ಬಂಟ್ವಾಳ: ರೈತರೇ ದೇಶದ ಬೆನ್ನೆಲು ಎಂದು ಹೇಳಿ, ಈಗ ಧಮನಕಾರಿ ನೀತಿಗಳ ಮೂಲಕ ಬೆನ್ನೆಲುಬನ್ನೇ ಕೀಳುವ ಕಾರ್ಯಕ್ಕೆ ಸರ್ಕಾರಗಳು ಮುಂದಾಗಿದೆ. ಅನ್ನದಾತರ ಹಕ್ಕನ್ನು ಮೊಟಗೊಳಿಸುವ ಕಾರ್ಯವನ್ನು ಯಾವತ್ತೂ ಯಾರೂ ಮಾಡಬಾರದು. ಪರಿಹಾರ ನೆಪದಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕಾರ್ಯದ ವಿರುದ್ಧ ಒಗ್ಗಾಟ್ಟಾಗಿ ರಾಜಕೀಯ ರಹಿತವಾದ ಹೋರಾಟ ನಡೆಸಬೇಕು ಎಂದು ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್. ಪಿ. ಚಂಗಪ್ಪ ಹೇಳಿದರು.
ಅವರು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ವಿಟ್ಲ ರೈತ ಹೋರಾಟ ಸಂಘ ನೇತೃತ್ವದಲ್ಲಿ ನಡೆದ ೪೦೦ ಕೆ.ವಿ. ಉಡುಪಿ – ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗ ವಿರೋಧಿಸಿ ವಿಟ್ಲ ಜೈನ ಬಸದಿಯಿಂದ ನಾಡಕಛೇರಿ ಚಲೋ ಸತ್ಯಾಗ್ರಹವನ್ನುದ್ದೇಶಿಸಿ ಮಾತನಾಡಿದರು.
ರೈತ ಸಂಘ ಜಿಲ್ಲಾ ಸಲಹೆಗಾರ ಮುರುವ ಮಹಾಬಲ ಭಟ್ ಮಾತನಾಡಿ ವ್ಯವಸ್ಥಿತವಾಗಿ ದಾಖಲೆಗಳಿಂದ ಕೃಷಿಯನ್ನು ತೆಗೆದು ಹಾಕುವ ಕಾರ್ಯವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ವಿವಿಧ ಯೋಜನೆಗಳ ಹೆಸರಿನಲ್ಲಿ ಹೊಳೆಗಳಿಗೆ ಹೂಳು ತುಂಬಿಸಿ, ಅಕ್ಕಪಕ್ಕದ ಕೃಷಿಕರನ್ನು ಓಡಿಸಿ ಜಾಗ ಸ್ವಾಧೀನ ಪಡಿಸುವ ಕಾರ್ಯ ನಡೆಯುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ರೈತ ವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತಿದೆ ಎಂದರು.
ಭೂಮಿ ಹೋಗುವ ವಿಚಾರದಲ್ಲಿ ಪರಿಹಾರವೂ ಬೇಡ, ವಿದ್ಯುತ್ ಪ್ರಸರಣ ಮಾರ್ಗದ ರಚನೆ ಬಂಟ್ವಾಳ ತಾಲೂಕಿನಲ್ಲಿ ನಡೆಯಬಾರದು ಎಂಬ ಬೇಡಿಕೆಯನ್ನು ರೈತ ಸಂಘದ ಕಡೆಯಿಂದ ತಹಸೀಲ್ದಾರ್ ಮುಂದೆ ಇಡಲಾಯಿತು. ಈಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಜತೆಗೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರೈತರ ಸಭೆ ನಡೆಸುವುದಾಗಿ ಹೇಳಿದರು. ರೈತರ ಸಭೆಯನ್ನು ಸಂಸದರ ಹಾಗೂ ಶಾಸಕರ ಉಪಸ್ಥಿತಿಯಲ್ಲಿ ಸ್ಥಳೀಯ ಮಟ್ಟದಲ್ಲಿ ನಡೆಸಬೇಕೆಂಬ ಬೇಡಿಕೆಯನ್ನಿಟ್ಟು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ನೆಲ ಜಲ ಸಂರಕ್ಷಣಾ ಸಮಿತಿಯ ಅಧ್ಯಕ್ಷ ರಾಮಣ್ಣ ಶೆಟ್ಟಿ ಪಾಳಿಗೆ, ಸಿಐಟಿಯು ಮುಖಂಡ ರಾಮಣ್ಣ ವಿಟ್ಲ, ದ. ಕ. ಜಿಲ್ಲಾ ದಲಿತ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ಕುಪ್ಪೆಪದವು, ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಗೌಡ, ಈಶ್ವರ ಭಟ್, ಸಂಚಾಲಕ ರೂಪೇಶ್ ರೈ ಅಲಿಮಾರು, ಸವಣೂರು ಅಧ್ಯಕ್ಷ ಯತೀಂದ್ರ ಶೆಟ್ಟಿ ಮಠ, ರೈತ ಮುಖಂಡರಾದ ಶಿವಣ್ಣ ಗೌಡ ಇಡ್ಯಾಡಿ, ರಾಜೇಂದ್ರ ಇಡ್ಯಾಡಿ, ರಝಾಕ್ ಅಂಕಜಾಲು, ಸುದರ್ಶನ್ ನಾಯಕ್ ಕಂಪವಿಟ್ಲ ರೈತ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಕಾರ್ಯದರ್ಶಿಗಳಾದ ರೋಹಿತಾಕ್ಷ ಭಂಗ, ಲಕ್ಷ್ಮೀನಾರಾಯಣ, ಕೃಷ್ಣ ಪ್ರಸಾದ್, ಸಂತ್ರಸ್ತ ರೈತರಾದ ಚಿತ್ತರಂಜನ್ ನೆಕ್ಕುಲ್ಲಾರು, ಜನಾರ್ಧಾನ ಬಾಯಿಲ, ರಘು ಪೂಜಾರಿ, ಧನಂಜಯ ಮಂಗಿಲಪದವು, ಸಂಜೀವ ಮಂಜಲಾಡಿ, ವಿಶು ಮಂಜಲಾಡಿ, ಉಮೇಶ್ ಕೇಪು, ಆನಂದ ಪುಚ್ಚೆಗುತ್ತು, ಅಣ್ಣಿ ಗೌಡ, ಲೋಕನಾಥ ಶೆಟ್ಟಿ ಕೊಲ್ಯ, ಶೀಲ ವೀರಕಂಬ, ಸುಭಾಶ್ ರೈ ಮುಡಿಮಾರು, ಅಶೋಕ ಮಚ್ಚ ಮತ್ತಿತರರು ಭಾಗವಹಿಸಿದರು.
ತಹಸೀಲ್ದಾರ್ ರಶ್ಮಿ ಎಸ್. ಆರ್. ಸ್ಥಳಕ್ಕಾಗಮಿಸಿ ರೈತರ ಬೇಡಿಕೆಯನ್ನು ಸ್ವೀಕರಿಸಿದರು. ಉಪತಹಸೀಲ್ದಾರ್ ವಿಜಯ ವಿಕ್ರಮ್, ವಿಟ್ಲ ಪ್ರಭಾರ ಕಂದಾಯ ನಿರೀಕ್ಷಕ ಮಂಜುನಾಥ ಕೆ. ಎಚ್., ವಿಟ್ಲ ಕಸಬಾ ಗ್ರಾಮದ ಗ್ರಾಮಕರಣಿಕ ಪ್ರಕಾಶ್ ಹಾಜರಿದ್ದರು. ವಿಟ್ಲ ಪೊಲೀಸ್ ನಿರೀಕಕ್ಷ ನಾಗರಾಜ್ ಎಚ್. ಇ., ಉಪನಿರೀಕ್ಷಕರಾದ ಸಂಜೀವ ಪುರಷ, ಸಂದೀಪ್ ಕುಮಾರ್ ಶೆಟ್ಟಿ ಸೇರಿ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿಗಳು ಬಂದೋಬಸ್ತು ಕಲ್ಪಿಸಿದ್ದರು.
ಪ್ರತಿಭಟನೆ ನಡುವೆ ಸರ್ವೇ?
ವಿಟ್ಲ ಜೈನ ಬಸದಿಯಿಂದ ನಾಡಕಛೇರಿಗೆ ರೈತರ ಜಾಥಾ ಸಂಚರಿಸುತ್ತಿದ್ದರೆ, ಕಂಪನಿಯ ಕೆಲವು ವ್ಯಕ್ತಿಗಳು ಪುಚ್ಚೆಗುತ್ತು ಭಾಗಕ್ಕೆ ಸರ್ವೇ ಕಾರ್ಯಕ್ಕೆಂದು ಆಗಮಿಸಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ರೈತರು ರಸ್ತೆಯಲ್ಲೇ ಕುಳಿತು ಸರ್ವೇ ಕಾರ್ಯಕ್ಕೆ ಬಂದವರನ್ನು ಸ್ಥಳಕ್ಕೆ ಕರೆ ತರಬೇಕು. ಇಲ್ಲವಾದರೆ ಸರ್ವೆಗೆ ಬಂದ ಸ್ಥಳಕ್ಕೆ ಜಾಥಾ ಹೋಗಲಿದೆ ಎಂದು ಎಚ್ಚರಿಕೆ ನೀಡಿದರು. ಪೊಲೀಸರು ಸ್ಥಳಕ್ಕೆ ತೆರಳಿ ಸರ್ವೇ ನಡೆಸದಂತೆ ಸೂಚಿಸುವುದಾಗಿ ಹೇಳಿದ ಬಳಿಕ ಜಾಥಾ ಮುಂದುವರಿಯಿತು.
ನಾಡ ಕಛೇರಿ ಮುಂಭಾಗ ಅಡಿಗೆ ಸಿದ್ದತೆ:
ಪ್ರತಿಭಟನೆ ನಡೆಯುವ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕೆಂದು ವಾರದ ಹಿಂದೆ ಮನವಿ ಪತ್ರ ಸಲ್ಲಿಸಲಾಗಿತ್ತು. ಒಂದು ದಿನದ ಮೊದಲು ದೂರವಾಣಿಯಲ್ಲಿ ಕೇಳಿಕೊಳ್ಳಲಾಗಿತ್ತು. ಆದರೆ ಪ್ರತಿಭಟನಾ ಸ್ಥಳಕ್ಕೆ ಕೇವಲ ಉಪತಹಸೀಲ್ದಾರ್ ಮಾತ್ರ ಬಂದು ರೈತರನ್ನು ಮಾತನಾಡಿಸುವ ಕಾರ್ಯಕ್ಕೆ ಮುಂದಾದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಬಾರದ ಹಿನ್ನಲೆಯಲ್ಲಿ ರೈತರು ರಾತ್ರಿಯಾದರೂ ಇಲ್ಲಿಂದ ಕದಲುವುದಿಲ್ಲ ಎಂದು ಎಚ್ಚರಿಸಿದರು. ಮಧ್ಯಾಹ್ನವಾದ ಹಿನ್ನಲೆಯಲ್ಲಿ ಇಲ್ಲೇ ಅಗತ್ಯ ವಸ್ತುಗಳನ್ನು ತಂದು ಗ್ಯಾಸ್ ಸ್ಟವ್ ಮೂಲಕ ಅಡಿಗೆ ಮಾಡುವ ಕಾರ್ಯಕ್ಕೆ ಮುಂದಾದರು.