ಪುತ್ತೂರು: ಕಬಕ ಗ್ರಾಮದ ಪೋಳ್ಯ ಎಂಬಲ್ಲಿ ಮಾಣಿ-ಮೈಸೂರು ಹೆದ್ದಾರಿಯ ರಸ್ತೆ ಬದಿಯಲ್ಲಿರುವ ಮನೆಯಲ್ಲಿ ಅ.15ರಂದು ತಡರಾತ್ರಿ ಕಚ್ಚಾ ಬಾಂಬ್ ಸ್ಪೋಟಗೊಳಿಸಿ ಮನೆಯನ್ನು ಧ್ವಂಸ ಮಾಡವ ಕೃತ್ಯಕ್ಕೆ ಸಂಬಂಧಿಸಿ ಒಂದು ಬಾಂಬ್ ಸ್ಪೋಟಿಸಿದ ಆರೋಪಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ.
ಪುತ್ತೂರು ನಗರ ಠಾಣೆಯ ಪೊಲೀಸರ ತಂಡ 11 ದಿನಗಳ ಕಾರ್ಯಾಚರಣೆಯಿಂದ ಕೇರಳದಲ್ಲಿ ಬಂಧನಕ್ಕೊಳಗಾಗಿದ್ದಾನೆ.
ಆರೋಪಿ ಕೇರಳದ ಕೊಟ್ಟಾಯಂ ಜಿಲ್ಲೆಯ ತುಡುವಿಳ ತಾಲೂಕಿನ ಅರ್ಕುಳ ಪಂಚಾಯತ್ ಪಿಣಕಾಟ್ ಮನೆ ದೇವಸ್ಯ ಎಂಬವರ ಪುತ್ರ ಬಾಬು ಯಾನೆ ಬಾಲು ಯಾನೆ ಬಾಲೆಟ್ಟ ಯಾನೆ ದೇಸ್ಯ ಸೆಬಾಸ್ಟಿಯನ್ ಯಾನೆ ಕುಟ್ಟಚ್ಚನ್ ಯಾನೆ ಮಹಮ್ಮದ್(81)ನನ್ನು ಕೇರಳದ ಕಣ್ಣೂರು ಜಿಲ್ಲೆಯ ಅಲಕ್ಕೋಡು ಬಸ್ ನಿಲ್ದಾಣದ ಬಳಿ ಅ.26ರಂದು ಸಂಜೆ ಬಂಧಿಸಲಾಗಿದೆ.
ಆತ ಅ.15ರಂದು ತಡರಾತ್ರಿ ಕೆ.ಎನ್. ಕ್ಯಾಟರರ್ಸ್ ಸಂಸ್ಥೆಯ ಮಾಲಿಕ ನಾರಾಯಣ ಪ್ರಸಾದ್ ಎಂಬವರ ಪೋಳ್ಯದಲ್ಲಿರುವ ಕೈಲಾಸ ನಿವಾಸ ಮನೆಯ ಜಗಲಿಯಲ್ಲೇ ಬಾಂಬ್ ಸ್ಫೋಟಗೊಳಿಸಿದ್ದ. ಘಟನೆಯಿಂದಾಗಿ ಅವರ ಪತ್ನಿ ಶಾಲಿನಿ ಗಂಭೀರ ಗಾಯಗೊಂಡಿದ್ದರು. ನಾರಾಯಣ ಪ್ರಸಾದ್ ಅವರಿಗೂ ಗಾಯವಾಗಿತ್ತು. ಸ್ಪೋಟದಿಂದಾಗಿ ಮನೆ ಬಾಗಿಲು ಛಿದ್ರಗೊಂಡಿತ್ತು. ಮನೆ ದ್ವಂಸ ಕೃತ್ಯಕ್ಕೆ ಬಳಸಿದ ಮೂರು ಬಾಂಬ್ನಲ್ಲಿ ಒಂದು ಬಾಂಬ್ ಸ್ಪೋಟಗೊಂಡಿದ್ದರಿಂದ ಈ ಘಟನೆ ನಡೆದಿದ್ದು ಇನ್ನೆರಡು ಜೀವಂತ ಬಾಂಬ್ ಪತ್ತೆಯಾಗಿತ್ತು.
ಈ ಘಟನೆಯ ಬಳಿಕ ಬಾಂಬ್ ಸ್ಪೋಟಗೊಳಿಸಿದ ಶಂಕಿತ ಆರೋಪಿ ಅದೇ ಮನೆಯ ಮಹಡಿಯ ಕೊಠಡಿಯಲ್ಲಿ ವಾಸವಾಗಿದ್ದ ಬಾಬು ಯಾನೆ ಬಾಲು ಎಂದು ಮನೆಯವರ ಮಾಹಿತಿಯಂತೆ ಪೊಲೀಸರು ತನಿಖೆ ನಡೆಸಲು ಆರಂಭಿಸಿದ್ದರು. ಎಸ್ಪಿಯವರ ನೇತೃತ್ವದಲ್ಲಿ ಮೂರು ತಂಡ ರಚನೆ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಎಸ್.ಐ ಅಜೇಯ್ ಕುಮಾರ್ ಡಿ.ಎನ್ ಅವರ ತಂಡ ಅ.16ರಿಂದ ಕೇರಳದಲ್ಲೆ ಮುಕ್ಕಾಂ ಹೂಡಿ ಪತ್ತೆ ಕಾರ್ಯ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗೆ ನ್ಯಾಯಾಲಯವು ಐದು ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ.