ಮೂಡುಬಿದಿರೆ: ಕೇವಲ ಬಿಜೆಪಿಗರಿಗೆ ಇಷ್ಟವಾಗುವಂತೆ ಭಾರತದ ಆಡಳಿತವನ್ನು ನಡೆಸಲು ಈ ದೇಶ ಅವರ ಪೂರ್ವಿಕರ ಆಸ್ತಿಯಲ್ಲ. ಮುಸ್ಲಿಂರಿಂದ ಹಿಂದೂ ಪೂರ್ವಜರು ಹಿಂಸೆ ಎಂದಿಗೂ ಅನುಭವಿಸಿಲ್ಲ. ಭಾರತೀಯ ಜನರು ಯಾರಿಂದ ಅನ್ಯಾಯವನ್ನು ಅನುಭವಿಸಿದ್ದರೋ ಅವರಿಗೇ ಮತ ಹಾಕಿ ಗೆಲ್ಲಿಸುತ್ತಿದ್ದಾರೆ. ಗುಂಡು ಬೀಳುವುದಾದರೆ ನನ್ನ ಎದೆಗೆ ಬೀಳಲಿ, ಅಮಾಯಕರನ್ನು ಗೋಲಿಬಾರ್ ನೆಪದಲ್ಲಿ ಬಲಿ ಪಡೆಯುವುದು ಸರಿಯಲ್ಲ ಎಂದು ಪ್ರಗತಿ ಪರ ಚಿಂತಕ ಮಹೇಂದ್ರ ಕುಮಾರ್ ಕೇಂದ್ರ ಸರಕಾರದ ವಿರುದ್ದ ಹರಿಹಾಯ್ದರು.
ಅವರು ಸಂವಿಧಾನ ರಕ್ಷಣಾ ಸಮಿತಿ ಮೂಡುಬಿದಿರೆ ವತಿಯಿಂದ ಕೇಂದ್ರ ಸರಕಾರದ ಸಂವಿದಾನ ಮತ್ತು ಜನವಿರೋಧಿ ನೀತಿಗಳ ವಿರುದ್ದ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ನರೇಂದ್ರ ಮೋದಿಯವರು ಪ್ರಾದೇಶಿಕ ಸ್ಥಿತಿಗತಿಯನ್ನು ಗಮನಿಸಿ ಸ್ಥಳಕ್ಕೆ ತಕ್ಕಂತೆ ಮಾತು ಬದಲಾಯಿಸುತ್ತಾರೆ. ದೇಶಭಕ್ತಿ, ಹಿಂದುತ್ವ, ಸಂವಿಧಾನ ಸೇರಿದಂತೆ ಎಲ್ಲಾ ವ್ಯವಸ್ಥೆಗಳ ಬಗ್ಗೆ ಗೌರವ ಇಲ್ಲದ ಬಿಜೆಪಿಯ ನಾಟಕಗಳು ಬುದ್ದಿ ಇರುವವರಿಗೆ ಅರ್ಥವಾಗದಿರುವುದು ದುರಂತ. ದೇಶ ಭಕ್ತಿಯ ಹೆಸರಲ್ಲಿ ನಡೆಯುತ್ತಿರುವ ಅನಾಚಾರಗಳು ಜನರಿಗೆ ತಿಳಿಯುವುದೇ ಇಲ್ಲ ಎಂದು ಕಿಡಿಕಾರಿದರು.
ಪ್ರಸಕ್ತ ರಾಜಕೀಯ ವಿದ್ಯಮಾನಗಳು ದೇಶಕ್ಕೆ ಬೆಂಕಿ ಇಡುತ್ತಿದ್ದು ಧರ್ಮಗಳೊಳಗಿನ ಬೆಂಕಿ ದೇಶವನ್ನೇ ಸುಡಲು ಮುಂದಾಗುತ್ತಿದೆ. ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂದು ಒಡೆದು ಆಳುವ ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲ ಪಕ್ಷಗಳು ಸಮಾನ ಪಾತ್ರಧಾರಿಗಳು. ಹಿಂದೂ ಸಂಘಟನೆಗಳು ತಮ್ಮ ಧರ್ಮದ ಆಂತರಿಕ ಸಮಸ್ಯೆಗಳನ್ನು ಯೋಚಿಸದೆ ಮುಸ್ಲಿಂ ಧರ್ಮವನ್ನು ದೂರುವ ಮೂಲಕ ರಾಜಕೀಯ ಬೇಳೆ ಬೇಯಿಸುತ್ತಿದೆ. ಗಾಂಧಿ ತತ್ವದಿಂದ ಬಿಜೆಪಿ ಬೇಳೆ ಬೇಯುವುದಿಲ್ಲ. ತಾಲಿಬಾನ್ ಮನಸ್ಥಿತಿ ಮತ್ತು ಕೃತ್ಯಕ್ಕಾಗಿ ಬಿಜೆಪಿ ಗಾಂದಿ ಮತ್ತು ಅವರ ತತ್ವಗಳನ್ನು ದ್ವೇಷಿಸುತ್ತಿದೆ ಎಂದು ಪ್ರಗತಿ ಪರ ಚಿಂತಕ ಮಹೇಂದ್ರ ಕುಮಾರ್ ಕೇಂದ್ರ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಶಾಸಕ ಐವನ್ ಡಿಸೋಜಾ ಮಾತನಾಡಿ, ನಮ್ಮ ದೇಶದ ಮುಸ್ಲಿಂ ಸಮುದಾಯಕ್ಕೆ ತೊಂದರೆ ನೀಡಿ ಬಹುಸಂಖ್ಯಾತರ ಮತಗಳನ್ನು ಪಡೆಯುವ ಸಂಚಿನೊಂದಿಗೆ ಕೇಂದ್ರ ಸರಕಾರ ಜನ ವಿರೋಧಿ ಕಾನೂನನ್ನು ಜಾರಿಗೆ ತಂದಿದೆ. ಕೇಂದ್ರದ ಸದನಗಳಲ್ಲಿ ಅಂಗೀಕಾರ ಪಡೆದರೂ ದೇಶದಲ್ಲಿ ಅನುಷ್ಠಾನಗೊಳಿಸಿದ ರಾಜ್ಯಗಳ ಪೈಕಿ ಅನುಪಾತ ಹೊಂದಾಣಿಕೆಯಿಂದ ಈ ಕಾಯ್ದೆ ಜನವಿರೋಧಿ ಎಂದು ಸಾಭೀತಾಗಿದೆ ಎಂದರು. ಎಸ್ಡಿಪಿಐ ಮುಖಂಡ ಎ.ಕೆ ಅಶ್ರಫ್ ಮಾತನಾಡಿ, ಅನೇಕ ಸವಾಲುಗಳು ಬಂದರೂ ಸಂವಿಧಾನ ಹಿತದೃಷ್ಟಿಯಿಂದ ಮುಸ್ಲಿಂಮರು ಈ ವರೆಗೆ ಮೌನಿಯಾಗಿದ್ದರು. ಕಾಯ್ದೆ ನಿಷೇಧವೇ ಗೋಲಿಬಾರ್ನಲ್ಲಿ ಬಲಿಯಾದ ಅಮಾಯಕರಿಗೆ ಪರಿಹಾರವಾಗಬೇಕು. ಸರ್ಕಾರದ ಜುಜೂಬಿ ಹಣಕ್ಕೆ ಕೈಚಾಚುವ ಅವಶ್ಯಕತೆಯಿಲ್ಲ. ಮೋದಿಗೆ ಸಧ್ಯ ನಡುಕ ಉಂಟಾಗಿದ್ದು, ಅಗತ್ಯ ಬಿದ್ದರೆ ಗುಂಡಿಗೆ ಎದೆಯೊಡ್ಡಿ ಪ್ರಾಣತ್ಯಾಗ ಕ್ಕೂ ಸಿದ್ದರಾಗಿದ್ದು, ನಮಗೆ ಯಾವುದನ್ನೂ ಸಾಬೀತುಪಡಿಸುವ ಅವಶ್ಯಕತೆ ಇಲ್ಲ. ದೇಶದ ರಕ್ಷಣೆಯೇ ಮುಖ್ಯ ಎಂದರು.
ಪ್ರತಿಭಟನೆಯಲ್ಲಿ ಅಬ್ದುಲ್ ಸಲೀಂ, ಸಲೀಂ ಹಂಡೇಲು, ಯಾದವ ಶೆಟ್ಟಿ, ಆನಂದ ಮಿತ್ತಬೈಲ್, ದಿನೇಶ್ ಹೆಗ್ಡೆ, ಅಮೃತ್ ಶೆಣೈ ಮೊದಲಾದವರು ಉಪಸ್ಥಿತರಿದ್ದರು.