ಉಳ್ಳಾಲ: ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನ ವಿದ್ಯಾರ್ಥಿಯೋರ್ವರು ಸರಕಾರದ ಸವಲತ್ತಿನಿಂದ ವಂಚಿತರಾಗಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಿಂಗಳ ಹಿಂದೆ ನಡೆದಿದ್ದು, ಇದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳೆಲ್ಲರೂ ಆತಂಕಗೊಂಡು ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನ ವಿದ್ಯಾರ್ಥಿ ಸಂತೋಷ್ ಹೇಳಿದ್ದಾರೆ.
ಅವರು ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ದಲಿತ ವಿರೋಧಿ ಆಡಳಿತವನ್ನು ಖಂಡಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಕಚೇರಿ ಎದುರುಗಡೆ ಗುರುವಾರ ಹಮ್ಮಿಕೊಂಡಿದ್ದ ಅನಿರ್ದಷ್ಟಾವಧಿ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸರಕಾರದಿಂದ ಸಿಗುವ ಸವಲತ್ತುಗಳನ್ನು ಮಂಗಳೂರು ವಿಶ್ವವಿದ್ಯಾನಿಲಯ ಆಡಳಿತ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಕೊಡಿಸುವಲ್ಲಿ ವಿಫಲವಾಗಿದೆ. ಹಲವು ಬಾರಿ ಬೇಡಿಕೆ ಮುಂದಿಟ್ಟರೂ ಸಕಾರಾತ್ಮಕ ಸ್ಪಂಧನೆ ದೊರೆಯದೆ ಕೇವಲ ವಿಶ್ವಾಸಗಳು ಮಾತ್ರ ಸಿಕ್ಕಿದೆ. ಪ್ರತಿ ಭೇಟಿಯ ದಾಖಲೆಗಳನ್ನು ಇಟ್ಟುಕೊಂಡು ಹೋರಾಟಕ್ಕೆ ಮುಂದಾಗಿದ್ದೇವೆ. ಯಾವುದೇ ಒಳಮರ್ಮ, ಹುನ್ನಾರವಿಲ್ಲದ ಪ್ರತಿಭಟನೆ ಇದಾಗಿದೆ. ಮುಖ್ಯಮಂತ್ರಿಗಳು ದಲಿತರ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸುವಂತೆ ಸೂಚಿಸುತ್ತಿದ್ದರೂ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅದು ಪೂರೈಕೆಯಾಗುತ್ತಿಲ್ಲ. ಸರಕಾರ 16,000 ಕೋಟಿ ಅನುದಾನ ಪ.ಜಾತಿ, ಪ.ಪಂಗಡದ ವಿದ್ಯಾಥರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಮಂಜೂರುಗೊಳಿಸಿದ್ದರೂ, ಅದರಲ್ಲಿ ಸಮಾಜ ಕಲ್ಯಾಣ ಇಲಾಖೆ ಕೇವಲ 4,500 ಕೋಟಿ ರೂ. ಅನುದಾನವನ್ನು ಮಾತ್ರ ವ್ಯಯಿಸಿದೆ. ಮಂಗಳೂರು ವಿ.ವಿಯಲ್ಲಿ ಲ್ಯಾಪ್ ಟಾಪ್ ಕೊಡಲು ಅನುದಾನವಿಲ್ಲವೆಂದು ಹೇಳುತ್ತಿದ್ದು, ಇದರಿಂದ ಸಮಾಜ ಕಲ್ಯಾಣ ಇಲಾಖೆ ಜತೆಗೆ ಮಂಗಳೂರು ವಿ.ವಿ ಆಡಳಿತ ಸಂಪರ್ಕವೇ ಇಲ್ಲದಂತೆ ವರ್ತಿಸುತ್ತಿದೆ. ಸಂಶೋಧನಾ ವಿದ್ಯಾರ್ಥಿಗೆ ನಾಲ್ಕು ವರ್ಷಗಳಿಗೆ ಫೆಲೋಶಿಪ್ ನೀಡಲಾಗುತ್ತಿದ್ದು, ಅದನ್ನು ಐದು ವರ್ಷಗಳಿಗೆ ವಿಸ್ತರಿಸಲು ಮನವಿಯನ್ನು ಮಾಡುತ್ತಾ ಬಂದಿದ್ದರೂ ಅದು ಈಡೇರಿಲ್ಲ. ಮಂಗಳೂರು ವಿ.ವಿ ಬಿಟ್ಟು ಇತರೆ ವಿ.ವಿ ಯವರು ಸಂಶೋಧನೆ ಮಾಡುವಂತಿಲ್ಲ.
ಅಲ್ಲದೆ ಉದ್ಯೋಗ ನಿರ್ವಹಿಸುವಂತಿಲ್ಲ ಅನ್ನುವ ಕಾನೂನು ಜಾರಿ ಮಾಡುವ ಮೂಲಕ ವಿದ್ಯಾರ್ಥಿಗಳ ಒಗ್ಗಟ್ಟು ಮುರಿಯುವ ಪ್ರಯತ್ನ ನಡೆದಿದೆ. ವಿದ್ಯಾರ್ಥಿಯೋರ್ವ ತನಗೆ ಸಿಗಬೇಕಾದ ಸೌಲಭ್ಯಗಳು ದೊರೆಯದೆ ಬದುಕಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೂ ಯತ್ನಿಸಿದ ಪ್ರಕರಣದಿಂದ ಬೆದರಿ ಅನಿವಾರ್ಯವಾಗಿ ಪ್ರತಿಭಟನೆಗೆ ಇಳಿಯಬೇಕಾಯಿತು ಎಂದರು.
ಒಂದೂವರೆ ವರ್ಷವಾದರೂ ಸೌಲಭ್ಯವಿಲ್ಲ : ಯೋಗ ವಿಜ್ಞಾನದ ಸಂಶೋಧನಾ ವಿದ್ಯಾರ್ಥಿ ರಮೇಶ್ ಮಾದಾರ್ ಕಳೆದ ಒಂದೂವರೆ ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದರೂ ಈವರೆಗೂ ಲ್ಯಾಪ್ ಟಾಪ್ ಆಗಲಿ, ಫೆಲೋಶಿಪ್ ಕೂಡಾ ದೊರೆತಿಲ್ಲ. ಮಾರ್ಗದರ್ಶಕರು ಸರಿಯಾದ ಸಲಹೆ ನೀಡದೆ, ಸಿಗುವ ಸೌಲಭ್ಯಗಳು ಸಿಗದಂತಾಗಿದೆ. ಮನೆಯಲ್ಲೂ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು ಹಲವು ಸಮಯಗಳಿಂದ ವಿ.ವಿ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರೂ ಯಾವುದೇ ರೀತಿಯ ಸ್ಪಂಧನೆ ದೊರೆತಿಲ್ಲ . ಇದರಿಂದ ಅವರ ಭವಿಷ್ಯವೇ ನಶಿಸಿ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಪ್ರತಿಭಟನೆಯಲ್ಲಿ ವ್ಯಕ್ತವಾಯಿತು.
ಸಂಶೋಧನ ವಿದ್ಯಾರ್ಥಿ ಶಿವರಾಜ್ ಮಾತನಾಡಿ ಪ.ಜಾತಿ ಮತ್ತು ಪ.ಪಂಗಡದ ವಿದ್ಯಾರ್ಥಿಗಳ ಸೇರ್ಪಡೆ ಸಂದರ್ಭ ಇತರೆ ವಿ.ವಿಗಳಲ್ಲಿ ಶುಲ್ಕ ಪಡೆಯದೇ ಇದ್ದರೂ, ಮಂಗಳೂರು ವಿ.ವಿಯಲ್ಲಿ ಪಡೆಯಲಾಗುತ್ತಿದೆ. ಆದರೆ ಅದರ ಮರುಪಾವರ್ಥಿಗಳು ಸೌಲಭ್ಯ ವಂಚಿತರಾಗುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಹರೀಶ್, ವೆಂಕಟೇಶ್, ಯೋಗೀಶ್, ದಿವ್ಯಾ ಸಾಲ್ಯಾನ್, ಸುರೇಖಾ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಭಟನಾ ಜಾಥಾ ಮಂಗಳೂರು ವಿಶ್ವವಿದ್ಯಾನಿಲಯ ಕಚೇರಿಯಿಂದ ಆಡಳಿತ ಕಚೇರಿವರೆಗೆ ನಡೆಯಿತು.
ಕುಲಪತಿಗಳ ಆಗಮನಕ್ಕಾಗಿ 20 ನಿಮಿಷ ಪಟ್ಟು ಬಿಡದ ವಿದ್ಯಾರ್ಥಿಗಳು !
ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮಂಗಳೂರು ವಿ.ವಿ ಕುಲಪತಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಕುಲಸಚಿವ ಡಾ. ಬಿ.ಯಸ್.ನಾಗೇಂದ್ರ ಪ್ರಕಾಶ್ ಸ್ಥಳದಲ್ಲಿ ನಿಂತು ವಿದ್ಯಾರ್ಥಿಗಳನ್ನು ಸಮಾಧಾನಿಸಲು ಮುಂದಾದರೂ, ಕುಲಪತಿಗಳು ಬಾರದೇ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಮಂಗಳೂರು ವಿ.ವಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಸುಮಾರು 20 ನಿಮಿಷಗಳವರೆಗೆ ವಿದ್ಯಾರ್ಥಿಗಳು ಆಡಳಿತ ಸೌಧದ ಎದುರು ಕುಳಿತು ಪಟ್ಟು ಹಿಡಿದ ನಂತರ ಸ್ಥಳಕ್ಕೆ ಕುಲಪತಿ. ಪ್ರೊ.ಕೆ.ಬೈರಪ್ಪ ಭೇಟಿ ನೀಡಿದರು. ಪ.ಜಾತಿ ಮತ್ತು ಪ.ಪಂಗಡದ ವಿದ್ಯಾರ್ಥಿಗಳ ಶೇ.50 ರಷ್ಟು ಬೇಡಿಕೆಗಳನ್ನು ಈಡೇರಿಸಲಾಗಿದೆ. ಇನ್ನೇನು ಆದೇಶ ಹೊರಡಿಸಲಾಗುವುದು. ಉಳಿದ ಮನವಿಯನ್ನು ಚರ್ಚಿಸಿ ಜಾರಿಗೆ ತರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಆದರೆ ಮತ್ತೆ ವಿದ್ಯಾರ್ಥಿಗಳು ಬೇಡಿಕೆಗಳನ್ನು ಹೇಳುತ್ತಿದ್ದಂತೆಯೇ ಕುಲಪತಿಗಳು ವಾಪಸ್ಸು ತೆರಳಿದರು. ಆದರೆ ಕುಲಪತಿಗಳ ಸ್ಪಂಧನೆ ವಿದ್ಯಾರ್ಥಿಗಳಿಗೆ ಸಮಾಧಾನಕರವಾಗಲಿಲ್ಲ.
ಹಕ್ಕೊತ್ತಾಯಗಳು
*ಸಂಶೋಧನಾ ವಿದ್ಯಾರ್ಥಿಗಳ ದಾಖಲಾತಿ ಪ್ರವೇಶಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಾರ್ಗಸೂಚಿ ಕೈಬಿಡಬೇಕು.
*ಮಂಗಳೂರು ವಿವಿಯಲ್ಲಿ ಪೂರ್ಣಕಾಲಿಕ ನೆಲೆಯಲ್ಲಿ ಸಂಶೋಧನೆ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಸಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಐದು ವರ್ಷಗಳ ಅವಧಿಯ ಶಿಷ್ಯವೇತನವನ್ನು ನೀಡುವುದು.
*ವಿವಿಯ ಯೋಗವಿಜ್ಞಾನ ಮತ್ತು ಮಾನವಪ್ರಜ್ಞೆ ವಿಭಾಗದಲ್ಲಿ 2016-17ನೇ ಸಾಲಿನಲ್ಲಿ ಪಿಎಚ್ಡಿ ಸಂಶೋಧನಾ ವಿದ್ಯಾರ್ಥಿಯಾಗಿ ಪ್ರವೇಶ ಪಡೆದು ಪೂರ್ಣಕಾಲಿಕಾ ನೆಲೆಯಲ್ಲಿ ಸಂಶೋಧನೆ ಮಾಡುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದ ರಮೇಶ ಮಾದರ ಅವರಿಗೆ ಮಾಸಿಕ ಸಂಶೋಧನೆ ಶಿಷ್ಯವೇತನ ಮತ್ತು ಲ್ಯಾಪ್ ಟಾಪ್ ನೀಡುವ ಸೌಲಭ್ಯವನ್ನು ಕ್ಷುಲ್ಲಕ ಕಾರಣಕ್ಕೆ ತಡೆಹಿಡಿದಿರುವುದು ವೈಯಕ್ತಿಕವಗಿ ವಿದ್ಯಾರ್ಥಿಗೂ ದಲಿತ ಸಮುದಾಯಕ್ಕೂ ಮಾಡುತ್ತಿರುವ ಪಿತೂರಿ.
*ರಮೇಶ ಮಾದರಿಗೆ ಸಿಗಬೇಕಾದ ಶಿಷ್ಯವೇತನ ಲ್ಯಾಪ್ ಟಾಪ್ ಸೌಲಭ್ಯ ಒದಗಿಸುವವ ಮೂಲಕ ಸಂಶೋಧನೆಗೆ ಸಹಕರಿಸುವುದು.
*2017-18ನೇ ಸಾಲಿನ ವಿವಿಧ ವಿಭಾಗದಲ್ಲಿ ಅಧ್ಯಯನ ನಡೆಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಪಂಗಡದ ಸ್ನಾತಕೋತ್ತರ ವಿದ್ಯಾರ್ಥಿಗಳು ಪಾವತಿಸಿದ ದಾಖಲಾತಿ ಪ್ರವೇಶ ಶುಲ್ಕ ಹಾಗೂ ವಸತಿ ಶುಲ್ಕ ಶೀಘ್ರದಲ್ಲಿಯೇ ಮರುಪಾವತಿಸಬೇಕು.
*ಮುಂದಿನ ಸಾಲಿನಿಂದ ವಿವಿಧ ವಿಭಾಗದಲ್ಲಿ ಅಧ್ಯಯನ ನಡೆಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಪಂಗಡದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ದಾಖಲಾತಿ ಪ್ರವೇಶ ಸಂಬಂಧಿ ಯಾವುದೇ ಶುಲ್ಕವನ್ನು ಪಡೆಯದೆ ಬದಾಗಿ ನೇರವಾಗಿ ಸಮಾಜ ಕಲ್ಯಾಣ ಇಲಾಖೆಯ ಅನುದಾನದಡಿಯಲ್ಲಿವಿಶ್ವವಿದ್ಯಾಲಯ ಪಡೆದುಕೊಳ್ಳುವುದು.
*2017-18ನೇ ಸಾಲಿನ ವಿಸ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಪ್ರಥಮ ವರ್ಷದ ಸ್ನಾತಕ ಪೂರ್ವ ಮತ್ತು ಸ್ನಾತಕೋತ್ತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾಥರ್ಿಗಳಿಗೆ ಕೂಡಲೇ ಲ್ಯಾಪ್ ಟಾಪ್ ವಿತರಿಸಬೇಕು.
*ಲ್ಯಾಪ್ ಟಾಪ್ಪ್ ವಿತರಿಸುವ ಸಂದರ್ಭ ಬರೆಸಿಕೊಳ್ಳುವ ಮುಚ್ಚಳಿಕೆ ಪತ್ರ ರದ್ದುಗೊಳಿಸುವುದು.
*ವಿವಿಯಲ್ಲಿ ಪ್ರತ್ಯೇಕ ವಸತಿ ನಿಲಯ ನಿರ್ಮಿಸಬೇಕು.
*ವಿವಿಯಲ್ಲಿ ದೈಹಿಕ ಶಿಕ್ಷಣ ಬಿಪಿಎಡ್ ಕೋರ್ಸ್ ಮುಂದುವರಿಸಬೇಕು.
*ಕುಂದುಕೊರತೆಗಳ ಕುರಿತಾಗಿ ಪರಿಶಿಷ್ಟ ಜಾತಿ ಮತ್ತು ಪರಿಸಿಷ್ಟ ಪಂಗಡದ ಸಮಾಲೋಚನಾ ಸಭೆ ಆರು ತಿಂಗಳಿಗೊಮ್ಮೆ ಕರೆಯಬೇಕು.
*ವಿವಿ ಆವರಣದಲ್ಲಿಡಾ. ಬಿ.ಆರ್. ಆಂಬೇಡ್ಕರ್ ಭವನ ನಿರ್ಮಾಣ.
*ದಾರ್ಶನಿಕರ ಹುಟ್ಟುಹಬ್ಬ ಆಚರಣೆ ಆಯಾ ದಿನದಲ್ಲೇ ನಡೆಸಬೇಕು.