ದೇಶದ ದಲಿತರ ಬದುಕು ಭಯಭೀತಿಯಲ್ಲೇ ನಡೆಯುವಂತಾಗಿದೆ. ಮೋದಿ ಸರಕಾರದ ಅವಧಿಯಲ್ಲಿ ದಲಿತರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಅವರ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ಕೇಂದ್ರ ಬಜೆಟ್ಟಿನಲ್ಲಿ ನೀಡಲಿಲ್ಲ. ನೀತಿ ಆಯೋಗದ ಅಣತಿಯಂತೆ ಹಣವನ್ನು ಕಡಿತ ಮಾಡಲಾಗಿದೆ.
ರಾಜ್ಯವನ್ನು ಕೋಮುವಾದದ ಉಗ್ರಾಣವನ್ನಾಗಿ ಮಾಡಲಾಗುತ್ತಿದೆ. ದಲಿತರ ಮೇಲೆ ಧಾಳಿ ದೌರ್ಜನ್ಯಗಳನ್ನು ಮಾಡಿದ ಮೇಲ್ಜಾತಿಯ ಜನರನ್ನು ರಕ್ಷಿಸಲು ಕೇಸುಗಳನ್ನೇ ದಾಖಲಿಸುತ್ತಿಲ್ಲ. ರಾಜ್ಯದ ಹಲವೆಡೆಗಳಲ್ಲಿ ನಡೆದ ದಲಿತ ದೌರ್ಜನ್ಯಗಳ ಬಗ್ಗೆ ಕಿಂಚಿತ್ತೂ ಗಮನ ನೀಡದ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು ನಿಜಕ್ಕೂ ದಲಿತ ವಿರೋಧಿಯಾಗಿದೆ, ಸಂವಿಧಾನ ವಿರೋಧಿಯಾಗಿದೆ* ಎಂದು ದಲಿತ ಹಕ್ಕುಗಳ ಸಮಿತಿಯ ರಾಜ್ಯಾಧ್ಯಕ್ಷರಾದ ಗೋಪಾಲಕೃಷ್ಣ ಅರಳಹಳ್ಳಿಯವರು ಅಭಿಪ್ರಾಯ ಪಟ್ಟರು.
ದೌರ್ಜನ್ಯ ದಬ್ಬಾಳಿಕೆ ನಿರುದ್ಯೋಗ ಹಾಗೂ ಅಸಮಾನತೆಗಳ ವಿರುದ್ಧ ಹಮ್ಮಿಕೊಂಡ ಮಂಗಳೂರು ನಗರ ಮಟ್ಟದ ದಲಿತ ಚೈತನ್ಯ ಸಮಾವೇಶವನ್ನು ಉದ್ಘಾಟಿಸುತ್ತಾ ಈ ಮಾತುಗಳನ್ನು ಹೇಳಿದರು.
ಮುಂದುವರಿಸುತ್ತಾ ಅವರು, *ಮುಖ್ಯಮಂತ್ರಿ ಬೊಮ್ಮಾಯಿಯವರು ಆನ್ ಲೈನ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದಾಗಿ ಹೇಳುತ್ತಿದ್ದಾರೆ.ಇದು ಅವೈಜ್ಞಾನಿಕ ನಿರ್ಧಾರ. ಇದರಿಂದ ದಲಿತ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇತ್ತೀಚಿನ ಬಜೆಟ್ಟಿನಲ್ಲಿ ಭೂಮಿ ನೀರು ವಸತಿ ಶಿಕ್ಷಣ ಉದ್ಯೋಗಕ್ಕೆ ಆದ್ಯತೆ ನೀಡಿರುವ ಯಾವ ಕ್ರಮಗಳೂ ಕಾಣುತ್ತಿಲ್ಲ* ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದಲಿತ ಹಕ್ಕುಗಳ ಸಮಿತಿಯ ಮಾರ್ಗದರ್ಶಕರಾದ ಡಾ. ಕೃಷ್ಣಪ್ಪ ಕೊಂಚಾಡಿಯವರು, ಮಂಗಳೂರಿನ ದಲಿತರ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲಿ, ಆಳುವ ವರ್ಗಗಳಿಂದ ಇಂದಿಗೂ ವ್ಯವಸ್ಥಿತವಾಗಿ ದಲಿತರನ್ನು ರಾಜಕೀಯ ದಾಳಗಳನ್ನಾಗಿಸುವ ಹುನ್ನಾರದ ಬಗ್ಗೆ ಸವಿವರವಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ DYFI ಜಿಲ್ಲಾ ನಾಯಕರಾದ ಸಂತೋಷ್ ಬಜಾಲ್, ಬಶೀರ್ ಪಂಜಿಮೊಗರು, ಕೃಷ್ಣಪ್ಪ ಕೋಣಾಜೆ, ವ್ರತ್ತಿನಿರತ ಅಲೆಮಾರಿ ಶಿಲ್ಲೆಖ್ಯಾತ ಸಮುದಾಯದ ನಾಯಕರಾದ ರವಿಯವರು ಮಾತನಾಡಿ, ಪ್ರಜ್ಞಾವಂತರ, ಬುದ್ದಿವಂತರ ಜಿಲ್ಲೆಯೆಂದೇ ಕರೆಯಲ್ಪಡುವ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಏಳೆಂಟು ವರ್ಷಗಳಿಂದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಮಿತಿಮೀರುತ್ತಿದೆ. ಹಿಂದು ನಾವೆಲ್ಲ ಒಂದು ಬಂಧು ಹೇಳುವ ಹಿಂದುತ್ವವಾದಿ ಶಕ್ತಿಗಳು ದಲಿತರನ್ನು ಮಾತ್ರ ಹಿಂದುಗಳಾಗಿ ನೋಡುತ್ತಿಲ್ಲ. ಅಲ್ಪಸಂಖ್ಯಾತರ ಮೇಲೆ ಧಾಳಿ ನಡೆಸಲು ದಲಿತರನ್ನು ದುರುಪಯೋಗಪಡಿಸುತ್ತಿರುವ ಬಿಜೆಪಿ ಸಂಘಪರಿವಾರದ ದ್ವೇಷ ರಾಜಕಾರಣವನ್ನು ದಲಿತ ಸಮುದಾಯ ಅರ್ಥೈಸಬೇಕಾಗಿದೆ ಎಂದು ಹೇಳಿದರು.
ಸಮಾರೋಪ ಭಾಷಣ ಮಾಡಿದ ಜಿಲ್ಲಾ ಕಾರ್ಮಿಕ ಮುಖಂಡರಾದ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, ಸ್ಮಾರ್ಟ್ ಸಿಟಿ ಯೋಜನೆ ಹೆಸರಿನಲ್ಲಿ ಕೋಟ್ಯಾಂತರ ಹಣವನ್ನು ಗುಳುಂ ಮಾಡುತ್ತಿರುವ ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು ಮಂಗಳೂರಿನಲ್ಲಿ ದಲಿತರ ಬದುಕನ್ನು ಉತ್ತಮ ಪಡಿಸಲು ಗಮನ ಹರಿಸುತ್ತಿಲ್ಲ. ದಲಿತರಿಗಾಗಿ ಮೀಸಲಿರಿಸಿದ ಹಣವನ್ನು ದಲಿತರ ಅಭಿವ್ರದ್ದಿಗಾಗಿ ವಿನಿಯೋಗಿಸದೆ ಇತರ ಅಭಿವ್ರದ್ದಿ ಕಾರ್ಯಕ್ಕೆ ಉಪಯೋಗಿಸುವ ಮೂಲಕ ಮನಪಾ ಆಡಳಿತ ದಲಿತ ವಿರೋಧಿಯಾಗಿ ವರ್ತಿಸುತ್ತಿದೆ. ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಇನ್ನೂ ಶೋಷಿತ ಸಮುದಾಯಕ್ಕೆ ಭೂಮಿ, ಶಿಕ್ಷಣ, ಉದ್ಯೋಗ ದೊರೆಯದೆ ಇರುವುದು ದೇಶದ ಕರಾಳತೆಯನ್ನು ಎತ್ತಿ ತೋರಿಸಿದೆ. ಮುಂಬರುವ ದಿನಗಳಲ್ಲಿ ಬಲಿಷ್ಠ ದಲಿತ ಚಳುವಳಿಯಲ್ಲಿ ಕಟ್ಟುವ ಮೂಲಕ ಆಳುವ ವರ್ಗಕ್ಕೆ ಎದಿರೇಟು ನೀಡಬೇಕಾಗಿದೆ ಎಂದು ಹೇಳಿದರು.
ಸಮಾವೇಶಕ್ಕೆ ಶುಭ ಕೋರಿ ಸಮುದಾಯದ ವಾಸುದೇವ ಉಚ್ಚಿಲ್, ವಿಚಾರವಾದಿ ಸಂಘಟನೆಯ ನರೇಂದ್ರ ನಾಯಕ್, ಕಾರ್ಮಿಕ ಮುಖಂಡರಾದ ರವಿಚಂದ್ರ ಕೊಂಚಾಡಿಯವರು ಮಾತನಾಡಿದರು.
ವೇದಿಕೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ನಾಯಕರಾದ ಕ್ರಷ್ಣ ತಣ್ಣೀರುಬಾವಿ, ರಾಧಾಕೃಷ್ಣ, ಚಂದ್ರಶೇಖರ್, ಶಶಿಕಲಾ ನಂತೂರು,ಕಮಲ ಶಿವನಗರ, ಸುರೇಶ್ , ನಾರಾಯಣ ತಲಪಾಡಿ, ರಾಮಕೃಷ್ಣ ನಂತೂರು, ಶಿವಾನಂದ ಕುಳಾಯಿ, ಚಂದ್ರಶೇಖರ ಕೊಂಚಾಡಿ ಮುಂತಾದವರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ನಾಗೇಂದ್ರ ಉರ್ವಾಸ್ಟೋರು ವಹಿಸಿದ್ದರು. ಪ್ರಾರಂಭದಲ್ಲಿ ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿದರೆ ಕೊನೆಯಲ್ಲಿ ಪ್ರವೀಣ್ ಕೊಂಚಾಡಿ ವಂದಿಸಿದರು.