ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಗೌರವಾಧ್ಯಕ್ಷರಾಗಿ ಮುಂಬಯಿ ಉದ್ಯಮಿ ಹೇರಂಬ ಕೆಮಿಕಲ್ ಇಂಡಸ್ಟ್ರಿಯ ಆಡಳಿತ ನಿರ್ದೇಶಕರಾದ ಸದಾಶಿವ ಶೆಟ್ಟಿ ಕನ್ಯಾನ ಆಯ್ಕೆಯಾಗಿದ್ದಾರೆ.
ಕಂಕನಾಡಿ ನಾಗುರಿಯಲ್ಲಿರುವ ಹೊಟೇಲ್ ಅಟ್ಟಣೆಯಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸಭೆಯಲ್ಲಿ ಸದಾಶಿವ ಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಸ್ಥಾಪನೆಯಾದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ೨೦೧೫ರಲ್ಲಿ ಆರಂಭವಾಗಿ ೪ ವರ್ಷಗಳ ನಿರಂತರ ಪಟ್ಲ ಸಂಭ್ರಮ ಕಾರ್ಯಕ್ರಮದಲ್ಲಿ ತೆಂಕು ಬಡಗು ಬಡಾ ಬಡಗು ತಿಟ್ಟಿನ ಯಕ್ಷಗಾನ ಕಲಾವಿದರಿಗೆ ಹಲವಾರು ರೀತಿಯ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಕೋವಿಡ್ ೧೯ ಕೊರೊನಾದಿಂದಾಗಿ ಕಳೆದ ೨ ವರ್ಷಗಳಲ್ಲಿ ಪಟ್ಲ ಸಂಭ್ರಮ ಕಾರ್ಯಕ್ರಮವನ್ನು ಮಾಡಲಾಗದಿದ್ದರೂ ಯಕ್ಷಗಾನ ಕಲಾವಿದರಿಗೆ ಸುಮಾರು ರೂ ೭೫ ಲಕ್ಷ ರೂ. ಮೌಲ್ಯದ ದಿನ ಬಳಕೆಯ ಆಹಾರದ ಕಿಟ್ಟನ್ನು ಮತ್ತು ಆಕಸ್ಮಿಕ ವೈದ್ಯಕೀಯ ವೆಚ್ಚ, ಹಾಗೂ ಸಹಾಯಧನವನ್ನು ಘಟಕಗಳ ಪದಾಧಿಕಾರಿಗಳ ಮೂಲಕ ನೀಡಲಾಗಿದೆ. ಫೌಂಡೇಶನಿನ ಮುಂದಿನ ಕಾರ್ಯಯೋಜನೆ ಮತ್ತು ಪಟ್ಲ ಸಂಭ್ರಮ ೨೦೨೨ರ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಬೇಕು ಎಂದು ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.
೨೦೨೨ರ ಮೇ ೨೯ರಂದು ಯಕ್ಷಧ್ರುವ ಪಟ್ಲ ಸಂಭ್ರಮ, ಅಡ್ಯಾರ್ ಗಾರ್ಡನ್ ಇಲ್ಲಿ ಅರ್ಥಪೂರ್ಣವಾಗಿ ಜರಗಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ವರ್ಷ ಯಕ್ಷಗಾನ ವೃತ್ತಿ ಕಲಾವಿದರ ಕೋರಿಕೆಯಂತೆ ಕ್ರೀಡಾಕೂಟ ನಡೆಯಲಿದೆ. ಈ ಬಾರಿಯ ಪಟ್ಲ ಸಂಭ್ರಮದಲ್ಲಿ ಯಕ್ಷಗಾನ ಕಲಾವಿದರಿಗಲ್ಲದೆ ಇತರೇ ಕ್ಷೇತ್ರದ ಕಲಾವಿದರನ್ನು ಗುರುತಿಸಿ ಯಕ್ಷಧ್ರುವ ಕಲಾಗೌರವ ಸಮರ್ಪಿಸಲಾಗುವುದು. ಇತ್ತೀಚೆಗೆ ಬೈಕ್ ಅಪಘಾತದಲ್ಲಿ ನಿಧನರಾದ ಹಿರಿಯಡ್ಕ ಮೇಳದ ಕಲಾವಿದ ದಿ! ವಾಮನ ದೇವಾಡಿಗ ಇವರಿಗೆ ಸಭೆಯಲ್ಲಿ ಶೃದ್ದಾಂಜಲಿ ಅರ್ಪಿಸಲಾಯಿತು. ಸಂಭ್ರಮದ ಕಾರ್ಯಕ್ರಮದಲ್ಲಿ ಇವರ ಮನೆಯವರಿಗೆ ರೂ ೮-೦೦ ಲಕ್ಷದ ಅಪಘಾತ ವಿಮೆ ಚಕ್ ಹಸ್ತಾಂತರಿಸಲಾಗುವುದು.
ವೇದಿಕೆಯಲ್ಲಿ ಉಧ್ಯಮಿಗಳಾದ ಸೌಂದರ್ಯ ರಮೇಶ್, ಜಯರಾಮ ಶೇಖ, ಸವಣೂರು ಸೀತಾರಾಮ ರೈ, ಮುಂಬಯಿ ಘಟಕದ ಕಾರ್ಯದರ್ಶಿ ಕರ್ನೂರು ಮೋಹನ್ ರೈ, ಜಾದೂ ಕ್ಷೇತ್ರದ ಕುದ್ರೋಳಿ ಗಣೇಶ್, ಯಕ್ಷಗಾನ ಕ್ಷೇತ್ರದ ಫ್ರೊ.ಡಾ.ಎಂ ಪ್ರಭಾಕರ ಜೋಷಿ, ಜಬ್ಬಾರ್ ಸುಮೋ ಸಂಪಾಜೆ, ಕೇಂದ್ರ ಸಮಿತಿಯ ಜಗನ್ನಾಥ ಶೆಟ್ಟಿ ಬಾಳ, ಶ್ರೀಮತಿ ಆರತಿ ಆಳ್ವ ಉಪಸ್ಥಿತರಿದ್ದರು. ಪ್ರೊ ಭಾಸ್ಕರ ರೈ ಕುಕ್ಕುವಳ್ಳಿ, ಗಿರೀಶ್ ಎಂ.ಶೆಟ್ಟಿ ಕಟೀಲು, ಪ್ರದೀಪ್ ಆಳ್ವ ಕದ್ರಿ, ದೇವದಾಸ ಶೆಟ್ಟಿ, ಸುಮಂಗಲ ಭಟ್ ಮೊದಲಾದವರು ಅಭಿಪ್ರಾಯಗಳನ್ನು ತಿಳಿಸಿದರು. ಪುಂಜಾಲಕಟ್ಟೆ ಘಟಕದ ಪದಾಧಿಕಾರಿಗಳು ಪಟ್ಲ ಸಂಭ್ರಮಕ್ಕೆ ೫೦ ಸಾವಿರ ದೇಣಿಗೆಯನ್ನು ಪಟ್ಲ ಸತೀಶ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಮಹಿಳಾ ಘಟಕದಿಂದ ಪಟ್ಲ ಸಂಭ್ರಮಕ್ಕೆ ೫೦ ಸಾವಿರ ರೂಪಾಯಿ ನೀಡುವುದಾಗಿ ಮಹಿಳಾ ಘಟಕದ ಪದಾಧಿಕಾರಿಗಳು ತಿಳಿಸಿದರು. ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರ್ವಹಿಸಿದರು.
ಮಂಗಳಮುಖಿಯರಿಂದ ಯಕ್ಷಗಾನ ಮಂಗಳೂರಿನ ಮಂಗಳಮುಖಿ ಸಂಘಟನೆಯವರು ಪಾವಂಜೆ ಮೇಳದ ಯಕ್ಷಗಾನಕ್ಕೆ ಮನಸೋತು ಫೆಬ್ರವರಿ ೨೫ ರಂದು ಮಂಗಳೂರಿನ ಕೋಡಿಕಲ್ ನಲ್ಲಿ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟವನ್ನು ಆಯೋಜಿಸಿದ್ದಾರೆ ಎಂದು ಪ್ರದೀಪ್ ಆಳ್ವ ಸಭೆಯಲ್ಲಿ ತಿಳಿಸಿದರು.