ಬೆಳ್ತಂಗಡಿ : ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಕಲ್ಮಂಜ ಗ್ರಾಮದ ನಿಡಿಗಲ್ ಶಾಲೆಯ ಮುಂಭಾಗದ ರಸ್ತೆಯ ಬದಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ಅರಣ್ಯ ಇಲಾಖೆಯ ಸುಮಾರು ನೂರಾರು ಗಿಡಮರಗಳು ಸುಟ್ಟು ಕರಕಲಾಗಿವೆ.
ಹೆದ್ದಾರಿಗಿಂತ ಅನತಿದೂರದಲ್ಲಿ ಪಟ್ಟಾ ಜಾಗವನ್ನು ಹೊಂದಿರುವ ವ್ಯಕ್ತಿಯೊಬ್ಬರು ಆ ಜಾಗದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸುವ ಸಲುವಾಗಿ ಕಳೆದ ಮೂರು ದಿನಗಳಿಂದ ಬೆಂಕಿ ಹಚ್ಚುತ್ತಿದ್ದಾರೆ. ಶುಕ್ರವಾರ ಹಾಗೂ ಶನಿವಾರ ಇವರ ಜಾಗದ ಹೊರಭಾಗಕ್ಕೆ ಬೆಂಕಿ ವ್ಯಾಪಿಸಿದ್ದು ಸ್ಥಳೀಯರು ಅದನ್ನು ನಂದಿಸಿದ್ದರು.
ಭಾನುವಾರ ಇವರ ಜಾಗದ ಹೊರಭಾಗದಲ್ಲಿರುವ ರಸ್ತೆಬದಿಯವರೆಗೂ ಬೆಂಕಿ ವ್ಯಾಪಿಸಿದೆ. ಬೆಂಕಿ ಆವರಿಸಿರುವ ಸಮೀಪ ಅಂಗಡಿ,ಮನೆ,ಪಂಚಾಯಿತಿ, ವಿದ್ಯುತ್ ಫೋನ್, ಟಿವಿ ಕೇಬಲ್ ಗಳು ಇವೆ. ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ಆರಿಸಿದ್ದು ಹೆಚ್ಚಿನ ಅಪಾಯ ತಪ್ಪಿದೆ. ಯಾವುದೇ ಮುಂಜಾಗೃತೆ ಕೈಗೊಳ್ಳದೆ ತನ್ನ ಜಾಗದಲ್ಲಿ ಬೆಂಕಿಯನ್ನು ಹಾಕಿರುವ ವ್ಯಕ್ತಿಯ ಕುಳಿತು ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ.
ಪರಿಸರದಲ್ಲಿ ಸಾಕಷ್ಟು ಹೊಗೆ ವ್ಯಾಪಿಸಿದ್ದು ಇನ್ನಷ್ಟು ಬೆಂಕಿ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ವಿಪರೀತ ಹೊಗೆ ಹಾಗೂ ಬೆಂಕಿಯ ಶಾಖದಿಂದ ವಾಹನ ಸವಾರರು,ಸ್ಥಳೀಯರು ತೊಂದರೆ ಅನುಭವಿಸಿದರು.