ಕಾಸರಗೋಡು: ಬದಿಯಡ್ಕದ ದಂತ ವೈದ್ಯ ಡಾ.ಎಸ್.ಕೃಷ್ಣಮೂರ್ತಿ(೪೭) ನಾಪತ್ತೆಯಾಗಿದ್ದು,ಈ ಬಗ್ಗೆ ಲಭಿಸಿದ ದೂರಿ ನಂತೆ ಬದಿಯಡ್ಕ ಠಾಣಾ ಪೊಲೀಸರು ತನಿಖೆಯನ್ನುನಡೆಸುತ್ತಿದ್ದಾರೆ.
ನವಂಬರ್ 8ರಂದು ಮಧ್ಯಾಹ್ನ ಬಳಿಕ ವೈದ್ಯರು ನಾಪತ್ತೆಯಾಗಿದ್ದರು. ಈ ಬಗ್ಗೆ ಪತ್ನಿ ನೀಡಿದ ದೂರಿನಂತೆ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದರು.
ವೈದ್ಯರ ಬೈಕ್ ಕುಂಬಳೆ ಪೇಟೆಯಲ್ಲಿ ಪತ್ತೆಯಾಗಿತ್ತು.ಮೊಬೈಲ್ ಕ್ಲಿನಿಕ್ ನಲ್ಲೇ ಬಿಟ್ಟು ತೆರಳಿದ್ದಾರೆ. ಕ್ಲಿನಿಕ್ ಗೆ ಬಂದಿದ್ದ ಮಹಿಳೆ ಜೊತೆ ವೈದ್ಯರು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು,ಈ ಬಗ್ಗೆ ತಂಡವೊಂದು ಕ್ಲಿನಿಕ್ ಗೆ ತೆರಳಿ ವೈದ್ಯರನ್ನು ತರಾಟೆಗೆ ತೆಗೆದು ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ. ಇದಲ್ಲದೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.
ಈ ಬೆಳವಣಿಗೆ ಬಳಿಕ ಡಾ.ಕೃಷ್ಣಮೂರ್ತಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ನಾಪತ್ತೆ ಹಿನ್ನಲೆಯಲ್ಲಿ ಬದಿಯಡ್ಕ ಪೊಲೀಸರು ಕೇರಳ ಹಾಗೂ ಕರ್ನಾಟಕದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದಾರೆ. ವೈದ್ಯರನ್ನು ಕೂಡಲೇ ಪತ್ತೆ ಹಚ್ಚುವಂತೆ ಒತ್ತಾಯಿಸಿ ದಂತ ವೈದ್ಯರ ಸಂಘಟನೆಯ ಕಾಸರಗೋಡು ಘಟಕ ನೇತ್ರತದಲ್ಲಿ ಗುರುವಾರ ಬದಿಯಡ್ಕದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.