ಬೆಳ್ತಂಗಡಿ: ಧರ್ಮಸ್ಥಳ ಲಕ್ಷ ದೀಪೋತ್ಸವಕ್ಕೆ ಬಂದವರು ಕೇವಲ ಜಾತ್ರೆಯಲ್ಲಿ ಸುತ್ತಾಟ ನಡೆಸಿ ಹಾಗೆಯೇ ಮನೆಗೆ ಮರಳಬಾರದು, ಬದಲಾಗಿ ಕೆಲವೊಂದಾದರೂ ಹೊಸ ಮಾಹಿತಿ, ಜ್ಞಾನವನ್ನು ಪಡೆದುಕೊಂಡು ಹೋಗಬೇಕು ಎಂಬ ಕಲ್ಪನೆಯಿಂದ ದೀಪೋತ್ಸವದ ಸಂದರ್ಭ ಸರ್ವ ಧರ್ಮ, ಸಾಹಿತ್ಯ ಸಮ್ಮೇಳನ ಕಳೆದ 85 ವರ್ಷಗಳಿಂದ ಪ್ರಾರಂಭಗೊಂಡಿತು. ಅದಕ್ಕೆ ಪೂರಕವಾಗಿ ಈಗಿನ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ವಸ್ತು ಪ್ರದರ್ಶನವನ್ನೂ ಏರ್ಪಡಿಸುತ್ತಾ ಬಂದಿದ್ದಾರೆ.
ಇದೀಗ ಅದು ರಾಜ್ಯ ಮಟ್ಟದ ವಸ್ತು ಪ್ರದರ್ಶನವಾಗಿ ಜನಾಕರ್ಷಣೆಗೊಂಡಿದ್ದು. 41ನೇ ವರ್ಷದ ವಸ್ತುಪ್ರದರ್ಶವನ್ನು ಲಕ್ಷ ದೀಪೊತ್ಸವದ ಅಂಗವಾಗಿ ಡಿ. 2 ರಿಂದ 6ರವರೆಗೆ ಕ್ಷೇತ್ರದ ಸನಿಹವಿರುವ ಶ್ರೀ ಮಂ.ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ವಸ್ತು ಪ್ರದರ್ಶನ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ. 198ಕ್ಕೂ ಹೆಚ್ಚು ವಿವಿಧ ರೀತಿಯ ಮಳಿಗೆಗಳು ಪ್ರದರ್ಶನದಲ್ಲಿದ್ದು ಆದಿತ್ಯವಾರ ಬೆಳಗ್ಗೆಯಿಂದಲೇ ಜನಸಂದೋಹವನ್ನು ಆಕರ್ಷಿಸುವಲ್ಲಿ ಸಫಲವಾಗಿದೆ.
ವಿವಿಧ ಪ್ರಕಾಶನಗಳ ಪುಸ್ತಕ ಮಳಿಗೆಗಳು ಸಾಲು ಒಂದೆಡೆಯಾದರೆ, ನವೀನ ರೀತಿಯ ಗೃಹೋಪಯೋಗಿ ಉಪಕರಣಗಳ ಮಳಿಗೆಗಳು ಇನ್ನೊಂದೆಡೆ, ವಿವಿಧ ನಮೂನೆಯ ವಸ್ತ್ರಭಂಡಾರದ ಆಕರ್ಷಣೆ ಮತ್ತೊಂದೆಡೆಯಿದೆ. ಹೆಂಗಳೆಯರಿಗಾಗಿ ಹಲವಾರು ಫ್ಯಾನ್ಸಿ ಅಂಗಡಿಗಳು ಮಗದೊಂಡೆ ರಚನೆಗೊಂಡಿವೆ. ಇನ್ನುಳಿದಂತೆ ಅತ್ಯಾಕರ್ಷಕ ಬ್ಯಾಗುಗಳ, ಸ್ವೆಟರ್ ಗಳ, ಮಕ್ಕಳ ಆಟದ ಸಾಮಾನುಗಳ, ವಿಶೇಷ ಕುರುಕುರು ತಿಂಡಿಗಳ, ಉತ್ತರ ಭಾರತೀಯ ತಿಂಡಿ-ತಿನಸುಗಳ, ಪ್ಲಾಸ್ಟಿಕ್ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಪ್ರದರ್ಶನದೊಳಗೆ ಹೊಕ್ಕಂತೆ ವಿಶೇಷವಾಗಿ ವಿವಿಧ ಬ್ಯಾಂಕು, ಜೀವ ವಿಮೆ, ಅಂಚೆ, ಬಿಎಸ್ಎನ್ಎಲ್ ಸೇವೆಗಳ, ಸರಕಾರಿ ಮಳಿಗೆಗಳಲ್ಲಿ ಸೌಲಭ್ಯಗಳ ಮಾಹಿತಿ ಸಾರ್ವಜನಿಕರಿಗೆ ದೊರೆಯುತ್ತದೆ. ಮಾಹಿತಿ ನೀಡಲು ಸಂಬಂಧಪಟ್ಟ ಸಂಸ್ಥೆಗಳು ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ. ನಂದಿನ ಉತ್ಪನ್ನಗಳು ಸಿಗುತ್ತವೆ. ಮೋದಿ ಕೇರ್ ಏನೆಂಬುದನ್ನು ತಿಳಿಯಬಹುದಾಗಿದೆ. ಹೊಸ ವಾಹನಗಳನ್ನು, ಕೃಷಿ ಯಂತ್ರೋಪಕರಣಗಳನ್ನು, ರುಡ್ಸೆಟ್ ಬಜಾರ್ ನಲ್ಲಿ ಉತ್ಪನ್ನಗಳನ್ನು, ಕ್ಯಾಂಪ್ಕೋ ಉತ್ಪನ್ನಗಳನ್ನು, ಹೊಲಿಗೆ ಯಂತ್ರಗಳನ್ನು, ಫ್ಯಾನ್ಸಿ ಟಾಯ್ಸ್, ಜೆರಾಕ್ಸ್ ಮಿಷಿನ್, ಕರಕುಶಲ ವಸ್ತುಗಳನ್ನು, ಮಣ್ಣಿನ ಇಟ್ಟಿಗೆಗಳನ್ನು, ಸಾವಯವ ಕೃಷಿ ಉತ್ಪನ್ನಗಳನ್ನು, ಅಗರಬತ್ತಿಗಳನ್ನು, ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು, ಸಿರಿ ಉತ್ಪನ್ನಗಳನ್ನು, ಧರ್ಮೋತ್ಥಾನ ಟ್ರಸ್ಟ್, ರತ್ನಮಾನಸ ಕೃಷಿ ಉತ್ಪನ್ನಗಳನ್ನು, ನರ್ಸರಿ ಉಪಕರಣಗಳನ್ನು, ವಿನೂತನ ಟರ್ಪಾಲುಗಳನ್ನು, ಮರದ ವಸ್ತುಗಳನ್ನು, ನಾಟಿ ಔಷಧಿ, ತರಕಾರಿ ಬೀಜಗಳನ್ನು, ಗೀಸರ್, ಸೋಲಾರ್ ಸಿಸ್ಟಮ್ ಗಳನ್ನು, ನೋಡಬಹುದಲ್ಲದೆ ಖರೀದಿಯನ್ನೂ ಮಾಡಬಹುದಾಗಿದೆ.
ಪುರಾತನ ದೇವಸ್ಥಾನಗಳನ್ನು ನವೀಕರಿಸುವುಲ್ಲಿ ಕೊಡುಗೆಯನ್ನು ನೀಡಿರುವ ಧರ್ಮೋತ್ಥಾನ ಟ್ರಸ್ಟ್ ನ ಸಾಧನೆಗಳನ್ನು, ಭೂಮಿ ತಾಯಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಿ ಎಂಬ ಸಂದೇಶವನ್ನು ಹೊತ್ತ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿವಿಧ ಸೇವಾಕಾರ್ಯಗಳನ್ನು, ವೇಣೂರು ಐಟಿಐ ಮಕ್ಕಳ ಕೌಶಲ್ಯಗಳನ್ನು, ಪ್ರಕೃತಿ ಚಿಕಿತ್ಸೆಯ ವಿವರಗಳ ಪ್ರದರ್ಶನವನ್ನು, ಏರ್ಪಡಿಸಲಾಗಿದೆ. ಅಬಾಲ ವೃದ್ಧರಾದಿಯಾಗಿ ವಸ್ತುಪ್ರದರ್ಶನ ಬೆಳಗ್ಗೆಯಿಂದ ತಡರಾತ್ರಿಯ ತನಕ ಜನಸಂದಣಿಯಿಂದ ಕೂಡಿದೆ. ಇಲ್ಲಿನ ವಿಶೇತೆಗಳಿಂದಾಗಿ ಒಮ್ಮೆ ಒಂದು ಸುತ್ತು ತಿರುಗಾಡುವವರು ಇನ್ನೊಂದು ಸುತ್ತು ಹಾಕುವುದರಲ್ಲಿ ಸಂಶಯವಿಲ್ಲ. ತಿರುಗಾಡಿ ತಿರುಗಾಡಿ ಸುಸ್ತಾದರೆ ಸನಿಹದಲ್ಲೇ ಇರುವ ವಸ್ತುಪ್ರದರ್ಶನ ಮಂಟಪದಲ್ಲಿ ನಡೆಯುವ ಸಾಂಸ್ಕøತಿಕ, ಮನೋರಂಜನಾ ಕಾರ್ಯಕ್ರಮಗಳನ್ನು ಕೂತು ವೀಕ್ಷಿಸುವ ಏರ್ಪಾಡನ್ನು ಮಾಡಲಾಗಿದೆ. ಇಂದಿನಿಂದ ಇನ್ನೂ ಎರಡು ದಿನಗಳ ಕಾಲ ವಸ್ತುಪ್ರದರ್ಶನವಿದ್ದು ಮುಕ್ತ ಪ್ರವೇಕಾಶವಿದೆ.