ತುಮಕೂರು: ಮೌಲ್ಯಗಳು ಸಾಮಾಜಿಕ ಆರ್ಥಿಕ, ಸಾಂಸ್ಕೃತಿಕ ಬದಲಾವಣೆಗಳ ಪ್ರಭಾವದಿಂದ ತಮ್ಮ ಅಸ್ತಿತ್ವ ಕಳೆದುಕೊಂಡಿವೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಕರ್ನಲ್ ಪ್ರೊ. ವೈ.ಎಸ್. ಸಿದ್ದೇಗೌಡ ಅಭಿಪ್ರಾಯಪಟ್ಟರು.
ತುಮಕೂರು ವಿವಿಯು ನೀತಿ ಆಯೋಗ ಮತ್ತು ಭಾರತೀಯ ಶಿಕ್ಷಣ ಮಂಡಲ್ ಸಹಭಾಗಿತ್ವದಲ್ಲಿ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ “ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಿಕ್ಷಕರ ಪಾತ್ರ’’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು ಸದ್ಯದಲ್ಲೇ ಅಧಿಕೃತವಾಗಿ ಅನುಷ್ಠಾನಕ್ಕೆ ಬರಲಿದೆ. ತಜ್ಞರು, ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳ ಅಭಿಪ್ರಾಯಗಳನ್ನು ಪಡೆದ ಬಳಿಕವೇ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿದ್ದೇವೆ ಎಂದರು.
ಒಂದೊಂದು ರಾಷ್ಟ್ರಕ್ಕೂ ಒಂದೊಂದು ಗುರುತಿದೆ. ಹಾಗೆಯೇ ಭಾರತಕ್ಕೆ ಒಂದು ಗುರುತಿದೆ. ತನ್ನದೆ ಆದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಅಳವಡಿಸಿಕೊಂಡು, ಶ್ರೇಯಸ್ಸು ಮತ್ತು ಯಶಸ್ಸನ್ನು ಸಾಧಿಸುವ ಉದ್ದೇಶದಿಂದ ಈ ಶಿಕ್ಷಣ ನೀತಿ ಸಹಾಯಕವಾಗಲಿದೆ. ಗುಣಮಟ್ಟದ ಸಂಶೋಧನೆಗೆ ಒತ್ತು ನೀಡದಿದ್ದರೆ ನಮಗೆ ಭವಿಷ್ಯವಿಲ್ಲ ಎಂದರು.
ಭಾರತೀಯ ಶಿಕ್ಷಣ ಮಂಡಲ್ನ ಪ್ರದೀಪ್ ಬಿ. ಗುರುರಾಜ್ ಮಾತನಾಡಿ ಪ್ರಾದೇಶಿಕವಾಗಿ ಶಿಕ್ಷಣ ನೀತಿಗಳನ್ನು ಅಳವಡಿಸಿಕೊಳ್ಳುವುದು ಯಾವಾಗಲೂ ಉತ್ತಮ. ಅದನ್ನು ಹೊಸ ಶಿಕ್ಷಣ ನೀತಿ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಕೋರ್ಸುಗಳ ಕಲಾ ವಿಭಾಗ, ವಿಜ್ಞಾನ ವಿಭಾಗ ಇತ್ಯಾದಿ ವ್ಯತ್ಯಾಸಗಳಿರುವುದಿಲ್ಲ. ಎಲ್ಲರಿಗೂ ಎಲ್ಲ ವಿಷಯಗಳನ್ನೂ ಅಧ್ಯಯನ ಮಾಡುವ ಅವಕಾಶ ಇರುತ್ತದೆ ಎಂದರು.
ಬಹುಶಿಸ್ತೀಯ ವಿವಿಗಳು, ಸಂಶೋಧನ ವಿವಿಗಳು, ಪದವಿ ನೀಡುವ ವಿವಿಗಳು ಹೀಗೆ ವಿವಿಧ ಮಾದರಿಗಳು ತೆರೆದುಕೊಳ್ಳಲಿವೆ. ವಿದೇಶಿ ವಿವಿಗಳು ಪ್ರವೇಶಿಸಲಿವೆ. ಅವುಗಳ ಮಟ್ಟಕ್ಕೆ ನಾವು ಬೆಳೆಯುವ ಸವಾಲನ್ನು ಸ್ವೀಕರಿಸಬೇಕಾಗಿದೆ ಎಂದರು.
ಭಾರತೀಯ ಶಿಕ್ಷಣ ಮಂಡಲ್ನ ಅರುಣ್ ಕುಮಾರ್ ದಿಕ್ಸೂಚಿ ಭಾಷಣ ಮಾಡಿದರು. ಕುಲಸಚಿವ ಪ್ರೊ.ಬಿ.ಟಿ ಸಂಪತ್ ಕುಮಾರ್ ಸ್ವಾಗತಿಸಿದರು. ಡಾ. ಜಾಯ್ ನೆರೆಲ್ಲಾ ನಿರೂಪಿಸಿದರು.