ಕಾಸರಗೋಡು: ಹಫ್ತಾ ಹಣ ನೀಡಿಲ್ಲ ಎಂಬ ಕಾರಣಕ್ಕೆ ಶನಿವಾರ ರಾತ್ರಿ ಕೊಲೆಗೀಡಾದ ಕರ್ನಾಟಕ ಕೊಪ್ಪಳದ ಶರಣಪ್ಪ (34) ರವರ ಮೃತದೇಹ ಜಿಲ್ಲಾಧಿಕಾರಿ, ಜನಮೈತ್ರಿ ಪೊಲೀಸ್ ಮತ್ತು ನಾಗರಿಕ ನೆರವಿನಿಂದ ಊರಿಗೆ ಕೊಂಡೊಯ್ಯಲಾಯಿತು.
ಕೂಲಿ ಕಾರ್ಮಿಕನಾಗಿದ್ದ ಶರಣಪ್ಪರ ಮೃತದೇಹವನ್ನು 700ಕಿ.ಮೀ ದೂರದ ಕೊಪ್ಪಳಕ್ಕೆ ತಲುಪಿಸಲು ಸಂಬಂಧಿಕರು ಮತ್ತು ಸ್ನೇಹಿತರ ಬಳಿ ಹಣ ಇಲ್ಲದೆ ಪರದಾಡುತ್ತಿದ್ದರು. ಕೊನೆಗೆ ಅಂಬ್ಯುಲೆನ್ಸ್ ಹಾಗೂ ಇತರ ನೆರವನ್ನು ನೀಡುವ ಮೂಲಕ ಮಾನವೀಯತೆ ಮೆರೆದರು. ಕಾಸರಗೋಡು ಸುತ್ತಮುತ್ತ ಕೂಲಿ ಕೆಲಸ ಮಾಡಿ ದುಡಿಯುತ್ತಿದ್ದ ಶರಣಪ್ಪ ಹಾಗೂ ಸ್ನೇಹಿತರು ನಗರ ಹೊರವಲಯದ ನುಳ್ಳಿಪ್ಪಾಡಿಯ ಅಂಗಡಿ ಜಗಲಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಹಫ್ತಾ ಹಣ ನೀಡಿಲ್ಲ ಎಂದು ನುಳ್ಳಿಪ್ಪಾಡಿ ಚೆನ್ನಿಕೆರೆಯ ಕ್ರಿಮಿನಲ್ ಮಣಿ ಎಂಬಾತ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದನು.
ಎದೆ, ಹೊಟ್ಟೆಗೆ ತೀವ್ರ ಸ್ವರೂಪದ ಗಾಯಗೊಂಡಿದ್ದ ಶರಣಪ್ಪರನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಮೃತದೇಹವನ್ನು ಕಾಸರಗೋಡಿಗೆ ತರಲಾಯಿತು. ಆದರೆ ಅಂಬ್ಯುಲೆನ್ಸ್ ವೆಚ್ಚ ದುಬಾರಿ ಯಾದುದರಿಂದ ಅತ್ತ ತೆರಳುವ ಯಾವುದಾದರೂ ವಾಹನ ಲಭಿಸಬಹುದೇ ಎಂಬ ಬಗ್ಗೆ ಸಂಬಂಧಿಕರು ವಿಚಾರಿಸುತ್ತಿದ್ದರು.
ಇದನ್ನು ಗಮನಿಸಿದ ಸ್ಥಳೀಯರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು. ಕೊನೆಗೆ ಜಿಲ್ಲಾಧಿಕಾರಿ ಜೀವನ್ ಬಾಬು, ಕಾಸರಗೋಡು ಜನಮೈತ್ರಿ ಪೊಲೀಸರು ಹಾಗೂ ನಾಗರಿಕರು ಮಾತುಕತೆ ನಡೆಸಿ ಅಂಬ್ಯುಲೆನ್ಸ್ ಹಾಗೂ ಅಗತ್ಯ ನೆರವನ್ನು ನೀಡಿದರು. ಕೊನೆಗೂ ನಿಟ್ಟುಸಿರುಬಿಟ್ಟ ಸಂಬಂಧಿಕರು, ಸ್ನೇಹಿತರು ಮೃತದೇಹ ಸಹಿತ ಊರಿಗೆ ಮರಳಿದರು.