ಪುತ್ತೂರು: ಪುತ್ತೂರು, ವಿಟ್ಲ, ಮಿತ್ತೂರು ಸೇರಿದಂತೆ ಕಳೆದ ಕೆಲವು ಸಮಯಗಳಿಂದ ನಡೆದ ಮನೆಗಳಿಂದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿರುವ ಅರೋಪಿ ತಾನು ನಡೆಸಿದ ಕಳವಿನ ಕುರಿತು ಮಹತ್ವದ ಸುಳಿವು ನೀಡಿದ್ದು, ಆತನಿಂದ 38 ಗ್ರಾಂ ಚಿನ್ನ ಮತ್ತು 18 ಬೆಳ್ಳಿಯ ನಾಣ್ಯವನ್ನು ಸ್ವಾಧೀನ ಪಡೆದು ಕೊಳ್ಳಲಾಗಿದೆ.
ಮೂಲತಃ ಕಡಬ ತಾಲೂಕು ಕೊಯಿಲ ಕ್ಯಾಟಲ್ ಫಾರ್ಮ್ ಕಲಾಯಿ ನಿವಾಸಿ ಅಬ್ದುಲ್ ಕುಂಞಿ ಅವರ ಪುತ್ರ ಪ್ರಸ್ತುತ ಮಂಜೇಶ್ವರ ತಾಲೂಕಿನ ಕುಂಬ್ಳೆ ಮೊಗ್ರಾಲ್ ಕುಟ್ಟನ್ಯೊಳ್ಪುನಲ್ಲಿ ವಾಸ್ತವ್ಯ ಹೊಂದಿರುವ ಇಬ್ರಾಹಿಂ ಖಲಂದರ್(31ವ)ರವರು ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಯಾಗಿದ್ದು, ಅ.27ರಂದು ಡಿವೈಎಸ್ಪಿ ವಿಶೇಷ ತಂಡ ಆರೋಪಿಯನ್ನು ಬಂಧಿಸಿದ್ದು, ಅ.28ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಿಂದ ಹೆಚ್ಚಿನ ಮಾಹಿತಿ ವಿಚಾರಣೆಗಾಗಿ ಕಸ್ಟಡಿಗೆ ಕೇಳಿಕೊಂಡಿದ್ದರು. ನ್ಯಾಯಾಲಯ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿತ್ತು. ಕಸ್ಟಡಿಯಲ್ಲಿದ್ದ ಆರೋಪಿ ತಾನು ನಡೆಸಿದ ಕೆಲವೊಂದು ಕಳವಿನ ಮಹತ್ವದ ಸುಳಿವು ನೀಡಿದ್ದಾನೆ.
ಉರಿಮಜಲು ಗ್ರಾಮದಲ್ಲಿ ನಡೆಸಿದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 20 ಗ್ರಾಂ ಚಿನ್ನ, ಮಿತ್ತೂರಿನಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ 18 ಬೆಳ್ಳಿಯ ನಾಣ್ಯ ಮತ್ತು ಪುತ್ತೂರು ಮಹಾವೀರ ಆಸ್ಪತ್ರೆಯ ಬಳಿ ಮನೆಯಿಂದ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ 18 ಗ್ರಾಂ ಚಿನ್ನವನ್ನು ಪೊಲೀಸರು ಆರೋಪಿಯಿಂದ ಸ್ವಾಧೀನ ಪಡೆದು ಕೊಂಡಿದ್ದಾರೆ. ಈ ಪೈಕಿ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣದಲ್ಲೂ ಭಾಗಿಯಾಗಿರುವ ಕುರಿತು ಆರೋಪಿ ಬಾಯಿ ಬಿಟ್ಟಿದ್ದು, ಮುಂದಿನ ದಿನಗಳಲ್ಲಿ ವಿಟ್ಲ ಪೊಲೀಸರು ಈತನನ್ನು ಪೊಲೀಸ್ ಕಸ್ಟಡಿಗೆ ಪಡೆದು ಕೊಳ್ಳುವ ಸಾಧ್ಯತೆ ಇದೆ. ಅ.29ರಂದು ಆರೋಪಿ ಇಬ್ರಾಹಿಂ ಖಲಂದರ್ ಅವರನ್ನು ಕಳವು ನಡೆಸಿದ ಮನೆಗಳಿಗೆ ಕರೆದು ಕೊಂಡು ಹೋಗಿ ಮಹಾಜರು ಮತ್ತು ಕಳ್ಳತನ ಮಾಡಿದ ಸೊತ್ತನ್ನು ಮಾರಾಟ ಮಾಡಿದ ಚಿನ್ನದ ಮಳಿಗೆಗಳಿಗೆ ಕರೆದೊಯ್ದು ಅಲ್ಲಿ ಚಿನ್ನಾಭರಣಗಳನ್ನು ಸ್ವಾಧೀನ ಪಡೆದು ಕೊಳ್ಳಲಾಗಿದೆ. ಅ.30ಕ್ಕೆ ಅರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.