ಬಂಟ್ವಾಳ : ದಕ್ಷಿಣ ಕನ್ನಡದ ಬಂಟ್ವಾಳ ಬಳಿಯ ಅನಂತಾಡಿ ಗ್ರಾಮದ ನಿವಾಸಿ ಆಗಿದ್ದ ಟಿಕ್ ಟಾಕ್ ಅಜ್ಜಿ ಅಲಿಯಾಸ್ ಕಮಲಜ್ಜಿ ನಿನ್ನೆ ನಿಧನರಾಗಿದ್ದಾರೆ.
ಕಮಲಾ ಅಥವಾ ಕಮಲಜ್ಜಿ ಎಂದು ಕರೆಯಲಾಗುತ್ತಿದ್ದ ಇವರು ಕಳೆದ ಕೆಲವು ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕಮಲಜ್ಜಿ ನಿನ್ನೆ ನಿಧನ ಹೊಂದಿದ್ದಾರೆ. ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಅನಂತಾಡಿ ಗ್ರಾಮದ ಸಂಕೇತದಲ್ಲಿ ಗುರುವಾರ ಬೆಳಗ್ಗೆ ನಡೆಯಿತು. ನೂರಾರು ಬಂಧುಮಿತ್ರರು ಅಭಿಮಾನಿಗಳು ಅಂತಿಮ ದರ್ಶನ ಪಡೆದರು.
ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಅನಂತಾಡಿ ಸಂಕೇಶ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ನಾನೂ ಕೂಡ ಕಮಲಜ್ಜಿ ಅಭಿಮಾನಿಯಾಗಿದ್ದು, ಅವರ ವಿಡಿಯೋ ನೋಡಿ ಖುಷಿಪಡುತ್ತಿದ್ದೆ ಎಂದು ಕಮಲಜ್ಜಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು. ಜೊತೆಗೆ ಬಂಟ್ವಾಳ ಶಾಸಕ ರಮೇಶ್ ನಾಯಕ್, ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ವಿಟ್ಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸನತ್ ಕುಮಾರ್ ರೈ ಇನ್ನೂ ಹಲವರು ಸಂತಾಪ ಸೂಚಿಸಿದ್ದಾರೆ.