು ಆರಂಭಿಸಲಾಗಿದೆ ಎಂದೂ ಶಾಸಕ ಕಾಮತ್ ತಿಳಿಸಿದರು.
ಪ್ರಸ್ತುತ ನಗರಕ್ಕೆ ದಿನಕ್ಕೆ 162 ಎಂ.ಎಲ್.ಡಿ. ನೀರು ಪಂಪ್ ಆಗುತ್ತಿದೆ.ಅದರಲ್ಲಿ 50 ಎಂ.ಎಲ್.ಡಿ. ಸೋರಿಕೆ ಆಗುತ್ತದೆ. ಹೊಸ ಯೋಜನೆಯಲ್ಲಿ ಎಲ್ಲೆಲ್ಲಿ ಸೋರಿಕೆಯಾಗುತ್ತಿದೆ ಎಂಬ ಬಗ್ಗೆ ಪಾಲಿಕೆಯಲ್ಲಿ ಕುಳಿತಲ್ಲೇ ತಿಳಿದುಕೊಳ್ಳಬಹುದಾಗಿದೆ ಎಂದೂ ಅವರು ಹೇಳಿದರು.
ಹರೇಕಳ ಡ್ಯಾಂನಿಂದಲೂ 50 ಎಂ.ಎಲ್.ಡಿ. ನೀರು ನಗರಕ್ಕೆ ಒದಗಿಸುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದೂ ಅವರು ಹೇಳಿದರು.