ಜಗತ್ತಿನ ಅದೆಷ್ಟೋ ತತ್ವಜ್ಞಾನಿಗಳು ಈ ಜಗತ್ತನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.ಆದರೆ ಕಾರ್ಲ್ ಮಾರ್ಕ್ಸ್ ನಂತಹ ಮೇಧಾವಿ ಜಗತ್ತನ್ನು ಪರಿವರ್ತಿಸುವುದು ಹೇಗೆಂಬ ವೈಜ್ಞಾನಿಕ ಸತ್ಯವನ್ನು ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ದಲ್ಲಿ ವಿವರಿಸಿದ್ದಾರೆ.
ಅದರಲ್ಲಿ ಕಾರ್ಮಿಕ ವರ್ಗದ ನಾಯಕತ್ವ ದಲ್ಲೇ ಇಂತಹ ಬದಲಾವಣೆಯಾಗಲಿದೆ ಎಂದು ಸಾಬೀತು ಪಡಿಸಿದ್ದಾರೆ. ಇಂತಹ ರಾಜಕೀಯ ಆರ್ಥಿಕ ಸಾಮಾಜಿಕ ಮತ್ತು ಚಾರಿತ್ರಿಕ ವಿಚಾರಗಳನ್ನು ಒಳಗೊಂಡ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಪುಸ್ತಕ ಪ್ರಕಟವಾದ ಮೇಲೆ ಜಗತ್ತಿನಾದ್ಯಂತ ನಡೆದ ಹಲವಾರು ಕ್ರಾಂತಿಗಳಿಗೆ ಮತ್ತು ವಿಮೋಚನಾ ಚಳುವಳಿಗಳಿಗೆ ದಾರಿದೀಪವಾಗಿದೆ.
ಮಾನವ ಸಮಾಜದ ಕ್ರಾಂತಿ ಕಾರಿ ಬದಲಾವಣೆಗೆ ದಿಕ್ಸೂಚಿ ಯಾಗಿರುವ ಈ ಪುಸ್ತಕ, ಆಧುನಿಕ ಜಗತ್ತನ್ನು ರೂಪಿಸುವಲ್ಲಿ ಅತ್ಯಂತ ಹೆಚ್ಚು ಪ್ರಭಾವ ಬೀರಿದ ರಾಜಕೀಯ ಬರವಣಿಗೆಯಾಗಿದೆ ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ.ಕ್ರಷ್ಣಪ್ಪ ಕೊಂಚಾಡಿ ಯವರು ಅಭಿಪ್ರಾಯ ಪಟ್ಟರು.
ಇಡೀ ಜಗತ್ತಿಗೆ ಹೊಸ ಬೆಳಕನ್ನು ನೀಡಿದ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಪುಸ್ತಕ ಬಿಡುಗಡೆಯಾಗಿ 174 ವರ್ಷಗಳ ಸಂಭ್ರಮದ ಅಂಗವಾಗಿ ಜಗತ್ತಿನಾದ್ಯಂತ ಕೆಂಪು ಪುಸ್ತಕ ದಿನಾಚರಣೆಯನ್ನಾಗಿ ಆಚರಿಸಲ್ಪಡುತ್ತಿದ್ದು,ಅದರ ಭಾಗವಾಗಿ CPIM ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಸಮಿತಿಗಳ ಆಶ್ರಯದಲ್ಲಿ ಮಂಗಳೂರಿನ ವಿಕಾಸ ಕಚೇರಿಯಲ್ಲಿ ಸಂವಾದ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಪೂರಕ ಮಾತುಗಳನ್ನಾಡಿದ CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು, *ಬಂಡವಾಳಶಾಹಿ ವ್ಯವಸ್ಥೆಯೇ ಅಂತಿಮವೆಂದು ಬೀಗುತ್ತಿದ್ದ ಬಂಡವಾಳಗಾರರಿಗೆ ಸಿಂಹಸ್ವಪ್ನರಾಗಿ ಕಾಡಿದ ಕಾರ್ಲ್ ಮಾರ್ಕ್ಸ್ ರವರು ತಮ್ಮ ಜೀವಿತದ ಅವಧಿಯಲ್ಲಿ ವಿಪರೀತ ಕಷ್ಟನಷ್ಟಗಳನ್ನು ಅನುಭವಿಸಿದರೂ ವೈಜ್ಞಾನಿಕ ಸಮಾಜವಾದದ ಪರಿಕಲ್ಪನೆಯನ್ನು ಪ್ರಸ್ತುತಪಡಿಸಿ ಇಡೀ ಜಗತ್ತಿನ ಮಾನವ ಕುಲದ ಅಭಿವ್ರದ್ದಿಗಾಗಿ ಶ್ರಮಿಸಿದರು. ಸಹಸ್ರಮಾನದ ಮಹಾನ್ ಚಿಂತಕರೆಂಬ ಹೆಗ್ಗಳಿಕೆಗೆ ಪಾತ್ರರಾದ ಕಾರ್ಲ್ ಮಾರ್ಕ್ಸ್ ಸಮಸ್ತ ಜನಕೋಟಿ ಮರೆಯಲಾರದ ಮಹಾನ್ ಚೇತನ* ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ಯನ್ನು ವಹಿಸಿದ CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸದಾಶಿವದಾಸ್ ರವರು ಮಾತನಾಡುತ್ತಾ, ಕಡು ಬಡತನದಲ್ಲಿ ಜೀವನ ಸಾಗಿಸಿದ ಕಾರ್ಲ್ ಮಾರ್ಕ್ಸ್ ಹಸಿವು, ನಿರುದ್ಯೋಗ, ಶೋಷಣಾಮುಕ್ತ ಸಮಾಜದ ನಿರ್ಮಾಣಕ್ಕಾಗಿ ತನ್ನ ಸರ್ವಸ್ವವನ್ನೂ ಧಾರೆ ಎರೆದ ಕಾರ್ಲ್ ಮಾರ್ಕ್ಸ್ ರವರ ಬರಹಗಳು ಇಂದಿಗೂ ಪ್ರಸ್ತುತ ವಾಗಿದೆ. 2008ರಲ್ಲಿ ಜರುಗಿದ ಜಾಗತಿಕ ಆರ್ಥಿಕ ಬಿಕ್ಕಟ್ಟು ಸಂದರ್ಭದಲ್ಲಿ ಪರಿಹಾರಕ್ಕಾಗಿ ಬಂಡವಾಳಶಾಹಿ ಆರ್ಥಿಕ ತಜ್ಞರು ಅಧ್ಯಯನ ಮಾಡಿದ್ದು ಮಾರ್ಕ್ಸ್ ರವರ ಬರಹಗಳನ್ನೇ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.
ಪ್ರಾರಂಭದಲ್ಲಿ ಸಂತೋಷ್ ಬಜಾಲ್ ರವರು ಸ್ವಾಗತಿಸಿದರೆ ಕೊನೆಯಲ್ಲಿ ರವಿಚಂದ್ರ ಕೊಂಚಾಡಿಯವರು ವಂದಿಸಿದರು.