ಪುತ್ತೂರು: ಚಿನ್ನದ ಲೇಪನ ಮಾಡಿದ ಆಭರಣವನ್ನು ಅಡವಿಟ್ಟು ಬ್ಯಾಂಕ್ಗೆ ವಂಚನೆ ಮಾಡಿದ ಪ್ರಕರಣವನ್ನು ದಾಖಲಿಸಿಕೊಂಡ ಪುತ್ತೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಲ್ನಾಡು ಗ್ರಾಮದ ಬಂಗಾರಡ್ಕ ನಿವಾಸಿ ನಾರಾಯಣ ಅಚಾರ್ಯ ಎಂಬವರ ಪುತ್ರ ಗಣೇಶ್ ಆಚಾರ್ಯ(39ವ)ರವರು ಬಂಧಿತ ಆರೋಪಿ. ಗಣೇಶ್ ಆಚಾರ್ಯರವರು ಬ್ಯಾಂಕೊಂದರ ನಿತ್ಯ ಠೇವಣಿ ಸಂಗ್ರಹಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು, ಅವರು ಇಲ್ಲಿನ ಮುಖ್ಯರಸ್ತೆ ಮಿನಾರ್ ಕಾಂಪ್ಲೆಕ್ಸ್ನಲ್ಲಿರುವ ಫೆಡರಲ್ ಬ್ಯಾಂಕ್ನಲ್ಲಿ ಚಿನ್ನಾಭರಣ ಅಡವಿಟ್ಟು ಹಣ ಪಡೆದು ಕಂತು ರೂಪಾದಲ್ಲಿ ಪಾವತಿ ಮಾಡಿಕೊಂಡು ವ್ಯವಹಾರ ನಡೆಸುತ್ತಿದ್ದರು.
ಅವರಿಟ್ಟ ಚಿನ್ನವನ್ನು ಬ್ಯಾಂಕ್ ಕಾನೂನು ಚೌಕಟ್ಟಿನಲ್ಲಿ ಪರೀಕ್ಷೆ ಮಾಡಿಸುತ್ತಿತ್ತು. ಪರೀಕ್ಷಿಸುತ್ತಿದ್ದ ವೇಳೆ ಆಭರಣಕ್ಕೆ ಚಿನ್ನದ ಲೇಪನ ಎಂದು ಗೊತ್ತಾಗುತ್ತಿರಲಿಲ್ಲ. ಇತ್ತೀಚೆಗೆ ಅವರು ಅಡವಿಟ್ಟ ಆಭರಣಕ್ಕೆ ಸಂಬಂಧಿಸಿ ಪಡೆದ ಲಕ್ಷಾಂತರ ರೂಪಾಯಿ ಹಣ ಮರುಪಾವತಿಗೆ ತಡವಾಗುತ್ತಿರುವುದನ್ನು ಗಮನಿಸಿದ ಬ್ಯಾಂಕ್ ಆಭರಣವನ್ನು ಸೂಕ್ಷ್ಮವಾಗಿ ಪರೀಕ್ಷಿಸಿತು.
ಈ ವೇಳೆ ಗಣೇಶ್ ಆಚಾರ್ಯ ಅವರು ಅಡವಿಟ್ಟ ಆಭರಣಗಳು ಚಿನ್ನದ ಕೋಟಿಂಗ್ ಕೊಟ್ಟ ಆಭರಣಗಳೆಂದು ಬೆಳಕಿಗೆ ಬಂದಿದ್ದು, ಬ್ಯಾಂಕ್ ಮೆನೇಜರ್ ತರುಣ್ ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ತನಿಖೆ ನಡೆಸಿ ಆರೋಪಿ ಗಣೇಶ್ ಆಚಾರ್ಯ ಅವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.