ಮಂಗಳೂರು: ಉಳಾಯಿಬೆಟ್ಟು ಗ್ರಾಮದ ಇಡ್ಮಾ ಎಂಬಲ್ಲಿ ಹರಿಯುತ್ತಿರುವ ಫಲ್ಗುಣಿ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ನಡೆಸಿದ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ,ಎನ್.ನಾಯಕ ಮತ್ತು ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ. ಈ ವೇಳೆ ಜೆಸಿಬಿ ಮತ್ತು ಡೋಜರ್ ಮೂಲಕ ಟಿಪ್ಪರ್ ಲಾರಿಗಳಿಗೆ ಮರಳು ತುಂಬುವುದು ಕಂಡುಬಂದಿದ್ದು, ಮರಳು ತುಂಬಿಸುತ್ತಿದ್ದ ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ 1 ಜೆಸಿಬಿ, 1 ಡೋಜರ್, ಮರಳು ತುಂಬಿದ 2 ಟಿಪ್ಪರ್, ಮರಳು ಸಾಗಾಟಕ್ಕೆ ಬಳಸಲಾಗಿದ್ದ ೮ ಖಾಲಿ ಟಿಪ್ಪರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಸ್ವಾಧೀನಪಡಿಸಿಕೊಂಡ ಒಟ್ಟು ಸೊತ್ತುಗಳ ಒಟ್ಟು ಮೌಲ್ಯ ೧,೨೫,೧೨,೦೦೦.೦೦ ಆಗಿರುತ್ತದೆ. ಪತ್ತೆಯಾದ ಡೋಜರ್, ಜಿ.ಸಿ.ಬಿ., ಟಿಪ್ಪರ್ ಮಾಲೀಕರ ಮಾಹಿತಿ ಸಂಗ್ರಹಕ್ಕೆ ತನಿಖೆ ನಡೆಯುತ್ತಿದ್ದು, ಕಾರ್ಮಿಕರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸದ್ರಿ ಮರಳು ಮತ್ತು ವಾಹನವನ್ನು ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರಿಗೆ ಹಸ್ತಾಂತರಿಸಲಾಗಿದೆ.
ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್, ಉಪ ಪೊಲೀಸ್ ಆಯುಕ್ತ ಅಂಶುಕುಮಾರ್, ಅಪರಾಧ ಮತ್ತು ಸಂಚಾರ ಉಪ ಆಯುಕ್ತ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಜಾನ್ಸನ್ ಡಿ’ಸೋಜಾ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ರಾಮ ನಾಯ್ಕ, ಎಎಸ್ಐ ರಂಜನ್.ಎಂ.ಕೆ, ಮಂಗಳೂರು ದಕ್ಷಿಣ ಉಪವಿಭಾಗದ ಕಚೇರಿ
ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅಕ್ರಮ ಮರಳು ಅಡ್ಡೆ ಕುರಿತು ಮಾಹಿತಿ ಇದ್ದಲ್ಲಿ ಒದಗಿಸುವಂತೆ ಪೊಲೀಸರು ಕೋರಿದ್ದು, ಮಾಹಿತಿ ಒದಗಿಸಿದವರ ವಿಳಾಸ ಗೌಪ್ಯತೆ ಕಾಪಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.