ಬೆಂಗಳೂರು, ; ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿಯ ಪ್ರಯಾಣವು ಸೆಪ್ಟೆಂಬರ್ 1ರಿಂದ ದುಬಾರಿಯಾಗಲಿದ್ದು, ಬಳಕೆದಾರರ ಮೇಲೆ ಹೊರೆ ಹೆಚ್ಚಲಿದೆ.ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ಎಚ್ಎಐ) ಹೆದ್ದಾರಿ ಶುಲ್ಕವನ್ನು ಪರಿಷ್ಕರಿಸಿದ್ದು, ಇದಕ್ಕೆ ಅಧಿಕೃತ ಮುದ್ರೆಯೂ ಬಿದ್ದಿದೆ. ಇದರಿಂದ ನಿತ್ಯ ಪ್ರಯಾಣಿಸುವವರು ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ.
ಬೆಂಗಳೂರು-ತುಮಕೂರು-ಹಾಸನ-ಶಿವಮೊಗ್ಗದ ನಡುವೆ ಪ್ರಯಾಣಿಸುವವರು ನೆಲಮಂಗಲ ಹಾಗೂ ಕರ್ಬೈಲು (ಬೆಳ್ಳೂರು ಕ್ರಾಸ್) ಟೋಲ್ ಸಂಗ್ರಹ ಕೇಂದ್ರಗಳ ಮೂಲಕ ಹಾದು ಹೋಗಬೇಕಾಗುತ್ತದೆ. ಟೋಲ್ ಮೂಲಕ ಸಾಗಿ ಮತ್ತೆ ಹಿಂದಕ್ಕೆ ಬರುವ ಕಾರುಗಳು ನೆಲಮಂಗಲ ಟೋಲ್ನಲ್ಲಿ ಇನ್ನು ಮುಂದೆ 65 ರೂ. ಬದಲು 70 ರೂ. ಪಾವತಿಸಬೇಕಾಗುತ್ತದೆ. ಒಂದೇ ಬಾರಿ ಟೋಲ್ ಸಂಗ್ರಹ ಕೇಂದ್ರದ ಮೂಲಕ ಹಾದು ಹೋಗುವ ಕಾರುಗಳು ಮೊದಲಿನಂತೆ 45 ರೂ. ಶುಲ್ಕವನ್ನಷ್ಟೇ ಪಾವತಿಸಬೇಕು. ಮಾಸಿಕ ಪಾಸ್ ದರವನ್ನು 40 ರೂ. ಹೆಚ್ಚಳ (1,390) ಮಾಡಲಾಗಿದೆ.
ಬಸ್ ಮತ್ತು ಟ್ರಕ್ಗಳು ಒಮ್ಮೆ ಹಾದು ಹೋಗುವ ಶುಲ್ಕವನ್ನು ಕ್ರಮವಾಗಿ 5 ಮತ್ತು 10ರಷ್ಟು ಏರಿಸಲಾಗಿದೆ. ಮಾಸಿಕ ಪಾಸ್ ದರವನ್ನು 140 ರೂ.ರಷ್ಟು ಹೆಚ್ಚಿಸಲಾಗಿದೆ. ಇನ್ನು ಮುಂದೆ ಇವರು ತಿಂಗಳಿಗೆ 4,865 ಮೊತ್ತ ಪಾವತಿಸಬೇಕು. ಲಘು ವಾಣಿಜ್ಯ ವಾಹನಗಳ ಮಾಸಿಕ ಪಾಸ್ ದರವನ್ನು ಶೇ.75ರಷ್ಟು ಏರಿಸಲಾಗಿದೆ. ತಾವು ಬೆಳೆದ ತರಕಾರಿಗಳನ್ನು ನಿತ್ಯ ಮಾರುಕಟ್ಟೆಗೆ ಸಾಗಿಸುವ ರೈತರ ಮೇಲೆ ಇದರಿಂದ ಹೊರೆ ಹೆಚ್ಚಬಹುದು ಎಂದು ಹೇಳಲಾಗಿದೆ.
ಕೋವಿಡ್ನಿಂದಾಗಿ ಜನರ ಬದುಕು ತತ್ತರಿಸಿದೆ. ಹೀಗಾಗಿ ಸರ್ಕಾರವು ಕೂಡಲೇ ಹೆದ್ದಾರಿ ಶುಲ್ಕ ಪರಿಷ್ಕರಣೆ ನಿರ್ಧಾರ ಕೈಬಿಡಬೇಕು. ಅಥವಾ ಇನ್ನು ಎರಡು ವರ್ಷ ಇದನ್ನು ಮುಂದೂಡಬೇಕು ಎಂಬ ಆಗ್ರಹ ಕೇಳಿಬಂದಿದೆ.