ಸುಳ್ಯ: ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ ಸುಳ್ಯ ಇದರ ವತಿಯಿಂದ ರಂಗಮನೆ ಅಮ್ಮ ಶ್ರೀಮತಿ ವನಜಾಕ್ಷಿ ಜಯರಾಮ ನೆನಪಿನಲ್ಲಿ ಪ್ರಶಸ್ತಿ 2021 ಪ್ರಧಾನ ಸಮಾರಂಭ ಕಾರ್ಯಕ್ರಮವು ಇದೇ ಬರುವ ದಿನಾಂಕ 11-12-2021 ನೇ ಶನಿವಾರದಂದು ರಂಗಮನೆ ಅಡಿಟೋರಿಯಂ ಹಳೆಗೇಟು ಸುಳ್ಯ ಇಲ್ಲಿ ಸಂಜೆ ಗಂಟೆ 5 ರಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದೆ.
ಈ ಪ್ರಯುಕ್ತ ಸಂಜೆ 5 ಗಂಟೆಗೆ ಯಕ್ಷಗಾನ ತಾಳಮದ್ದಳೆ ಕೃಷ್ಣ ಜಾಂಬವ ಪ್ರಸಂಗವು ಶ್ರೀ ಸುಬ್ರಾಯ ಸಂಪಾಜೆ ಇವರ ಭಾಗವತಿಕೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಮುಂದಿನ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭವು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಪ್ರಸಿದ್ಧ ಯಕ್ಷಗಾನ ಅರ್ಥ ದಾರಿ ಜಬ್ಬಾರ್ ಸಮೊ ಸಂಪಾಜೆ ಇವರಿಗೆ ವನಜ ರಂಗಮನೆ ಪ್ರಶಸ್ತಿಯು ದೊರಕಲಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ವಿದ್ಯಾ ಗಂಗೋತ್ರಿ ಸವಣೂರು ಇದರ ಸಂಚಾಲಕರು ಸೀತಾರಾಮ್ ರೈ ಇವರು ಭಾಗಿಯಾಗಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇದರ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಇವರು ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನು ಹಿರಿಯ ಯಕ್ಷಗಾನ ಕಲಾವಿದರು ವೆಂಕಟ್ರಮಣ ಭಟ್ ಇವರು ನಡೆಸಿಕೊಡಲಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದರು ಸುಜನ ಸುಳ್ಯ ಗೌರವ ಉಪಸ್ಥಿತಿಯನ್ನು ವಹಿಸಲಿದ್ದಾರೆ.
ರಾತ್ರಿ 08:20 ರಿಂದ 9.30 ರ ತನಕ ತೆಂಕುತಿಟ್ಟು ಬೊಂಬೆಯಾಟ ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ಕಾಸರಗೋಡು ಇದರ ವತಿಯಿಂದ ನರಕಾಸುರವಧೆ ರಮೇಶ್ ಕಾಸರಗೋಡು ನಿರ್ದೇಶನದಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಕೋವಿಡ್ ನ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು ಎಂದು ಸಂಯೋಜಕರು ತಿಳಿಸಿದ್ದಾರೆ.