ಕಾಸರಗೋಡು: ದೇವಸ್ಥಾನದಿಂದ ದೇವರ ವಿಗ್ರಹದ ಚಿನ್ನಾಭರಣ ಕಳವುಗೈದು ಪರಾರಿಯಾಗಿದ್ದ ಅರ್ಚಕನಾದ ಆರೋಪಿ ಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ತಿರುವನಂತಪುರಕ್ಕೆ ತೆರಳಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಿರುವನಂತಪುರ ಮೂಲದ ದೀಪಕ್ ನಂಬೂದಿರಿ ಬಂಧಿತ ಆರೋಪಿ. ಚಿನ್ನಾಭರನವನ್ನು ಮಾರಾಟ ಮಾಡಿದ್ದು, ಇದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ಟೋಬರ್ ೨೯ ರ ಬಳಿಕ ಈ ಕೃತ್ಯ ನಡೆದಿತ್ತು.
ದೇವರ ವಿಗ್ರಹದಿಂದ ಚಿನ್ನಾಭರಣವನ್ನು ಕದ್ದು ನಕಲಿ ಚಿನ್ನಾಭರಣ ತೊಡಿಸಿ ಈತ ಪರಾರಿಯಾಗಿದ್ದನು. ಮಂಜೇಶ್ವರ ಹೊಸಬೆಟ್ಟು ಶ್ರೀಮಂಗೇಶ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿತ್ತು. ಅಕ್ಟೋಬರ್ ೨೭ ರಿಂದ ಈತನನ್ನು ಪೂಜೆ ನೆರವೇರಿಸಲು ನೇಮಿಸಲಾಗಿತ್ತು. ೨೯ ರಂದು ಸಂಜೆ ಪೂಜೆಯ ಬಳಿಕ ಕಾವಲುಗಾರನಲ್ಲಿ ಹೊಸಂಗಡಿ ಪೇಟೆಗೆಂದು ತೆರಳಿದ್ದ ದೀಪಕ್ ನಂಬೂದಿರಿ ಬಳಿಕ ಮರಳಿ ಬಂದಿರಲಿಲ್ಲ. ದೇವಸ್ಥಾನದ ಮೊಕ್ತೇಸರ ಕರೆ ಮಾಡಿದರೂ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು.
ಇದರಿಂದ ಸಿದ್ದಾಪುರದ ಶ್ರೀಧರ ಭಟ್ ಎಂಬವರನ್ನು ಅರ್ಚಕರನ್ನಾಗಿ ನೇಮಿಸಿದ್ದು, ನವಂಬರ್ 1ರಂದು ಪೂಜೆ ನಡೆಸಲೆಂದು ಗರ್ಭಗುಡಿಗೆ ತೆರಳಿದಾಗ ದೇವರ ವಿಗ್ರಹದಲ್ಲಿದ್ದ ಚಿನ್ನಾಭರಣದ ಮೇಲೆ ಸಂಶಯಗೊಂಡು ಮೊಕ್ತೇಸರರಿಗೆ, ಮಾಹಿತಿ ನೀಡಿದ್ದು, ಪರಿಶೀಲಿಸಿದಾಗ ದೇವರ ವಿಗ್ರಹದಲ್ಲಿ ನಕಲಿ ಚಿನ್ನಾಭರಣ ಅಳವಡಿಸಿರುವುದು ಪತ್ತೆಯಾಗಿತ್ತು. ವಿಗ್ರಹದಲ್ಲಿದ್ದ ಎರಡು ಸರ ಸೇರಿದಂತೆ ಐದೂವರೆ ಪವನ್ ನ ಚಿನ್ನಾಭರಣವನ್ನು ಈತ ಕದ್ದು ಪರಾರಿಯಾಗಿದ್ದನು. ಮೊಕ್ತೇಸರ ಎಂ. ದೀಪಕ್ ರಾವ್ ಮಂಜೇಶ್ವರ ಪೊಲೀಸರಿಗೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.