ಮಂಗಳೂರು : ಕೊಂಕಣಿ ಲೇಖಕ ಸಂಘ ಕರ್ನಾಟಕ, ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಿ ಬೆಳೆಸುವ ಉದ್ದೇಶದಿಂದ 2018ರಲ್ಲಿ ಆರಂಭಿಸಲಾಯಿತು. 2022ರಲ್ಲಿ ಕೊಂಕಣಿ ಸಾಹಿತ್ಯಕ್ಕೆಅಪಾರ ಕೊಡುಗೆ ನೀಡಿದ ಲೇಖಕರನ್ನುಆಯ್ಕೆ ಮಾಡಿ ಗೌರವಿಸಲು ಕೊಂಕಣಿ ಲೇಖಕ ಸಂಘ ನಿರ್ಧರಿಸಿತು.
ಅದರಂತೆ, ಕೊಂಕಣಿ ಲೇಖಕ ಸಂಘದ ಪ್ರಶಸ್ತಿ ಸಮಿತಿಯು ಖ್ಯಾತ ಕೊಂಕಣಿ ಬರಹಗಾರ ಶ್ರೀ ಎಡಿ ನೆಟ್ಟೊ ಅವರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ. ಪ್ರಶಸ್ತಿಯು ರುಪಾಯಿ 25000/- ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
2022ರ ಮಾರ್ಚ್ 28ರಂದು ಸಂಜೆ 6.30ಕ್ಕೆ ಮಂಗಳೂರುನಂತೂರಿನ, ಬಜ್ಜೋಡಿಯ ಸಂದೇಶ ಪ್ರತಿಷ್ಠಾನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂದೇಶ ಪ್ರತಿಷ್ಠಾನದ ನಿರ್ದೇಶಕರಾದ ಫಾದರ್ ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ ಭಾಗವಹಿಸಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೋ ಧನಂಜಯ ಕುಂಬ್ಳೆ ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು.
ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕರು ರಿಚರ್ಡ್ ಮೊರಾಸ್ , ಸಮಿತಿ ಸದಸ್ಯರು ಡೊಲ್ಫಿಎಫ್. ಲೋಬೊ, ಸಲಹಾ ಸಮಿತಿ ಸದಸ್ಯರು ಜೆ.ಎಫ್.ಡಿಸೋಜಾ ಮತ್ತು ಸಂಘಟನಾ ಸದಸ್ಯರು ಟೈಟಸ್ ನೊರೊನ್ಹಾ ಹಾಜರಿದ್ದರು.
ಎಡಿ ನೆಟ್ಟೊ – ಪರಿಚಯ
ಎಡ್ವಿನ್ ಮರಿಯಾಣ್ ನೆಟ್ಟೊ, ಮಂಗಳೂರು ಜೆಪ್ಪುವಿನಲ್ಲಿ, ಎಪ್ರಿಲ್ 10, 1938 ಜನನವಾಯಿತು, ತಂದೆ ದಿ| ಆಮಾಂಡೊ ನೆಟ್ಟೊ (ರಂಗನಟ ಹಾಗೂ ಬ್ಯಾಂಡ್ ಮಾಸ್ಟರ್, ಜೆಪ್ಪು) ಹಾಗೂ ತಾಯಿ ದಿ| ಫ್ರಾನ್ಸಿಸ್ಕಾ ನೆಟ್ಟೊ (ಗೃಹಿಣಿ). ಸಂತ ಜೋಸೆಫರ ಶಾಲೆ, ಜೆಪ್ಪು (8ನೇ ತರಗತಿ ವರೆಗೆ, 1952) ಸಂತ ಅಲೋಶಿಯಸ್ ಹೈಸ್ಕೂಲ್ (11ನೇ ತರಗತಿ ವರೆಗೆ, 1956) ವಿದ್ಯಾಭ್ಯಾಸ ಮಾಡಿದರು.
ಕಲಾಪ್ರತಿಭೆ: ನಾಟಕಕಾರ, ಸಂಗೀತಗಾರ ಹಾಗೂ ಗೀತ ಸಂಯೋಜಕರಾದ ತಂದೆಯ ಪ್ರಭಾವದಿಂದಾಗಿ ತನ್ನ 5 ವರ್ಷದ ಪ್ರಾಯದಿಂದಲೇ ಜೆಪ್ಪು ನಾಟಕ ಸಂಘದ ನಾಟಕಗಳಲ್ಲಿ ಪಾತ್ರಾಭಿನಯ, ಶಾಲೆಗಳಲ್ಲಿ ನಾಟಕ-ಸಂಗೀತ, ಕಿರುಡ್ರಾಮ ಬರೆದು ನಟನೆ, ಬ್ಯಾಟ್ಬಾಲ್ ಮತ್ತು ಫುಟ್ಬಾಲ್ ಆಟಗಾರ, ಹೈಸ್ಕೂಲ್ 8ನೇ ತರಗತಿ ಹಾಗೂ 11ನೇ ತರಗತಿಯಲ್ಲಿ ಫುಟ್ಬಾಲ್ ತಂಡದ ನಾಯಕ, ಹೈಸ್ಕೂಲ್ನ ನಿಯತಕಾಲಿಕ ‘ಲಿಟಲ್ಮ್ಯಾನ್’ ನಲ್ಲಿ ಕನ್ನಡ ಭಾಶೆಗಳಲ್ಲಿ ಕಥೆ. ಸಣ್ಣ ವಯಸ್ಸಿನಲ್ಲಿಯೇ ತಂದೆಯವರು ತರುತ್ತಿದ್ದ ಚಂದಮಾಮ, ಕಥಾವಳಿ, ಬಾಲಮಿತ್ರ ಮುಂತಾದ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡು ಬಂದುದರಿಂದ ಮುಂದೆ ಹೈಸ್ಕೂಲ್ನಲ್ಲಿಯೇ ಕಾದಂಬರಿ ಬರೆಯಲು ಆರಂಭ. ಭಾರತೀಯ ವಾಯುಸೇನಾ ಪಡೆಯಲ್ಲಿ ಫುಟ್ಬಾಲ್ ತಂಡದ ಸದಸ್ಯ, ಗಿಟಾರ್ ವಾದಕ, ಹಾಡುಗಾರ, ಉತ್ತಮ ಓದುಗಾರ, ಇಂಗ್ಲಿಷ್ ಕಾದಂಬರಿ ಓದುವ ಹವ್ಯಾಸ ಮುಂತಾದುವು, 1956ರಿಂದ ಮೊದಲುಗೊಂಡು 1993ರಲ್ಲಿ ದೊರೆತ ಉತ್ತಮ ಲೇಖಕ ಪ್ರಶಸ್ತಿಯವರೆಗೆ.
ವೈವಾಹಿಕ ಜೀವನ : 1970ರಲ್ಲಿ ರೋಜಾ ಮರಿಯಾ ಡಿಸಿಲ್ವಾ (ಮಿಲಾಗ್ರಿಸ್)ರೊಂದಿಗೆ ವಿವಾಹ , ಪುತ್ರಿ ಜಾಸ್ಮಿನ್ ಲೋನಾ, ಅಳಿಯ ಆಲಿಸ್ಟರ್ ಮಾರೆರಾ , ಶಾನ್ ಮತ್ತು ಅದಿತ್ ಮೊಮ್ಮಕ್ಕಳು.
ಸಾಹಿತಿಕ ಸೇವೆ: 1956 ರಲ್ಲಿ ಮನೆಗೆ ಬರುತ್ತಿದ್ದ ‘ಮಿತ್ರ್’, ‘ಝೆಲೊ’, ‘ಪಯ್ಣಾರಿ’, ಪತ್ರಿಕೆಗಳ ಪ್ರಭಾವದಿಂದ ಬರೆಯುವ ಆಸಕ್ತಿ, 1956ರಲ್ಲಿ ಮೊದಲ ಕವಿತೆ ‘ನಾಂವಾನ್ ಆಪಯ್ತಾತ್ ತುಕಾ ಸ್ಟೆಲ್ಲಾ’ ಮಿತ್ರ್ ಕೊಂಕಣಿ ಸಾಪ್ತಾಹಿಕದಲ್ಲಿ ಪ್ರಕಟ, ತಂದೆ ಹಾಗೂ ನಾಟಕಕಾರ ಅಣ್ಣ ಲುವಿ ನೆಟ್ಟೊ ಇವರ ಪ್ರೋತ್ಸಾಹದಿಂದ ಹಾಗೂ ಶ್ರೇಷ್ಠ ಕೊಂಕಣಿ ಸಾಹಿತಿ ದಿ| ಜೊ. ಸಾ. ಅಲ್ವಾರಿಸ್ ಇವರ ಮಾರ್ಗದರ್ಶನದಿಂದ ಕಥೆ-ಲೇಖನ ಬರೆಯುವ ಕಾಯಕ.
ಸಾಧನೆ: ಭಾರತದ ಅಸ್ಸಾಂ, ಕಾಶ್ಮೀರ, ಪಂಜಾಬ್, ರಾಜಸ್ಥಾನದಿಂದ ಕಥೆ-ಲೇಖನಗಳ ಮೂಲಕ ತಾಯ್ನಾಡಿನೊಂದಿಗೆ ಮಾನಸಿಕ ಹಾಗೂ ಆತ್ಮೀಯ ಸಂಬಂಧ ಹಾಗೂ ಸಂಪರ್ಕ. ಸುಮಾರು 66 ವರ್ಷಗಳಿಂದ ಇಂದಿನವರೆಗೆ ಪ್ರಕಟವಾದ ಕೃತಿಗಳು-3031, ಕಥೆ-530, ಲೇಖನ-2464, ಕವಿತೆ-26, ಕಾದಂಬರಿ-9, ಕಥಾ ಸಂಗ್ರಹಗಳು -2.
ಪ್ರಶಸ್ತಿಗಳು:
• 1992 ರಾಕ್ಣೊ ಸನ್ಮಾನ
• 2002 ‘ದಿವೊ’ ಮುಂಬಯಿ ಪ್ರಶಸ್ತಿ
• 2005 ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
• 2006 ಕುವೇಯ್ಟ್ ಕೊಂಕಣಿ ಟ್ಯಾಲೆಂಟ್ಸ್ ಪ್ರಶಸ್ತಿ
• 2008 ದಾಯ್ಜಿ ದುಬಯ್ ಪ್ರಶಸ್ತಿ
• 2010 ಕೊಂಕ್ಣಿ ಕುಟಮ್ ಬಾಹ್ರೇಯ್ನ್ ಪ್ರಶಸ್ತಿ
• 2018 ಸಂದೇಶ ಪ್ರಶಸ್ತಿ
ವೃತ್ತಿಪರ ಸೇವೆ: 1956 ರಲ್ಲಿ 18ವರ್ಷ ಪ್ರಾಯದಲ್ಲಿ ಭಾರತೀಯ ವಾಯುಸೇನೆ ಸೇರ್ಪಡೆ, ದೇಶದ ಗಡಿಪ್ರದೇಶದಲ್ಲಿ ಸುರಕ್ಷತೆ ಕಾಯ್ದುಕೊಳ್ಳುವಿಕೆ, 1962 ರಲ್ಲಿ ಚೀನಾ ಯುದ್ಧ, 1965 ರಲ್ಲಿ ಪಾಕಿಸ್ತಾನ ಯುದ್ಧ, 1971 ರಲ್ಲಿ ಬಾಂಗ್ಲಾ ದೇಶದ ಯುದ್ಧಗಳಲ್ಲಿ ಪಾಲ್ಗೊಳ್ಳುವಿಕೆ. ನಿರಂತರ 37 ವರ್ಷಗಳ ಸೇವೆ ನೀಡಿ, ಮಿಸ್ಸಾಯ್ಲ್ ಅಧಿಕಾರಿಯಾಗಿ 1993ರಲ್ಲಿ ವಾಯುಸೇನೆಯಿಂದ ನಿವೃತ್ತಿ. ದೀರ್ಘಾವಧಿಯ ಹಾಗೂ ಪ್ರಾಮಾಣಿಕ ಸೇವೆಗಾಗಿ ರಾಷ್ಟ್ರಪತಿಯಿಂದ ಪುರಸ್ಕಾರ ಹಾಗೂ ವಾಯುಸೇನಾಧಿಕಾರಿ ನಿವೃತ್ತ ವೇತನ. ವಾಯುಸೇನೆಯಲ್ಲಿ ಸೇವೆ ವಿಸ್ತರಣೆಗಾಗಿ ಮತ್ತು 3 ಯುದ್ಧಗಳಲ್ಲಿನ ಭಾಗವಹಿಸುವಿಕೆಗಾಗಿ 5 ಮಿಲಟರಿ ಪದಕಗಳು ಮತ್ತು ಎಲ್ಲಾ ಮಿಲಟರಿ ಸೌಲಭ್ಯಗಳು ಲಭ್ಯ.
1993 ರಿಂದ ಹಿರಿಯರ ಜಮೀನಿನಲ್ಲಿ ಸ್ವಂತ ಮನೆಕಟ್ಟಿ, ಸಾಹಿತಿಕ ಸೇವೆ ನೀಡುವುದರ ಮೂಲಕ ನೆಮ್ಮದಿಯ ಜೀವನ.