ಕಾಸರಗೋಡು : ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ತುಳು ಮಾತೃಭಾಷೆ ಕುಟುಂಬಗಳಿವೆ. ಆದರೆ, ಈ ವರ್ಗದ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಕಲಿಯುವ ಸೌಲಭ್ಯವಿಲ್ಲ. ಈ ವಿದ್ಯಾರ್ಥಿಗಳು ಹಿಂದಿನಿಂದಲೂ ಕನ್ನಡ ಮತ್ತು ಮಲಯಾಳಂನಲ್ಲಿ ಕಲಿಯುತ್ತಿದ್ದಾರೆ. ಈ ವಿದ್ಯಾರ್ಥಿಗಳ ಮೇಲೆ ಪಠ್ಯಪುಸ್ತಕ, ಅಧ್ಯಯನ ಭಾಷೆ ಬೇರೆಯಾಗಬೇಕೆಂಬ ಒತ್ತಡ ಕಡಿಮೆ ಏನಲ್ಲ, ಈ ವಿಚಾರದಲ್ಲಿ ಕೇರಳ ಸರಕಾರ ಮಧ್ಯ ಪ್ರವೇಶಿಸಬೇಕು ಎಂದು ಕೇರಳ ಸಾಹಿತ್ಯ ಅಕಾಡೆಮಿ ಸದಸ್ಯ ಇ.ಪಿ.ರಾಜಗೋಪಾಲನ್ ಅಭಿಪ್ರಾಯಪಟ್ಟರು.
ಎರಡನೇ ಪಿಣರಾಯಿ ವಿಜಯನ್ ಸರಕಾರದ ಪ್ರಥಮ ವರ್ಷಾಚರಣೆ ಅಂಗವಾಗಿ ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಬಹುಭಾಷಾ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ದ ಪ್ರಮುಖ ಭಾಷಾಂತರಕಾರ ಹಾಗೂ ಲೇಖಕ ಕೆ.ವಿ.ಕುಮಾರನ್, ಭಾಷಾ ಗಡಿಗಳನ್ನು ಮೀರಲು ಭಾಷಾಂತರಗಳು ಅತ್ಯುತ್ತಮವಾದ ಮಾರ್ಗವಾಗಿದ್ದು, ಸಂಸ್ಕೃತಿ ಇಲಾಖೆ ಇದಕ್ಕಾಗಿ ಸಾಕಷ್ಟು ಕೆಲಸ ಮಾಡಬಲ್ಲದು ಎಂದರು. ಪ್ರತಿ ವರ್ಷ ಮಲಯಾಳಂನ ಪ್ರಮುಖ ಹತ್ತು ಪುಸ್ತಕಗಳನ್ನು ಕನ್ನಡಕ್ಕೆ ಹಾಗೂ ಹತ್ತು ಕನ್ನಡ ಪುಸ್ತಕಗಳನ್ನು ಮಲಯಾಳಕ್ಕೆ ಭಾಷಾಂತರಿಸಲು ಸರಕಾರ ಮುಂದಾಗಬೇಕು ಹಾಗೂ ಕಥಕ್ಕಳಿ ಮತ್ತು ಯಕ್ಷಗಾನದ ಪ್ರಚಾರಕ್ಕೆ ಸಂಸ್ಕೃತಿ ಇಲಾಖೆ ಮುಂದಾಗಬೇಕು ಎಂದರು.