ಕಾಸರಗೋಡು: ಪ್ರವಾಸಿತಾಣವಾದ ಬೇಕಲ ಕೋಟೆಗೆ ಭೇಟಿ ನೀಡಿದ್ದ ಆರು ಮಂದಿಯ ತಂಡದ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಭಾನುವಾರ ಸಂಜೆ ಮೇಲ್ಪರಂಬ ದಲ್ಲಿ ನಡೆದಿದೆ.
ಘಟನೆಗೆ ಸಂಬಂಧ ಪಟ್ಟಂತೆ ನಾಲ್ವರ ನ್ನು ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ಮನ್ಸೂರ್ (41) ಅಬ್ದುಲ್ ಖಾದರ್ ಅಫೀಕ್ (37), ಮುಹಮ್ಮದ್ ನಿಸಾರ್ (38) ಮತ್ತು ಬಿ.ಕೆ ಆರಿಫ್ (32) ಬಂಧಿತರು. ತಂಡದಲ್ಲಿದ್ದ ಓರ್ವನ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಬೇಕಲ ಕೋಟೆಗೆ ತಲುಪಿ ವೀಕ್ಷಿಸಿದ ಬಳಿಕ ಮರಳುತ್ತಿದ್ದಾಗ ಮೇಲ್ಪರಂಬ ಬಳಿ ತಂಡವೊಂದು ತಡೆದು ಹಲ್ಲೆ ನಡೆಸಿದೆ.
ತಂಡದಲ್ಲಿ ಮೂವರು ಹುಡುಗರು, ಮತ್ತು ಮೂವರು ಹುಡುಗಿಯರು ಇದ್ದರೆನ್ನಲಾಗಿದೆ. ಈ ಪೈಕಿ ಓರ್ವ ವಿದ್ಯಾರ್ಥಿಯ ಹುಟ್ಟು ಹಬ್ಬ ವಾಗಿದ್ದು, ಈ ಹಿನ್ನಲೆಯಲ್ಲಿ ಬೇಕಲ ಕೋಟೆಗೆ ತಲುಪಿದ್ದರು. ಮೇಲ್ಪರಂಬದ ಹೋಟೆಲ್ ವೊಂದರಲ್ಲಿ ಆಹಾರ ಸೇವಿಸಲು ಕಾರಿನಲ್ಲಿ ತಲುಪಿದಾಗ ತಂಡವು ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿದೆ. ವಾಹನದಿಂದ ಕೆಳಿಗಿಳಿಯಲು ಅನುವು ಮಾಡಿಕೊಡದೆ ತಡೆದ ತಂಡವು ಹಲ್ಲೆ ನಡೆಸಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ನಾಲ್ವರನ್ನು ವಶಕ್ಕೆ ತೆಗೆದುಕೊಂಡರು. ಕಾರಿನಲ್ಲಿದ್ದ ಯುವತಿಯರನ್ನು ಪೋಷಕರನ್ನು ಕರೆಸಿ ಬಿಡುಗಡೆಗೊಳಿಸಲಾಯಿತು. ಬಂಧಿತರ ವಿರುದ್ಧ ಗುಂಪುಗೂಡಿ ಹಲ್ಲೆ, ದಿಗ್ಬಂಧನ , ಹಲ್ಲೆ ಸೇರಿದಂತೆ ಹಲವು ಮೊಕದ್ದಮೆ ಹೂಡಲಾಗಿದೆ.