ಮಂಗಳೂರು: ರಾಜ್ಯದಲ್ಲಿ ಬಿಟ್ಕಾಯಿನ್ ದಂಧೆಯ ಸುಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಹಿಂಬಾಲಕರ ಸುತ್ತ ಸುತ್ತುತ್ತಿದ್ದು, ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಕಾಲದಲ್ಲಿ ಬಿಟ್ ಕಾಯಿನ್ ದಂಧೆ ನಡೆದಿದೆ. ಬಿಟ್ಕಾಯಿನ್ ಪ್ರಕರಣದ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಕಾಂಗ್ರೆಸ್ ಮುಖಂಡ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್, ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ನಡುವೆ ಬಿಟ್ ಕಾಯಿನ್ ವ್ಯವಹಾರ ನಡೆದ ಬಗ್ಗೆ ಡ್ರಗ್ಸ್ ಪ್ರಕರಣ ಕುರಿತು ನ್ಯಾಯಾಲಯಕ್ಕೆ ಸಲ್ಲಿಸಲಾದ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ.
ಶ್ರೀಕಿಯನ್ನು ಸಿದ್ದರಾಮಯ್ಯ ಅವಧಿಯಲ್ಲಿ ಬಂಧಿಸಿ, ಬಿಡುಗಡೆ ಮಾಡಲಾಗಿತ್ತು. ಆದರೆ, ಈಗ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಮುಖಂಡರ ಪುತ್ರರ ಉಲ್ಲೇಖ ಮಾಡದೇ, ಬಿಜೆಪಿ ವಿರುದ್ಧ ಹೇಳಿಕೆ ನೀಡುತ್ತಿರುವುದು ದುರದೃಷ್ಟಕರ. ಬಿಟ್ ಕಾಯಿನ್ ದಂಧೆಯಲ್ಲಿ ಸಿದ್ದರಾಮಯ್ಯ ಆಪ್ತರೂ ಇದ್ದು, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಬಿಟ್ ಕಾಯಿನ್ ದಂಧೆ ಮುಂದಿಟ್ಟು ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಹೊರಟಿದೆ. ಮುಖ್ಯಮಂತ್ರಿ ಸ್ಥಾನ ನಿರ್ವಹಿಸಿದ ಸಿದ್ದರಾಮಯ್ಯ ಅವರು ಬೇಜವಾಬ್ದಾರಿಯುತ ಹೇಳಿಕೆ ನೀಡಿ ಸಮಾಜವನ್ನು ದಾರಿ ತಪ್ಪಿಸುತ್ತಿದ್ದಾರೆ. ನಿರಂತರ ಪ್ರಚಾರದ ಹಪಹಪಿಯಿಂದ ಹೇಳಿಕೆ ನೀಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ. ೨೦೧೮ರ ಘಟನೆಯಲ್ಲಿ ಸಿದ್ದರಾಮಯ್ಯ ಅವರಿಗೆ ನೇರ ಸಂಬಂಧ ಇದೆ.
ಈ ಬಗ್ಗೆ ಮಾಹಿತಿ ಇದ್ದರೂ, ನಿಮ್ಮ ಅವಧಿಯಲ್ಲಿ ಪ್ರಕರಣವನ್ನು ಮುಚ್ಚಿಹಾಕಿದ್ದೀರಿ. ಈಗ ಬಿಜೆಪಿ ವಿರುದ್ಧ ಹೇಳಿಕೆ ನೀಡುತ್ತಿದ್ದೀರಿ. ಮಾಹಿತಿ ಇದ್ದೂ ಪೊಲೀಸರಿಗೆ ನೀಡದಿರುವುದು ಅಪರಾಧ ಎಂದರು.
ಬಿಟ್ ಕಾಯಿನ್ ದಂಧೆ ಬಗ್ಗೆ ತನಿಖೆಗೆ ಬಿಜೆಪಿ ಸರಕಾರ ಸಿದ್ದ. ದಂಧೆಯಲ್ಲಿ ಭಾಗವಹಿಸಿದ ಯಾರನ್ನೂ ರಕ್ಷಿಸುವುದಿಲ್ಲ. ಬಿಟ್ ಕಾಯಿನ್ ದಂಧೆ ಕುರಿತು ಇದುವರೆಗೆ ಸ್ಪಷ್ಟ ಕಾನೂನು ಇಲ್ಲ. ಮುಂದಿನ ಸಂಸತ್ನ ಅಧಿವೇಶನದಲ್ಲಿ ಈ ಬಗ್ಗೆ ಕಾಯ್ದೆ ರೂಪಿಸುವ ಮಾಹಿತಿಯಿದೆ ಎಂದು ಕಾರ್ಣಿಕ್ ಹೇಳಿದರು.
ಬಿಜೆಪಿ ದ.ಕ. ಜಿಲ್ಲಾ ವಕ್ತಾರರಾದ ಜಗದೀಶ ಶೇಣವ, ರಾಧಾಕೃಷ್ಣ, ಮಾಧ್ಯಮ ಸಂಯೋಜಕ ರಣದೀಪ್ ಕಾಂಚನ್ ಉಪಸ್ಥಿತರಿದ್ದರು.