ಉಳ್ಳಾಲ: ಉಳ್ಳಾಲ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕವನ್ನು ಸೋಮೇಶ್ವರದ ಮೂಡಸೈಟಿನಲ್ಲಿ ಸ್ಥಾಪಿಸಿರುವುದರ ವಿರುದ್ಧ ಗ್ರಾಮದ ಜನ ಮಂಗಳವಾರ ವಿಲೇವಾರಿಗೆ ಬಂದ 20 ತ್ಯಾಜ್ಯದ ವಾಹನಗಳನ್ನು ವಾಪಸ್ ಕಳುಹಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಸೋಮೇಶ್ವರ ಸಮುದ್ರ ತೀರದ ಕೆಲವು ಮೀ. ದೂರದಲ್ಲಿ ಉಳ್ಳಾಲ ನಗರಸಭೆ ತ್ಯಾಜ್ಯ ವಿಲೇವಾರಿ ಘಟಕ ಎಂದು ಬೃಹತ್ ಗಾತ್ರದ ಶೀಟ್ ಹಾಕಿರುವ ಗೋಡೌನ್ ರಚಿಸಿದೆ. ಆರಂಭದಲ್ಲಿ ಗ್ರೀನ್ ಲ್ಯಾಂಡ್ ನ ಎಂದು ಗಿಡಗಳ ಮಾರಾಟಕ್ಕೆ ನರ್ಸರಿ ರಚಿಸುತ್ತಿರುವುದಾಗಿ ಸುಳ್ಳು ಹೇಳಿತ್ತು. ಬಳಿಕ ಅಬ್ಬಕ್ಕ ಉತ್ಸವದ ಸಂದರ್ಭ ಮೊಗವೀರಪಟ್ನ ಸಮೀಪ ಅಬ್ಬಕ್ಕ ಉತ್ಸವ ಇರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತ್ಯಾಜ್ಯವನ್ನು ಮೂಡ ಸೈಟಿನಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಸ್ಥಳೀಯರನ್ನು ನಗರಸಭೆ ಅಧಿಕಾರಿಗಳು ನಂಬಿಸುವಲ್ಲಿ ಸಫಲರಾಗಿದ್ದರು. ಆದರೆ ಇದೀಗ ಒಂದು ತಿಂಗಳಿನಿಂದ ಸತತವಾಗಿ ತ್ಯಾಜ್ಯದ ಲಾರಿಗಳನ್ನು ಸ್ಥಳಕ್ಕೆ ತಂದು ತ್ಯಾಜ್ಯ ವಿಲೇವಾರಿ ನಡೆಸುವ ಕೆಲಸವಾಗುತ್ತಿದೆ. ಸ್ಥಳೀಯವಾಗಿ 100ಕ್ಕೂ ಅಧಿಕ ಮನೆಗಳು, ಧಾರ್ಮಿಕ ಕೇಂದ್ರ, ಕೆರೆಗಳಿವೆ. ಪ್ರಮುಖವಾಗಿ ಸಮುದ್ರ ತೀರದ ಪ್ರದೇಶವಾಗಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ ತಿಂಗಳಿನಿಂದ ಆರಂಭವಾದ ವಿಲೇವಾರಿ ಘಟಕದ ತ್ಯಾಜ್ಯಗಳು ಸ್ಥಳದಲ್ಲಿ ಬಿದ್ದು ದುರ್ವಾಸನೆ ಬೀರಲು ಆರಂಭವಾಗಿದೆ. ಸ್ಥಳೀಯರು ನಗರಸಭೆ ಅಧಿಕಾರಿಗಳಿಗೆ ಹಲವು ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಸ್ಪಂಧನೆ ನೀಡಿಲ್ಲ. ತ್ಯಾಜ್ಯ ವಿಲೇವಾರಿಯನ್ನು ಮುಂದುವರಿಸುತ್ತಲೇ ಬಂದಿದ್ದಾರೆ. ಇದರಿಂದ ಆಕ್ರೋಶಗೊಂಡ ಜನ ಇಂದು ಉಳ್ಳಾಲ ನಗರಸಭೆ ಪ್ರದೇಶದಿಂದ ಸಂಗ್ರಹಿಸಿ ತಂದ 20 ಲಾರಿಗಳನ್ನು ವಿಲೇವಾರಿ ನಡೆಸಲು ಬಿಡದೆ ವಾಪಸ್ ಕಳುಹಿಸುವ ಮೂಲಕ ಉಗ್ರವಾಗಿ ಪ್ರತಿಭಟಿಸಿದರು.
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು !
ಪ್ರತಿಭಟನೆ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಉಳ್ಳಾಲ ನಗರಸಭೆಯ ಆರೋಗ್ಯ ಅಧಿಕಾರಿಗಳಾದ ಜೈಶಂಕರ್ ಮತ್ತು ಸಂತೋಷ್ ಇಬ್ಬರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಎಲ್ಲಿಯೂ ಕಸ ಹಾಕಲು ಬಿಡದೇ ಇದ್ದಲ್ಲಿ ನಾವು ಏನು ಮಾಡಬೇಕು. ಎಲ್ಲರಿಗೂ ತೊಂದರೆಯಲ್ಲವೇ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದಾಗ ಗ್ರಾಮಸ್ಥರು ನಿಮ್ಮ ಮನೆ ಮುಂದೆ ಹಾಕಿದರೆ ನೀವು ಬಿಡುತ್ತೀರಾ ಎಂದು ಪ್ರಶ್ನಿಸಿದರಲ್ಲದೆ, ಜೀವ ಹೋಗುವವರೆಗೂ ಪವಿತ್ರ ಧಾರ್ಮಿಕ ಹಾಗೂ ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಬಿಡುವುದಿಲ್ಲ. ಎಲ್ಲಿಂದಲೋ ತಂದ ತ್ಯಾಜ್ಯವನ್ನು ಈ ಭಾಗದಲ್ಲಿ ಸುರಿಯುವುದರಲ್ಲಿ ನ್ಯಾಯವಿಲ್ಲ. ಬೇಕಾದಲ್ಲಿ ಅವರವರ ಮನೆಗಳಲ್ಲಿ ತ್ಯಾಜ್ಯ ಘಟಕ ನಿರ್ಮಿಸುವಂತೆ ಮಾಡಿ ಎಂದು ಆಗ್ರಹಿಸಿದರು.