ಬಂಟ್ವಾಳ: ಸರಕಾರಿ ಶಾಲೆ ಉಳಿಸುವ ಕ್ರಾಂತಿಯ ಕಿಚ್ಚು ನನ್ನಲ್ಲಿ ಹಚ್ಚಿದವರು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಪ್ರಕಾಶ್ ಅಂಚನ್. ಅವರ ಚಿಂತನೆಯೇ ವಿಶೇಷ. ನೋವನ್ನು ನುಂಗಿಕೊಂಡು ನಗುವಿನೊಂದಿಗೆ ಎಂದಿಗೂ ನಮ್ಮ ಶಾಲೆ ಎನ್ನುವ ಪ್ರೀತಿಯೊಂದಿಗೆ ಕೆಲಸ ಮಾಡುತ್ತಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದರು.
ಅವರು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ದಡ್ಡಲಕಾಡು ಸಂಭ್ರಮೋತ್ಸವದ ಎರಡನೇ ದಿನವಾದ ಭಾನುವಾರದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ದಡ್ಡಲಕಾಡು ಶಾಲೆಯ ಶಿಕ್ಷಕರು ಹಾಗೂ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿರುವುದರಿಂದ ಈ ಶಾಲೆ ಉತ್ತಮವಾಗಿ ಮುಂದುವರಿಯಲು ಸಾಧ್ಯವಾಗಿದೆ. ಪರಿವರ್ತನೆಯ ಹಾದಿಯ ದಡ್ಡಲಕಾಡು ಶಾಲೆಗೆ ಸಮಷ್ಠಿಯ ಶಕ್ತಿ ಇದೆ ಎಂದ ಅವರು ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಕೂಕ್ರಬೆಟ್ಟು ಶಾಲೆಯನ್ನು ಪ್ರಕಾಶ್ ಅಂಚನ್ ಅವರ ಸಹಕಾರದೊಂದಿಗೆ ಅಭಿವೃದ್ಧಿ ಪಡಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ ಇದು ಭಾರತದ ಮಣ್ಣಿನ, ಭಾರತದ ಪರಂಪರೆಯ ಶಾಲೆ, ಪರಿವರ್ತನೆ ಮಾಡುವ ಶಾಲೆ ಎಂದರು. ಪ್ರಕಾಶ್ ಅಂಚನ್ ಶಿಕ್ಷಣದ ಯೋಧ. ದಡ್ಡಲಕಾಡು ಶಾಲೆಯನ್ನು ದೇಶ ನೋಡುವಂತೆ ಪರಿವರ್ತನೆ ಮಾಡಬೇಕೆನ್ನುವ ಆಸೆ ಅವರದ್ದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಗೋಡೆಯಲ್ಲಿ ಮಧುಬನಿ ಚಿತ್ರ ಬಿಡಿಸಿದ ತಾಲೂಕು ಚಿತ್ರಕಲಾ ಶಿಕ್ಷಕರಾದ ತಾರಾನಾಥ ಕೈರಂಗಳ, ಮುರಳೀಕೃಷ್ಞ ರಾವ್, ಚೆನ್ನಕೇಶವ, ಬಾಲಕೃಷ್ಣ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಶನ್, ಪ್ರಮುಖರಾದ ರಘು ಶೆಟ್ಟಿ, ಗಣೇಶ್ ಸುವರ್ಣ ತುಂಬೆ, ಶ್ರೀನಿವಾಸ ಪೂಜಾರಿ, ಶ್ರೀನಿವಾಸ ಪಂಜಿಕಲ್ಲು, ವಸಂತ ಪೂಜಾರಿ ಹಟದಡ್ಕ, ಅರುಣ್ ಕುಮಾರ್ ಪುತ್ತಿಲ, ಶಿವಪ್ರಸಾದ್ ಅಜಿಲ, ಧೀರಜ್ ನಾಯ್ಕ್, ಮನೋಜ್ ಕುಮಾರ್ ಕಟ್ಟೆಮಾರ್, ಸುಕುಮಾರ್ ಬಂಟ್ವಾಳ, ಹರೀಶ್ ಕುಂದರ್, ಮನ್ನಥ ರಾಜ್ ಜೈನ್ ಪೆರಿಯಾರ್ ಗುತ್ತು, ರಂಜಿತ್ ಮೈರ, ಸಂಜೀವ ಪೂಜಾರಿ, ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ರಮಾನಂದ ಸ್ವಾಗತಿಸಿದರು, ಪ್ರೌಢಶಾಲಾ ವಿಭಾಗದ ಎಸ್ಡಿಎಂಸಿ ಕಾರ್ಯಾಧ್ಯಕ್ಷ ಪುರುಷೋತ್ತಮ ಅಂಚನ್ ಪ್ರಾಸ್ತವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ಕವಿತಾ ಹಾಗೂ ವೇದಾವತಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ, ವಿಠಲ ನಾಯಕ್ ಅವರಿಂದ ಗೀತ ಸಾಹಿತ್ಯ ಸಂಭ್ರಮ, ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮಕ್ಕಳಿಗೆ ಬಹುಮಾನ ವಿತರಿಸಿದರು. ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಶನ್, ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಉಪಸ್ಥಿತರಿದ್ದರು.