ಬಂಟ್ವಾಳ : ಶ್ರೀಮದ್ ಎಡನೀರು ಮಠದ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತಿ ಮಹಾಸ್ವಾಮಿಗಳವರ ಸಂಸ್ಮರಣೆ ಹಾಗೂ ಹಿರಿಯ ಸಾಮಾಜಿಕ ನೇತಾರ ಎ.ಸಿ.ಭಂಡಾರಿ ಅವರಿಗೆ ಅಭಿನಂದನೆ ಕಾರ್ಯಕ್ರಮ ಬಿ.ಸಿ.ರೋಡ್ ನ ಸ್ಪರ್ಶ ಕಲಾ ಮಂದಿರದಲ್ಲಿ ಭಾನುವಾರ ನಡೆಯಿತು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದೀಪೋಜ್ವಲನಗೈದರು. ಕೇಶವಾನಂದ ಭಾರತಿ ಸ್ವಾಮೀಜಿಯವರು ಸರಳ ಮತ್ತು ಸಹಜ ವ್ಯಕ್ತಿತ್ವದವರು. ಎ.ಸಿ.ಭಂಡಾರಿ ಅವರ ಅಭಿನಂದನೆಯೂ ನಡೆಯುತ್ತಿರುವ ಈ ಕಾರ್ಯಕ್ರಮ ಔಚಿತ್ಯಪೂರ್ಣ ಏಕೆಂದರೆ ಅವರೂ ಸಹಜ ಹಾಗೂ ನೇರ ವ್ಯಕ್ತಿತ್ವದವರು. ಮಹಾಪುರುಷರ ಸಾಂಗತ್ಯದೊಂದಿಗೆ ಬೆರೆತವರು ಎಂದರು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕೇಶವಾನಂದ ಶ್ರೀಗಳು ಪ್ರಾತಸ್ಮರಣೀಯರು, ಎ.ಸಿ.ಭಂಡಾರಿ ಅವರು ಸಜ್ಜನಿಕೆ, ಪ್ರಾಮಾಣಿಕ ವ್ಯಕ್ತಿ, ತುಳು ಸೇವೆ ಮಾಡಿದವರು. ಅರ್ಹವಾಗಿಯೇ ಇವತ್ತು ಅಭಿನಂದನೆ ಸಂದಿದೆ ಎಂದರು.
ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಶ್ರೀಗಳು ಯಕ್ಷಗಾನ ಸಪ್ತಾಹಗಳನ್ನು ಆಯೋಜಿಸಿದವರು. ಕಷ್ಟಗಳನ್ನು ಕಂಡರೂ ಭಕ್ತರಿಗೆ ಮಿಡಿದವರು ಎಂದರು.
ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ, ಲೋಕಸೇವಾ ಆಯೋಗ ಮಾಜಿ ಅಧ್ಯಕ್ಷ ಟಿ. ಶಾಮ ಭಟ್, ವಿಧಾನಪರಿಷತ್ತು ಸದಸ್ಯರಾದ ಮಂಜುನಾಥ ಭಂಡಾರಿ, ಕೆ.ಹರೀಶ್ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಸತೀಶ್ ಶೆಟ್ಟಿ ಉಪಸ್ಥಿತರಿದ್ದು, ಶುಭ ಹಾರೈಸಿದರು.
ರಾಜಮಣಿ ರಾಮಕುಂಜ ಸಂಪಾಕತ್ವದ ಆಧ್ಯಾತ್ಮಶ್ರೀ ಮತ್ತು ಶಿಖರ ಎಂಬ ಸ್ಮರಣ ಸಂಚಿಕೆಗಳನ್ನು ಬಿಡುಗಡೆ ಮಾಡಲಾಯಿತು.
ಇದೇ ವೇಳೆ ಎ.ಸಿ.ಭಂಡಾರಿ, ರಾಜೀವಿ ದಂಪತಿಯನ್ನು ಗೌರವಿಸಲಾಯಿತು. ಹಿರಿಯ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಷಿ ಸಂಸ್ಮರಣಾ ಭಾಷಣ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ಸಂಚಯಗಿರಿ ಅಧ್ಯಕ್ಷ ಪ್ರೊ.ತುಕಾರಾಮ ಪೂಜಾರಿ ಅಭಿನಂದನಾ ಭಾಷಣ ಮಾಡಿದರು. ಈ ಸಂದರ್ಭ ಸಂಚಲನಾ ಸಮಿತಿ ಕಾರ್ಯಾಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ರಂಗೋಲಿ ಉಪಸ್ಥಿತರಿದ್ದರು.
ಸಂಚಾಲನಾ ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಪ್ರಾಸ್ತಾವಿಕ ಮಾತನಾಡಿದರು. ಸಂಚಾಲನಾ ಸಮಿತಿ ಸಂಚಾಲಕ ಜಗನ್ನಾಥ ಚೌಟ ಬದಿಗುಡ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ರಾಜಾ ಬಂಟ್ವಾಳ ವಂದಿಸಿದರು. ನ್ಯಾಯವಾದಿ ರವೀಂದ್ರ ಕುಕ್ಕಾಜೆ ಸನ್ಮಾನಿತ ಪರಿಚಯ ಮಾಡಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು.