ಕಾಸರಗೋಡು: ರಸ್ತೆ ಬದಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಚಾಲಕರೋರ್ವ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಪೊಯಿನಾಚಿ ಪೆಟ್ರೋಲ್ ಬಂಕ್ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.
ಮೃತಪಟ್ಟವರನ್ನು ಕುಂಡಕುಯಿ ಮರುಂತಡ್ಕದ ಮಧುಸೂದನ್ (32) ಎಂದು ಗುರುತಿಸಲಾಗಿದೆ. ಕೊಲ್ಲೂರಿಗೆ ತೆರಳಿ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಕುಂಡಂಕುಯಿಯಿಂದ ನಾಲ್ವರು ಜುಲೈ 12 ರಂದು ಕೊಲ್ಲೂರು ದೇವಸ್ಥಾನಕ್ಕೆ ತೆರಳಿದ್ದರು. ಕೊಲ್ಲೂರಿನಿಂದ ಕಾಸರಗೋಡಿಗೆ ಮರಳುವ ದಾರಿ ಮಧ್ಯೆ ಬೆಳಿಗ್ಗೆ ಪೊಯಿನಾಚಿಗೆ ತಲುಪಿದಾಗ ಪೆಟ್ರೋಲ್ ಪಂಪ್ ನಲ್ಲಿ ಅಲ್ಪ ಸಮಯ ಚಾಲಕ ಕಾರು ನಿಲ್ಲಿಸಿದ್ದು, ಉಳಿದವರು ಕಾರಿನಲ್ಲೇ ಕುಳಿತಿದ್ದರು. ಈ ನಡುವೆ ಚಾಲಕ ಮಧುಸೂದನ್ ಕೆಳಗಿಳಿದು ಮೊಬೈಲ್ ನಲ್ಲಿ ಮಾತನಾಡುತ್ತ ಮುಂದೆ ಬರುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ ಮೂಲಕ ಅತೀ ವೇಗದಿಂದ ಬಂದ ಇನ್ನೊಂದು ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅಲ್ಪ ದೂರ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಮಧುಸೂದನ್ ರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ.