ಮಂಗಳೂರು: ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆ ಶಿಕ್ಷಕಿಯಿಂದ ಶ್ರೀರಾಮನ ಅವಹೇಳನ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಡಿಡಿಪಿಐ ವರದಿ ಮೇಲೆ ಪ್ರಾಥಮಿಕ ತನಿಖೆ ಮುಂದುವರೆದಿದೆ.
ಜೆರೋಸಾ ಶಾಲೆಯ ಏಳನೇ ತರಗತಿ ಮಕ್ಕಳ ಹೇಳಿಕೆ ಹಾಗೂ ಪೋಷಕರ ಹೇಳಿಕೆಯನ್ನು ದಾಖಲಿಸಿರೋ ಶಿಕ್ಷಣಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಲಿಖಿತ ಹೇಳಿಕೆಗಳನ್ನು ಐಎಎಸ್ ಅಧಿಕಾರಿ ಡಾ.ಆಕಾಶ್.ಎಸ್ ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸಲ್ಲಿಸಿದ್ದಾರೆ. ಶಾಲೆಯಲ್ಲೇ ಕಳೆದ ಶನಿವಾರ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಮಕ್ಕಳು ಹಾಗೂ ಪೋಷಕರ ಲಿಖಿತ ಹೇಳಿಕೆಗಳನ್ನು ಪಡೆಯಲಾಗಿತ್ತು.
ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತರಿಂದ ಡಿಡಿಪಿಐ ಕಚೇರಿಯಲ್ಲಿ ತನಿಖೆ ನಡೆಯುತ್ತಿದೆ. ದಕ್ಷಿಣಕನ್ನಡ ಡಿ.ಡಿ.ಪಿ.ಐ ವೆಂಕಟೇಶ ಸುಬ್ರಾಯ ಪಟಗಾರರಿಂದ ಮಾಹಿತಿ ಸಂಗ್ರಹವಾಗಿದೆ. ಇಲ್ಲಿ ಮಕ್ಕಳ ಮತ್ತು ಪೋಷಕರ ಲಿಖಿತ ಹೇಳಿಕೆಗಳ ವ್ಯತ್ಯಾಸಗಳ ಆಧಾರದಲ್ಲಿ ತನಿಖೆ ನಡೆಯುತ್ತಿದೆ. ಜೊತೆಗೆ ಬೆಳಗ್ಗಿನಿಂದಲೇ ಡಿಡಿಪಿಐ ಕಚೇರಿಯಲ್ಲಿ ಶಿಕ್ಷಕರು ಹಾಗೂ ಮಕ್ಕಳ ಹೇಳಿಕೆಗಳ ಸೂಕ್ಷ್ಮ ಪರಿಶೀಲನೆ ಮುಂದುವರೆದಿದೆ.