ಮಂಗಳೂರು : ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕ್ರೈಸ್ತ ಧರ್ಮ ಮುಖಂಡರು, ಪ್ರತಿಪಕ್ಷ ದ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
“ಈ ಕಾಯ್ದೆ ಒಂದು ರಾಜಕೀಯ ಗಿಮಿಕ್” ಎಂದು ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಯು. ಟಿ. ಖಾದರ್ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. “ರಾಜ್ಯದಲ್ಲಿ ಸರ್ಕಾರ ಮತಾಂತರ ತಡೆ ಕಾನೂನು ತರಲು ಹೊರಟಿದೆ. ಇದೊಂದು ಪಕ್ಕಾ ರಾಜಕೀಯ ಗಿಮಿಕ್ ಆಗಿದೆ. ಜನರ ಗಮನ ಬೇರೆಡೆ ಸೆಳೆಯಲು ಈ ಮತಾಂತರ ವಿಷಯ ಮುನ್ನೆಲೆಗೆ ತರಲಾಗಿದೆ. ಜನರಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸಲಾಗುತ್ತಿದೆ” ಎಂದು ಆರೋಪಿಸಿದರು.
“ರಾಜ್ಯ ಸರಕಾರದ ವೈಫಲ್ಯವನ್ನು ಮರೆಮಾಚಲು ಬಿಜೆಪಿ ನಾಯಕರು ಮತಾಂತರದ ವಿಚಾರ ಎತ್ತಿದ್ದಾರೆ. ರಾಜ್ಯದಲ್ಲಿ ಬಡವರಿಗೆ ರೇಷನ್ ಕಾರ್ಡ್ ಸಿಗುತ್ತಿಲ್ಲ. ಬಡವರಿಗಾಗಿ ಮನೆ ಕಟ್ಟಿಕೊಡಲಾಗಿಲ್ಲ. ಕೋವಿಡ್ನಿಂದ ಮೃತ ಪಟ್ಟವರ ಕುಟುಂಬಗಳಿಗೆ ಪರಿಹಾರ ಈವರೆಗೂ ನೀಡಲಾಗಿಲ್ಲ. ಈ ಎಲ್ಲಾ ವಿಚಾರಗಳನ್ನು ತಪ್ಪಿಸಲು ಮತಾಂತರದ ವಿಚಾರ ತರಲಾಗಿದೆ” ಎಂದು ದೂರಿದರು.
“ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಬಿಟ್ ಕಾಯಿನ್ ವಿವಾದ ಬಗ್ಗೆ ತನಿಖೆ ಮುಂದುವರೆದಿಲ್ಲ. ಜನರು ಈ ಕುರಿತು ಯೋಚನೆ ಮಾಡದಂತೆ ಅವರ ಗಮನ ಬೇರೆಡೆಗೆ ಸೆಳೆಯಲು ಮತಾಂತರ ವಿಚಾರ ಮುನ್ನೆಲೆಗೆ ತರಲಾಗಿದೆ. ಇದೊಂದು ಅಟೆನ್ಷನ್ ಡೈವರ್ಟ್ ಸರಕಾರ . ಬಲವಂತದ ಮತಾಂತರಕ್ಕೆ ಯಾವ ಪಕ್ಷವೂ ಬೆಂಬಲ ನೀಡುವುದಿಲ್ಲ” ಎಂದರು.