ಮಂಗಳೂರು : ಕಳೆದ ಹಲವಾರು ವರ್ಷಗಳಿಂದಮೂಡಬಿದಿರೆ ನಿವಾಸಿ ಇಸ್ಮಾಯಿಲ್ ಎಂಬವರು ಬಜಪೆ ಸೇರಿದಂತೆ ವಿವಿಧ ಕಡೆಗಳಲ್ಲಿ ಎಳನೀರು ವ್ಯಾಪಾರವನ್ನು ನಡೆಸುತ್ತಿದ್ದರು, ಆದರೆ ಇತ್ತೀಚೆಗೆ ಕಟೀಲು ಎಂಬಲ್ಲಿ ಅಂಗಡಿಗಳಿಗೆ ಎಳನೀರು ಸರಬರಾಜು ಮಾಡುತ್ತಿದ್ದಾಗ ಸಂಘಪರಿವಾರದ ಗೂಂಡಾಗಳು ವ್ಯಾಪಾರಕ್ಕೆ ತಡೆಯೊಡ್ಡಿ ಹಲ್ಲೆಗೆ ಯತ್ನಿಸಿದ್ದು ಅಲ್ಲದೇ ಮುಸ್ಲಿಂ ವ್ಯಾಪಾರಿಗಳಿಗೆ ನಾವು ಬಹಿಷ್ಕಾರ ಮಾಡಿರುವುದಾಗಿಯೂ, ಇಲ್ಲಿ ನಿಮಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂಬ ನಿಂದನೆ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದರ ವಿರುದ್ದ ಬಜ್ಪೆ ಪೊಲೀಸ್ ಠಾಣೆಗೆ ಇಸ್ಮಾಯಿಲ್ ರವರು ದೂರು ನೀಡಿದ್ದು, ದೂರು ಸ್ವೀಕರಿಸಿದ ಬಜ್ಪೆ ಪೊಲೀಸ್ ಇನ್ಸ್ಪೆಕ್ಟರ್ ತನಿಖೆ ನಡೆಸಿ ಮೂರು ಮಂದಿ ಸಂಘಪರಿವಾರದ ಗೂಂಡಾಗಳನ್ನು ಬಂಧಿಸಿದ್ದು, ಇದನ್ನೇ ನೆಪವಾಗಿಟ್ಟುಕೊಂಡು ಸಂಘಪರಿವಾರ ಸಂಘಟನೆಗಳು ಬಜ್ಪೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಬಿಜೆಪಿ ಶಾಸಕರ ಮೂಲಕ ಇಲಾಖೆಯ ಮೇಲೆ ಒತ್ತಡ ಹಾಕಿದೆ . ಸಂಘಪರಿವಾರದ ಒತ್ತಡಕ್ಕೆ ಮಣಿದು ನ್ಯಾಯಯುತವಾಗಿ ತನಿಖೆ ನಡೆಸಿದ ಪೊಲಿಸ್ ಇನ್ಸ್ಪೆಕ್ಟರನ್ನು, ಮತ್ತು ಸಿಬ್ಬಂದಿಯನ್ನು ಸರಕಾರ ಇಲಾಖೆಯ ಮೂಲಕ ಅಮಾನತು ಮಾಡಿದೆ ಎಂದು ಅಬೂಬಕ್ಕರ್ ಕುಲಯಿ ಹೇಳಿದ್ದಾರೆ.
ಇದು ಸಮಾಜದಲ್ಲಿ ಅರಾಜಕತೆ ಸೃಷ್ಟಿಸುವಲ್ಲಿ ಗೂಂಡಾಗಳಿಗೆ ಸರಕಾರ ಪರೋಕ್ಷ ಬೆಂಬಲ ನೀಡಿದಂತಾಗಿದೆ ಹಾಗೂ ಇಂತಹ ರಾಜಕೀಯ ಪ್ರೇರಿತ ಅಮಾನತುಗಳಿಂದ ಪೊಲೀಸ್ ಇಲಾಖೆಯ ಆತ್ಮಸ್ಥೈರ್ಯ ಕುಗ್ಗಿದಂತಾಗುತ್ತದೆ ಎಂದು SDPI ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಕ್ಷ ಪೊಲೀಸ್ ಅಧಿಕಾರಿಯಾಗಿರುವ ಮಂಗಳೂರು ನಗರ ಪೊಲೀಸ್ ಆಯುಕ್ತರು ಒತ್ತಡಗಳಿಗೆ ಮಣಿಯದೆ ಕೂಡಲೇ ಅಮಾನತು ಪ್ರಕ್ರಿಯೆಯನ್ನು ಹಿಂಪಡೆಯಬೇಕು ಪೊಲೀಸ್ ಇಲಾಖೆಯ ಅಧಿಕಾರಿಗಳು , ಸಿಬ್ಬಂದಿಗಳು ನೆಮ್ಮದಿಯಿಂದ ಕೆಲಸ ನಿರ್ವಹಿಸಲು ಸರಕಾರ ಮತ್ತು ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಅವಕಾಶವನ್ನು ಮಾಡಿಕೊಡಬೇಕು ಇಲ್ಲದಿದ್ದರೆ ಬಜಪೆ ಪೊಲೀಸ್ ಠಾಣೆ ಮುಂಭಾಗ ಸೇರಿದಂತೆ ಜಿಲ್ಲೆಯಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಬೇಕಾಗಬಹುದು ಎಂದು ಅಬೂಬಕ್ಕರ್ ಕುಳಾಯಿ ಹೇಳಿದ್ದಾರೆ.